ವಿಜಯಸಾಕ್ಷಿ ಸುದ್ದಿ, ಗದಗ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ತಪೋವನದಲ್ಲಿ ನಡೆದ ಕರ್ನಾಟಕ ರಾಜ್ಯ ಯೋಗಾಸನ ಚಾಂಪಿಯನ್ಶಿಪ್ ಸ್ಪರ್ಧೆಗಳಲ್ಲಿ ಗದಗ ಜಿಲ್ಲಾ ಯೋಗಾಸನ ಕ್ರೀಡಾ ತಂಡದ ಸದಸ್ಯರು ಉತ್ತಮ ಸಾಧನೆ ಮಾಡಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್ (ರಿ) ಬೆಂಗಳೂರು, ಉತ್ತರ ಕನ್ನಡ ಜಿಲ್ಲಾ ಯೋಗ ಫೆಡರೇಶನ್ (ರಿ) ಶಿರಸಿ ಹಾಗೂ ಯಲ್ಲಾಪುರ ತಾಲೂಕು ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಶನ್ (ರಿ) ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ಪರ್ಧೆಯಲ್ಲಿ ಗದಗ ಜಿಲ್ಲೆಯ ಕ್ರೀಡಾಪಟುಗಳು ವಿವಿಧ ವಯೋಮಿತಿ ವಿಭಾಗಗಳಲ್ಲಿ ಪ್ರಶಸ್ತಿ ಪಡೆದರು.
10-12 ವರ್ಷದ ಬಾಲಕರ ವಿಭಾಗದಲ್ಲಿ ಮಲ್ಲಿಕಾರ್ಜುನ ಅಳಗವಾಡಿ, 16-18 ವರ್ಷದ ಬಾಲಕಿಯರ ವಿಭಾಗದಲ್ಲಿ ನಮ್ರತಾ ವೆರ್ಣೇಕರ, 18-21 ವರ್ಷದ ವಿಭಾಗದಲ್ಲಿ ಪ್ರಶಾಂತ ಗಾಣಿಗೇರ ಹಾಗೂ ಸುಷ್ಮಿತಾ ಮಾರನವಬಸರಿ, 35-45 ವರ್ಷದ ಮಹಿಳೆಯರ ವಿಭಾಗದಲ್ಲಿ ಚೈತ್ರಾ ಸೋಮನಗೌಡ್ರ ವಿಶೇಷ ಸ್ಥಾನ ಪಡೆದು ಗಮನ ಸೆಳೆದರು.
ಗದಗ ಜಿಲ್ಲೆಯಿಂದ ನಿರ್ಣಾಯಕರಾಗಿ ಚೇತನ ಚುಂಚಾ, ಸುಮಂಗಲಾ ಹದ್ಲಿ ಹಾಗೂ ಅನುರಾಧಾ ಶಿರಿಯಣ್ಣವರ ಕಾರ್ಯನಿರ್ವಹಿಸಿದರು. ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್ನ ಕಾರ್ಯಕಾರಿ ಮಂಡಳಿ ಸದಸ್ಯ ಕೆ.ಎಸ್. ಪಲ್ಲೇದ ಸಹ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಸೇವೆ ಸಲ್ಲಿಸಿದರು.
ಇದಲ್ಲದೆ, ಗದಗ ಜಿಲ್ಲೆಯ ಎಸ್.ವೈ.ಬಿ.ಎಂ.ಎಸ್. ಯೋಗಪಾಠಶಾಲೆ ಹಾಗೂ ನಿತ್ಯಂ ಯೋಗ ಕೇಂದ್ರ ತಂಡ ಪ್ರಶಸ್ತಿಯನ್ನು ಪಡೆದು ಜಿಲ್ಲೆಗೆ ಮತ್ತೊಂದು ಗೌರವ ತಂದುಕೊಟ್ಟಿವೆ.
ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳು, ತರಬೇತುದಾರರು, ಪಾಲಕರು ಹಾಗೂ ಸಹಕರಿಸಿದ ಎಲ್ಲರಿಗೂ ಗದಗ ಜಿಲ್ಲಾ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್ ಅಧ್ಯಕ್ಷ ಕೆ.ಎಸ್. ಪಲ್ಲೇದ ಮತ್ತು ಕಾರ್ಯದರ್ಶಿ ಚೇತನ ಚುಂಚಾ ಅಭಿನಂದನೆ ಸಲ್ಲಿಸಿದ್ದಾರೆ.



