ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಟಗಾರರ ಸಂಬಂಧಿಕರ ಜೊತೆಗೆ ಹಣ ಪಡೆಯುತ್ತಿದ್ದಾಗ ಧಾಬಾ ಮೇಲೆ ಲೋಕಾಯುಕ್ತರ ದಾಳಿ………
ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ
ಐಪಿಎಲ್ ಕ್ರಿಕೆಟ್ ಫಲಿತಾಂಶದ ಮೇಲೆ ಬೆಟ್ಟಿಂಗ್ ಅಡಿ ಸಿಕ್ಕಿಬಿದ್ದ ಆರೋಪಿಗಳ ಸಂಬಂಧಿಕರ ಜೊತೆಗೆ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ, ಪಿಎಸ್ಐ, ಇಬ್ಬರು ಪೊಲೀಸರನ್ನು ವಶಕ್ಕೆ ಪಡೆದ ಘಟನೆ ಜರುಗಿದೆ.
ಗಜೇಂದ್ರಗಡ ಪಟ್ಟಣದ ಕುಷ್ಟಗಿ ರಸ್ತೆಯಲ್ಲಿ ಇರುವ ಸುಖಸಾಗರ ಧಾಬಾವೊಂದರಲ್ಲಿ ಸೋಮವಾರ ಸಂಜೆ ಪೇದೆಯೊಬ್ಬರು ಒಂದು ಲಕ್ಷ ರೂ. ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.
ಶರಣಪ್ಪ ಭಜಂತ್ರಿ ಎಂಬ ಪೊಲೀಸನನ್ನು, ವಿನಾಯಕ ಜರತಾರಿ ಎಂಬುವರಿಂದ ಒಂದು ಲಕ್ಷ ಹಣ ಪಡೆಯುವಾಗ ಲೋಕಾಯುಕ್ತರು ರೆಡ್ ಹ್ಯಾಂಡ್ ಹಿಡಿದಿದ್ದಾರೆ.
ಏಪ್ರಿಲ್ 23 ರಂದು ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡೆದ ಐಪಿಎಲ್ ಪಂದ್ಯದಲ್ಲಿ ಒಂದು ಸಾವಿರಕ್ಕೆ ಎರಡು ಸಾವಿರ ಹಣ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಚೀಟಿಯಲ್ಲಿ ಬರೆದುಕೊಟ್ಟ ಹಾಗೂ ತಮ್ಮ ಮೊಬೈಲ್ ನಲ್ಲಿ ಆನ್ ಲೈನ್ ಆ್ಯಪ್ ನಲ್ಲಿ ಬೆಟ್ಟಿಂಗ್ ಆಡುತ್ತಿದ್ದಾಗ ಹರೀಶ್ ಪರಶುರಾಮ ದಲಬಂಜನ್ ಹಾಗೂ ಸಂತೋಷ ತಂದೆ ವಿರುಪಾಕ್ಷಸಾ ಜರತಾರಿ ಎಂಬಿಬ್ಬರನ್ನು ಗಜೇಂದ್ರಗಡ ಪೊಲೀಸರು ಬಂಧಿಸಿದ್ದರು.
ಬಂಧಿತರಿಂದ ನಗದು 2500ರೂ.ಹಣ ಹಾಗೂ ಮೊಬೈಲ್ ಜಪ್ತಿ ಮಾಡಿದ್ದರು.
ಆ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ 0054/2023 ಕಲಂ-78[1][ಎ][4][6]ಕೆ.ಪಿ ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೇಷನ್ ಬೇಲ್ ಮೇಲೆ ಆರೋಪಿಗಳನ್ನು ಬಿಡುಗಡೆ ಮಾಡುವಾಗ ಪಿಎಸ್ಐ ರಾಘವೇಂದ್ರ, ಪೇದೆಗಳಾದ ಶರಣಪ್ಪ ಭಜಂತ್ರಿ ಹಾಗೂ ಕುರಿ ಎಂಬುವರು
ಎರಡು ಲಕ್ಷ ರೂ. ಹಣ ಡೀಮ್ಯಾಂಡ್ ಮಾಡಿದ ಬಗ್ಗೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ವಿನಾಯಕ ಜರತಾರಿ ಎಂಬುವರು ದೂರು ನೀಡಿದ್ದರು.
ದೂರು ಆಧರಿಸಿ ಸೋಮವಾರ ಸಂಜೆ ಗಜೇಂದ್ರಗಡ ರಸ್ತೆಯ ಸುಖಸಾಗರ ಧಾಬಾದ ಮೇಲೆ ದಾಳಿ ಮಾಡಿ ಒಂದು ಲಕ್ಷ ರೂ. ಹಣ ಪಡೆಯುತ್ತಿದ್ದ ಶರಣಪ್ಪ ಭಜಂತ್ರಿ ಎಂಬ ಪೇದೆಯನ್ನು ಹಿಡಿದಿದ್ದಾರೆ. ನಂತರ ಕುರಿ ಹಾಗೂ ಪಿಎಸ್ಐ ರಾಘವೇಂದ್ರ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಲೋಕಾಯುಕ್ತ ಎಸ್ಪಿ ಸತೀಶ್ ಚಿಟಗುಪ್ಪಿ, ಡಿವೈಎಸ್ಪಿ ಶಂಕರ ಎಮ್ ರಾಗಿ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರಗಳಾದ ರವಿ ಪುರುಷೋತ್ತಮ್, ಅಜೀಜ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.
ಸಿಬ್ಬಂದಿಗಳಾದ ಎಸ್ ಎಸ್ ಅಮರಶೆಟ್ಟಿ, ಮಂಜುನಾಥ್ ಗಾರ್ಗಿ, ಲಕ್ಕನಗೌಡರ್, ಮುತ್ತುರೆಡ್ಡಿ ಬಾರಡ್ಡಿ, ಗುಬ್ಬಿ, ಅಯ್ಯನಗೌಡರ, ವಿರೂಪಾಕ್ಷ ಅರಿಷಿಣದ ಹಾಗೂ
ವಾಹನ ಚಾಲಕರಾದ ನೈನಾಪೂರ ಹಾಗೂ ಹೆಬ್ಬಳ್ಳಿ ಈ ಕಾರ್ಯಾಚರಣೆಯಲ್ಲಿ ಇದ್ದರು.