ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಬರದ ಛಾಯೆ ಆವರಿಸಿದ್ದರೂ ರೈತ ಸಮುದಾಯದ ಸಾಂಪ್ರದಾಯಿಕ ಮಣ್ಣೆತ್ತಿನ ಅಮಾವಾಸ್ಯೆ ಹಬ್ಬವನ್ನು ಪಟ್ಟಣದಲ್ಲಿ ಬುಧವಾರ ಸಂಭ್ರಮ-ಸಡಗರದಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ಪೇಟೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ಕಳೆದ ಎರಡು ದಿನಗಳಿಂದ ಮಣ್ಣಿನ ಎತ್ತುಗಳ ಮೂರ್ತಿಗಳ ಖರೀದಿ ಭರಾಟೆ ಜೋರಾಗಿತ್ತು.
ಬೆಳಗ್ಗೆಯಿಂದಲೇ ಕುಟುಂಬ ಸಮೇತರಾಗಿ ಆಗಮಿಸಿದ ಸಾರ್ವಜನಿಕರು ವಿವಿಧ ಗಾತ್ರ ಹಾಗೂ ಬಣ್ಣಬಣ್ಣದ ಮಣ್ಣೆತ್ತಿನ ಮೂರ್ತಿಗಳನ್ನು ಖರೀದಿಸಿದರು. ಲಕ್ಷ್ಮೇಶ್ವರದ ಕುಂಬಾರರ ಕುಟುಂಬಗಳು ತಯಾರಿಸಿದ ಮಣ್ಣಿನ ಎತ್ತುಗಳಿಗೆ ರಾಜ್ಯದ ವಿವಿಧ ಭಾಗಗಳಿಂದಲೂ ಬೇಡಿಕೆ ಇರುವುದರಿಂದ ಹಬ್ಬಕ್ಕೂ ಮುನ್ನವೇ ಹೆಚ್ಚಿನ ಪ್ರಮಾಣದಲ್ಲಿ ಸಗಟು ಮಾರಾಟ ನಡೆದಿತ್ತು.
ಈ ವರ್ಷ ಮಣ್ಣೆತ್ತಿನ ಮೂರ್ತಿಗಳ ಬೆಲೆಯಲ್ಲೂ ಏರಿಕೆ ಕಂಡುಬಂದಿದೆ. ಹಿಂದೆ ₹20ಕ್ಕೆ ಸಿಗುತ್ತಿದ್ದ ಸಣ್ಣ ಮೂರ್ತಿಗಳು ಈಗ ₹50ಕ್ಕಿಂತ ಹೆಚ್ಚು ಬೆಲೆಗೆ ಮಾರಾಟವಾದವು. ₹50ರಿಂದ ₹1,000ರವರೆಗೆ ವಿವಿಧ ಮಾದರಿಯ ಮೂರ್ತಿಗಳು ಲಭ್ಯವಿದ್ದರೆ, ವಿಶೇಷ ಅಲಂಕಾರದ ದೊಡ್ಡ ಮೂರ್ತಿಗಳು ₹2,000ರವರೆಗೆ ಮಾರಾಟವಾದವು.
ವಿಶೇಷವಾಗಿ ರಾಸಾಯನಿಕ ಬಣ್ಣಗಳ ಬದಲಿಗೆ ಪರಿಸರ ಸ್ನೇಹಿ ಬಣ್ಣಗಳಿಂದ ತಯಾರಿಸಿದ ಮಣ್ಣಿನ ಎತ್ತುಗಳಿಗೆ ಈ ಬಾರಿ ಹೆಚ್ಚು ಬೇಡಿಕೆ ಕಂಡುಬಂದಿದ್ದು, ಇಷ್ಟದ ಮೂರ್ತಿಗಳನ್ನು ಖರೀದಿಸಲು ಗ್ರಾಹಕರ ನಡುವೆ ಪೈಪೋಟಿಯೂ ಕಂಡುಬಂತು.
ಮಣ್ಣೆತ್ತಿನ ಅಮಾವಾಸ್ಯೆ ಅಂಗವಾಗಿ ರೈತರು ಮಾತ್ರವಲ್ಲದೆ ಪಟ್ಟಣದ ಅನೇಕ ಕುಟುಂಬಗಳು ಮಣ್ಣಿನ ಎತ್ತುಗಳನ್ನು ಮನೆಗೆ ಕೊಂಡೊಯ್ದು ವಿಶೇಷ ಪೂಜೆ ಸಲ್ಲಿಸಿ ಸಂಪ್ರದಾಯಬದ್ಧವಾಗಿ ಹಬ್ಬ ಆಚರಿಸಿದರು. ಕೃಷಿ ಬದುಕಿನ ಅವಿಭಾಜ್ಯ ಅಂಗವಾದ ಎತ್ತುಗಳಿಗೆ ಕೃತಜ್ಞತೆ ಸಲ್ಲಿಸುವ ಸಂಸ್ಕೃತಿ ಇಂದಿಗೂ ಜೀವಂತವಾಗಿರುವುದು ಹಬ್ಬದ ವಿಶೇಷತೆಯಾಗಿದೆ.



