ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಕಾರ್ಯ ವೈಖರಿಯಿಂದ ಸರ್ಕಾರದ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಆತ್ಮಹತ್ಯೆ ಗ್ಯಾರೆಂಟಿ ಒಂದೇ ಇರುವುದು ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಅವರು ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜವಾಬ್ದಾರಿ, ಸೂಕ್ಷ್ಮತೆ, ನೈತಿಕತೆ ಮತ್ತು ಮೌಲ್ಯಗಳ ಕಾಳಜಿ ಇಟ್ಟುಕೊಂಡಿರುವ ಪ್ರಾಮಾಣಿಕ ಅಧಿಕಾರಿಗಳು ಇಂದು ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ಸಾಯುವ ಸ್ಥಿತಿ ಬಂದಿದೆ ಎಂದು ತಿಳಿಸಿದರು.
ಕಲಬುರ್ಗಿ ಜಿಲ್ಲೆಯ ಗ್ರಂಥಾಲಯದ ಗ್ರಂಥಪಾಲಕಿ ಭಾಗ್ಯವತಿ ಅವರು 15 ತಿಂಗಳಿಂದ ಗ್ರಂಥಾಲಯದ ದಿನಪತ್ರಿಕೆ ಬಿಲ್ಲನ್ನು ಪಾವತಿಸಿಲ್ಲ, ಕರೆಂಟ್ ಬಿಲ್ಲನ್ನು ಪಾವತಿಸಿಲ್ಲ, ಗ್ರಂಥಾಲಯದಲ್ಲಿ ಕಾರ್ಯವನ್ನು ಮಾಡುವುದಕ್ಕೆ ಯಾವುದೇ ರೀತಿಯ ಸಹಕಾರ ಇಲ್ಲ. ಗ್ರಂಥಪಾಲಕಿ ಪ್ರತಿನಿತ್ಯ ಅನುಭವಿಸುತ್ತಿದ್ದ ಅವಮಾನ ಮತ್ತು ಅಸಹಾÀಯಕತೆಯನ್ನು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡು ಸರ್ಕಾರಕ್ಕೆ ಬಹಳ ಸ್ಪಷ್ಟವಾದ ಸಂದೇಶ ಕೊಟ್ಟಿದ್ದಾರೆ ಎಂದು ವಿವರಿಸಿದರು.
ಲಜ್ಜೆಗೆಟ್ಟ ಈ ಸರ್ಕಾರ ಯಾವ ಜವಾಬ್ದಾರಿ ಇಲ್ಲದೆ ಮನಬಂದಂತೆ ಏನು ಬೇಕಾದರೂ ಮಾಡಿ ಜಯಿಸಬಹುದು; ಯಾವುದರ ಬಗ್ಗೆ ಪರಿಜ್ಞಾನ ಇಲ್ಲದಿದ್ದರೂ ಕಾರ್ಯ ನಿರ್ವಹಿಸುತ್ತಿರುವ ಇಂತಹ ಕೆಟ್ಟ ಸರ್ಕಾರವನ್ನು ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಬಯಲಿಗೆಳೆಯುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ ಎಂದು ತಿಳಿಸಿದರು.