ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಹೊತ್ತಿಕೊಂಡ ಬೆಂಕಿಯಿಂದ ಫಲಭರಿತ 20ಕ್ಕೂ ಹೆಚ್ಚು ತೆಂಗಿನ ಮರ, 25ಕ್ಕೂ ಹೆಚ್ಚು ನೇರಳೆ ಹಣ್ಣಿನ ಮರಗಳು ಸೇರಿ ಇತರೆ ಗಿಡಗಳು ಸುಟ್ಟು ಕರಕಲಾದ ಘಟನೆ ಮುನಿಯನ ತಾಂಡಾ ಹತ್ತಿರದ ತೋಟಕ್ಕೆ ಸೋಮವಾರ ಮಧ್ಯಾಹ್ನ ಜರುಗಿದೆ.
ಲಕ್ಷ್ಮೇಶ್ವರ ಪಟ್ಟಣದ ಪ್ರಗತಿಪರ ರೈತ ಚನ್ನಬಸಪ್ಪ ಜಗಲಿ ಅವರಿಗೆ ಸೇರಿದ ತೋಟ ಇದಾಗಿದೆ.
ಬೇಸಿಗೆ ಬಿಸಿಲಿಂದ ತೋಟದಲ್ಲಿನ ಒಣ ಹುಲ್ಲಿಗೆ ಹೊತ್ತಿ ಉರಿಯುತ್ತಿರುವುದನ್ನು ಕಂಡ ತೋಟದಲ್ಲಿಯೇ ಇದ್ದ ಹತ್ತಾರು ಕೂಲಿಯಾಳುಗಳು ಬೋರ್ವೆಲ್ ನೀರಿನಿಂದ ಬೆಂಕಿ ಆರಿಸಲು ಹೆಣಗಾಡಿದ್ದಾರೆ.
ಸುದ್ದಿ ತಿಳಿದು ತೋಟಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದರಾದರೂ ಅಗ್ನಿಶಾಮಕ ವಾಹನ ತೋಟದೊಳಗೆ ಹೋಗಲು ದಾರಿಯಿರಲಿಲ್ಲ. ಹರಸಾಹಸ ಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟು 36 ಎಕರೆ ತೋಟದಲ್ಲಿ ತೆಂಗು, ತೇಗ, ಮಾವು ಹತ್ತಾರು ಜಾತಿಯ ಸಾವಿರಾರು ಮರಗಳಿದ್ದು ಹೆಚ್ಚಿನ ಹಾನಿ ತಪ್ಪಿದಂತಾಗಿದೆ.
ಆಕಸ್ಮಿಕ ಬೆಂಕಿ, ಮಳೆ-ಗಾಳಿ ಸೇರಿ ಪ್ರಾಕೃತಿಕ ವಿಕೋಪದಿಂದ ಬೆಳೆಹಾನಿಯಾಗಿ ರೈತರು ಸಾಕಷ್ಟು ತೊಂದರೆಗೆ ಸಿಲುಕಿದ್ದರೂ ಸರ್ಕಾರ ಇಂತಹ ರೈತರಿಗೆ ಕಿಂಚಿತ್ತಾದರೂ ಸಹಾಯ ನೀಡದಿರುವುದು ಖೇದಕರ ಸಂಗತಿ.
ಕಳೆದ ವರ್ಷವೂ ಅತಿಯಾದ ಮಳೆ-ಗಾಳಿಗೆ ನೂರಾರು ತೆಂಗಿನ ಮರಗಳು ನೆಲಕ್ಕುರುಳಿ ಹಾನಿಯಾಗಿತ್ತು. ಈ ವೇಳೆ ತೋಟಗಾರಿಕೆ ಅಧಿಕಾರಿಗಳು ಪರಿಶೀಲನೆ ಮಾಡಿದ್ದರು. ಆದರೆ ಇದುವರೆಗೂ ನಯಾಪೈಸೆ ಬೆಳೆಹಾನಿ ಪರಿಹಾರ ಬಂದಿಲ್ಲ. ಯಾರಿಗೆ ಹೇಳಿದರೂ ಏನೂ ಪ್ರಯೋಜನವಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.