ಕಾರವಾರ:- ಪದ್ಮಶ್ರೀ ಪುರಸ್ಕೃತ ವೃಕ್ಷಮಾತೆ ತುಳಸಿ ಗೌಡ ವಿಧಿವಶರಾಗಿದ್ದಾರೆ.
87 ವಯಸ್ಸಿನ ತುಳಸಿಗೌಡ ಅವರು,ಅನಾರೋಗ್ಯದಿಂದ ನಿಧನರಾದರು. ತಮ್ಮ ಇಳಿ ವಯಸ್ಸಿನಲ್ಲಿಯೂ ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ತುಳಸಿ ಗೌಡ, ಸಾಲು ಸಾಲು ಗಿಡ ನೆಟ್ಟು ಪೋಷಿಸಿದ ಹಿರಿಮೆ ಇವರಿಗಿದೆ.
ಲಕ್ಷಾಂತರ ಮರಗಳನ್ನು ನೆಟ್ಟು ಪೋಷಿಸಿದ ಮಹಾತಾಯಿ ತುಳಸಿ ಗೌಡ ಇಹಲೋಕ ತ್ಯಜಿಸಿದ್ದಾರೆ. ಇನ್ನು ಈ ಕಾಲದಲ್ಲಿ ಈಕೆಯನ್ನು ನಿಜವಾದ ಪರಿಸರ ಪ್ರೇಮಿ ಎಂದೇ ಕರೆಯಬಹುದು.
ಬಡಕುಟುಂಬದಲ್ಲಿ ಜನಿಸಿದ ಈ ವೃಕ್ಷಮಾತೆ ಕಟ್ಟಿಗೆ ಸಂಗ್ರಹಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಅಲ್ಲದೇ ಮತ್ತಿಘಟ್ಟ ಅರಣ್ಯ ನರ್ಸರಿಯಲ್ಲಿ ಸೇವೆ ಮಾಡಿ ನಿವೃತ್ತರಾದರೂ ಈಗಲೂ ಅಲ್ಲಿಗೆ ಹೋಗಿ ಯುವಕರಿಗೆ ತರಬೇತಿ, ಮಾರ್ಗದರ್ಶನ ನೀಡುತ್ತಾರೆ. ಇನ್ನು ತುಳಸಿ ಗೌಡ ಕಳೆದ ಆರು ದಶಕಗಳಿಂದ ಈ ಕೆಲಸವನ್ನು ಯಾವುದೇ ಪ್ರತಿಫಲ, ನಿರೀಕ್ಷೆ ಇಲ್ಲದೆ ಮಾಡುತ್ತಿದ್ದರಂತೆ.
ತುಳಸಿ ಅವರು ಜನಿಸಿದ್ದು ಬಡತನದಿಂದ ಬಳಲುತ್ತಿದ್ದ ಹಾಲಕ್ಕಿ ಬುಡಕಟ್ಟು ಕುಟುಂಬದಲ್ಲಿ. ಅವರು ಕೇವಲ ಎರಡು ವರ್ಷದಲ್ಲಿದ್ದಾಗ ಅವರ ತಂದೆ ಸಾವನ್ನಪ್ಪಿದರು. ಬಳಿಕ ಶಿಕ್ಷಣದಿಂದಲೇ ವಂಚಿತರಾದ ತುಳಸಿ ಗೌಡ ತನ್ನ ತಾಯಿಯೊಂದಿಗೆ ಕೂಲಿ ಕೆಲಸದ ಹಾದಿಯನ್ನು ಹಿಡಿದರು. ತುಳಸಿ ಚಿಕ್ಕ ವಯಸ್ಸಿನಲ್ಲಿಯೇ ಗೋವಿಂದ ಗೌಡ ಅವರನ್ನು ವಿವಾಹವಾದರು. ಆದರೆ ಅವರು ಕೂಡಾ ಕೆಲವೇ ವರ್ಷಗಳಲ್ಲಿ ನಿಧನರಾದರು. ಆದರೆ ಈ ಎಲ್ಲಾ ಆಘಾತಗಳನ್ನು ಎದುರಿಸಿದ ತುಳಸಿ ಗೌಡ ಇಂದು ಇಡೀ ವಿಶ್ವಕ್ಕೆ ಮಾದರಿ ಮಹಿಳೆಯಾಗಿದ್ದಾರೆ.