ʻಮಾನ್ಯ ಮತದಾರ ಬಾಂಧವರಲ್ಲಿ ವಿನಂತಿ……
ವಿಜಯಸಾಕ್ಷಿ ಸುದ್ದಿ, ನರಗುಂದ
ನರಗುಂದ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆರ್ ಎನ್. ಪಾಟೀಲ್ ಇವರು ತಮ್ಮ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಪೂರ್ವಾನುಮತಿಯಿಲ್ಲದೇ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವ ಪೋಸ್ಟ್ನ್ನು ಹಂಚಿಕೊಂಡ ಬಗ್ಗೆ ದೂರು ದಾಖಲಾಗಿದೆ.
ಮೇ.2ರ ಸಾಯಂಕಾಲ 6.45ಕ್ಕೆ ಆರ್.ಎನ್ ಪಾಟೀಲರು ʻಮಾನ್ಯ ಮತದಾರ ಬಾಂಧವರಲ್ಲಿ ವಿನಂತಿ. 10-5-2023, ಬುಧವಾರ ನಡೆಯಲಿರುವ ಚುನಾವಣೆಯಲ್ಲಿ ಜಾತ್ಯಾತೀತ ಜನತಾದಳ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ…ʼಎಂಬ ಸಂದೇಶವನ್ನು ಹಂಚಿಕೊಂಡಿದ್ದರು.
ಸದರಿ ಪೋಸ್ಟನ್ನು ಚುನಾವಣಾಧಿಕಾರಿಗಳಿಂದ ಯಾವುದೇ ಪೂರ್ವಾನುಮತಿ ಇಲ್ಲದೇ ಹಂಚಿಕೊಂಡ ಬಗ್ಗೆ ಜಿಲ್ಲಾಧಿಕಾರಿಗಳು, ಚುನಾವಣಾಧಿಕಾರಿಗಳು ಗದಗ ಹಾಗೂ ಮಾಧ್ಯಮ ಪ್ರಮಾಣಿಕರ ಮತ್ತು ಕಣ್ಗಾವಲು ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಮಾಹಿತಿ ನೀಡಿದ್ದರು.
ನರಗುಂದ ಮತಕ್ಷೇತ್ರದ ಚುನಾವಣಾಧಿಕಾರಿಗಳ ಉಲ್ಲೇಖಿತ ಪತ್ರದನ್ವಯ ಸದರಿ ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳುವಂತೆ ಚುನಾವಣಾಧಿಕಾರಿ ಎ.ಎಸ್.ಕಣವಿ ದೂರು ನೀಡಿದ್ದರು.
ನೀತಿ ಸಂಹಿತೆ ಉಲ್ಲಂಘನೆಯ ಕುರಿತು ಆರ್.ಎನ್ ಪಾಟೀಲರ ಮೇಲೆ ಅಪರಾಧ: 0079/2023, ಐಪಿಸಿ ಸೆಕ್ಷನ್ 1860, ಕಲಂ 171(ಎಚ್) ರಂತೆ ನರಗುಂದ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.