ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪದ ಲಿಂ. ಡಾ. ಎಸ್.ಎಫ್. ಹಿರೇಮಠ ಅವರು ರೋಗಿಗಳ ನಾಡಿಮಿಡಿತದಿಂದಲೇ ರೋಗವನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡುವ ಅಪರೂಪದ ಕಲೆ ಹೊಂದಿದ್ದರು. ವಿಷಜಂತುಗಳ ಕಡಿತಕ್ಕೊಳಗಾದ ರೋಗಿಗಳನ್ನೂ ಗುಣಪಡಿಸುತ್ತಿದ್ದ ಅವರು ಈ ಭಾಗದ ನಡೆದಾಡುವ ವೈದ್ಯ ದೇವರೆಂದೇ ಪ್ರಖ್ಯಾತಿ ಹೊಂದಿದ್ದರು ಎಂದು ಬನ್ನಿಕೊಪ್ಪದ ಬೃಹನ್ಮಠ ಹಾಗೂ ಮೈಸೂರಿನ ಜಪದಕಟ್ಟೆ ಅರಮನೆಯ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಲಿಂ. ಡಾ. ಎಸ್.ಎಫ್. ಹಿರೇಮಠ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ರಕ್ತದಾನ ಹಾಗೂ ಉಚಿತ ವೈದ್ಯಕೀಯ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿ ವರ್ಷವೂ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ. ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ಹಿತದೃಷ್ಟಿಯಿಂದ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸುವ ಮೂಲಕ ಲಿಂ. ಡಾ. ಹಿರೇಮಠ ಅವರಿಗೆ ಗೌರವ ಸಲ್ಲಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ವಿರುಪಾಪುರದ ಸ್ವಾಮೀಜಿ ಹಾಗೂ ಬೆಳ್ಳಟ್ಟಿಯ ಬಸವರಾಜ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಶಾಸಕ ಡಾ. ಚಂದ್ರು ಲಮಾಣಿ, ಶಿವಪ್ರಕಾಶ ಮಹಾಜನಶೆಟ್ಟರ, ಕೊಟ್ರಯ್ಯ ಹೊಂಬಾಳಿಮಠ, ಬಾಬಣ್ಣ ಕಲಾಲ, ಜಂಬಯ್ಯ ಹಿರೇಮಠ, ವೈ.ಬಿ. ಹೊಸೂರ, ಆರ್.ಆರ್. ಗಡ್ಡದ್ದೇವರಮಠ, ಡಾ. ಪ್ರಕಾಶ ಹೊಸಮನಿ, ಡಾ. ಶಂಭು ಪುರದ, ಡಾ. ಪ್ರಭುಗೌಡರ, ತಿಮ್ಮರಡ್ಡಿ ಮರಡ್ಡಿ, ಮೋಹನ ಗುತ್ತೆಮ್ಮನವರ, ಮಹೇಶ ಬಡ್ನಿ, ಶಂಕರ ಮೇಟಿ, ಶಂಭು ಮಠದ, ಎಂ.ಸಿ. ಮರಡೂರಮಠ, ಅಶೋಕ ಹಿರೇಹೊಳಿ, ಗಿರೀಶ ಕೊಡಬಾಳ, ಅಶೋಕ ನಾವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಲಿಂ. ಡಾ. ಎಸ್.ಎಫ್. ಹಿರೇಮಠ ಅವರು ಹೊಂದಿದ್ದ ವೈದ್ಯಕೀಯ ಸೇವಾ ಮನೋಭಾವ ಮತ್ತು ಅಪರೂಪದ ಚಿಕಿತ್ಸಾ ಕಲೆ ಇಂದಿನ ಪೀಳಿಗೆಗೆ ಆದರ್ಶವಾಗಿದೆ. ಅವರ ಸ್ಮರಣಾರ್ಥ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ.
ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ



