ವಿಜಯಸಾಕ್ಷಿ ಸುದ್ದಿ, ಮುಳಗುಂದ : ಬೇಸಿಗೆ ಶಿಬಿರಗಳು ಮಕ್ಕಳ ಕಲಿಕೆಗೆ ಸಹಕಾರಿಯಾಗಿದೆ ಎಂದು ಬಾಲಲೀಲಾ ಮಾಹಾಂತ ಶಿವಯೋಗಿ ಶಿಕ್ಷಣ ಸಮಿತಿಯ ಅಧ್ಯಕ್ಷ ಎಂ.ಡಿ. ಬಟ್ಟೂರ ಹೇಳಿದರು.
ಅವರು ಪಟ್ಟಣದ ಬಿ.ಸಿ. ಬಂಗಾರಿ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಗದಗ ಐಕಾನ್ ಸಂಸ್ಥೆಯಿಂದ ಜರುಗಿದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸೇವೆ ಸಲ್ಲಿಸಿದ ಶಿಕ್ಷಕ ವೃಂದದವರಿಗೆ ಸನ್ಮಾನಿಸಿ ಮಾತನಾಡಿದರು.
ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣಕ್ಕೆ ಮಹತ್ತರ ಸ್ಥಾನವಿದ್ದು, ಯಾರೂ ಶಿಕ್ಷಣದಿಂದ ವಂಚಿತರಾಗಬಾರದು. ಅದರಲ್ಲೂ ಬೇಸಿಗೆ ಸಮಯದಲ್ಲಿ ಮಕ್ಕಳು ಕಲಿಕೆಯಿಂದ ದೂರ ಉಳಿಯುವುದರಿಂದ ಮುಂದಿನ ಹಂತದ ತರಗತಿಗಳಲ್ಲಿ ಅಭ್ಯಸಿಸುವುದು ಕಷ್ಟಕರವಾಗುತ್ತದೆ. ಈ ಸಮಯದಲ್ಲಿ ಐಕಾನ್ ಸಂಸ್ಥೆಯ ನಾಗರಾಜ ಬಂಡಿ ಬೇಸಿಗೆ ಶಿಬಿರ ಹಮ್ಮಿಕೊಂಡು ಮಕ್ಕಳ ಕಲಿಕೆಗೆ ಸಹಕಾರಿಯಾಗಿದ್ದಾರೆ ಎಂದರು.
ಐಕಾನ್ ಸಂಸ್ಥೆಯ ನಾಗರಾಜ ಬಂಡಿ ಮಾತನಾಡಿ, ಪ್ರತಿಯೊಬ್ಬ ಮಗುವಿನಲ್ಲಿಯೂ ಪ್ರತಿಭೆ ಇರುತ್ತದೆ. ಅದಕ್ಕೆ ಶಿಕ್ಷಕರು, ಪಾಲಕರು, ಸಮಾಜ ಬೆನ್ನು ತಟ್ಟಿದಾಗ ಆ ಮಗು ನಾಡಿಗೆ ಬೆಳಕಾಗುತ್ತದೆ. ಮಕ್ಕಳ ಪ್ರತಿಭೆಗೆ ತಕ್ಕಂತೆ ಕಲಿಕೆಗೆ ಪ್ರೋತ್ಸಾಹಿಸುವುದರಿಂದ ಮಗುವಿನ ಬುದ್ಧಿಮತ್ತೆ ವೃದ್ಧಿಯಾಗುತ್ತದೆ ಎಂದರು.
ಬಿ.ಸಿ. ಬಂಗಾರಿ ಪ್ರಾಥಮಿಕ ಶಾಲೆಯ ಕಾರ್ಯದರ್ಶಿ ಪಿ.ಎ. ವಂಟಕರ, ಪ.ಪಂ ಸದಸ್ಯ ಎಸ್.ಸಿ. ಬಡ್ನಿ ಮಾತನಾಡಿದರು.
ಶಿಕ್ಷಕರಾದ ಉಮಾ ಬ್ಯಾಳಿ, ಜ್ಯೋತಿ ನೀಲಗುಂದ, ಶೀವು ಕೊಂಡಿಕೊಪ್ಪ, ದಾವಲಸಾಬ ಲಾಡಸಾಬನವರ, ಅರುಣ ಆವಿ, ನಿಷಾ ಲಾಡಸಾಬನವರ, ಅಂಜುಮಬಾನು ತಹಸೀಲ್ದಾರ, ಯಾಸೀನ ಕಮತಗಿ, ಈರಮ್ಮಾ ಹಡಪದ, ಶಿವಲೀಲಾ ಕೋರಿ. ಸುಮಾ ಪಾಟೀಲ್, ಪೂಜಾ ಮ್ಯಾಗೇರಿ, ನಿರ್ಮಲಾ ಜತ್ತಿ, ಲಕ್ಷ್ಮಿ, ಪಾಲಕರು, ವಿದ್ಯಾರ್ಥಿಗಳು ಇದ್ದರು.