ಸಕ್ಕರೆ ಕಾರ್ಖಾನೆ ಜವಳಿ ಪಾರ್ಕ ಮಂಜೂರಾತಿ – ಇಮ್ಮಡಿಯಾದ ರೈತರ ಉತ್ಸಾಹ
ವಿಜಯಸಾಕ್ಷಿ ಸುದ್ದಿ, ನವಲಗುಂದ
ಕ್ಷೇತ್ರದ ತುಪ್ಪರಿಹಳ್ಳ ವ್ಯಾಪ್ತಿಯಲ್ಲಿ ಕಬ್ಬು ಬೆಳೆಗಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಹಾಗೂ ನಿರುದ್ಯೋಗಿ ಯುವಕರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿಯ ಉದ್ದೇಶದಿಂದ ದಾವಣಗೇರಿಯ ಶ್ಯಾಮನೂರ ಪ್ರೈವೆಟ್ ಕಂಪನಿಗೆ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಮಂಜೂರಾತಿ ನೀಡಲಾಗಿದೆ ಎಂದು ಕಬ್ಬು, ಸಕ್ಕರೆ ಹಾಗೂ ಜವಳಿ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದರು.
ಈ ಕುರಿತು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾಹಿತಿ ನೀಡಿದ ಅವರು, ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಅನುಮತಿ ನೀಡಲಾಗಿದೆ. ಜೊತೆಗೆ ಜವಳಿ ಪಾರ್ಕ ನಿರ್ಮಾಣಕ್ಕೂ ಮಂಜೂರಾತಿ ನೀಡಲಾಗಿದ್ದು ಇದರಿಂದಾಗಿ ಸುಮಾರು 10 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿದರು.
ಸಕ್ಕರೆ ಕಾರ್ಖಾನೆ ಮಂಜೂರಾತಿಯಿಂದಾಗಿ ಈ ಭಾಗದಲ್ಲಿ ಕಬ್ಬು ಬೆಳೆಯುವ ರೈತರಿಗೆ ಅನುಕೂಲವಾಗಲಿದೆ. ಜೊತೆಗೆ ಎಥೆನಾಲ್ ಘಟಕವನ್ನು ಪ್ರಾರಂಭಿಸುವುದರಿಂದ ಸಕ್ಕರೆ ಕಾರ್ಖಾನೆಗಳಿಗೆ ಮಾರುಕಟ್ಟೆಗೆ ಸಮಸ್ಯೆಯಾಗುವುದಿಲ್ಲ. ಎಥೆನಾಲ್ ಮಿಶ್ರಿತ ಪೆಟ್ರೋಲ್ ತಯಾರಿಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದರಿಂದ ಶೀಘ್ರದಲ್ಲಿಯೇ ಕಾರ್ಖಾನೆ ಪ್ರಾರಂಭವಾಗಲಿದೆ.
ಕಾರ್ಖಾನೆಗಳು ಬರೀ ಸಕ್ಕರೆಯನ್ನಷ್ಟೇ ಉತ್ಪಾದಿಸುವುದರಿಂದ ಹೆಚ್ಚಿನ ಲಾಭ ಬರುವುದಿಲ್ಲ. ಮಾರುಕಟ್ಟೆಯಲ್ಲಿ ಸಕ್ಕರೆಯ ದರ ಇಳಿಕೆಯಾದರೆ ಉತ್ಪಾದಿಸಿದ ಸಕ್ಕರೆಯನ್ನು ಶೇಖರಣೆ ಮಾಡಿಕೊಳ್ಳಬೇಕು, ದಾಸ್ತಾನಾಗಿದ್ದ ಸಕ್ಕರೆ ಮಳೆ ಗಾಳಿಗೆ ಹಾನಿಯಾಗಿ ನಷ್ಟ ಅನುಭವಿಸಬೇಕಾಗುತ್ತದೆ. ಇದರಿಂದಾಗಿ ರೈತರಿಗೂ ಸಕಾಲದಲ್ಲಿ ದುಡ್ಡು ಕೊಡಲು ಸಾಧ್ಯವಾಗುವುದಿಲ್ಲ. ಇದರ ಬದಲಾಗಿ ಎಥೆನಾಲ್ ಉತ್ಪಾದಿಸಿದರೆ ಕೇಂದ್ರ ಸರ್ಕಾರದಿಂದ ಸಾಲ ಸೇರಿದಂತೆ ವಿವಿಧ ಸೌಲಭ್ಯಗಳು ಸಿಗುತ್ತವೆ ಎಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯಶ್ರೀ ಜಹಗೀರದಾರ, ತಹಸೀಲ್ದಾರ್ ಅನಿಲ ಬಡಿಗೇರ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಾಜಶೇಖರ ಬಿಜಾಪೂರ, ಅಣ್ಣಿಗೇರಿ ತಹಸೀಲ್ದಾರ್ ಬ್ರಹ್ಮರಾಂಭಾ ಗುಬ್ಬಿಶೆಟ್ಟಿ ಉಪಸ್ಥಿತರಿದ್ದರು.
ಹೊಟ್ಟೆ ಕಿಚ್ಚು ಪಡುವವರಿಗೆ ಮದ್ದಿಲ್ಲ – ಸಚಿವ ಮುನೇನಕೊಪ್ಪ
ರೈತರ ದಶಕಗಳ ಕನಸಾಗಿದ್ದ ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಡಿ.ಪಿ.ಆರ್. ಗೆ ಅನುಮೋದನೆ ನೀಡಿದೆ, ಸುಪ್ರೀಂ ಕೋರ್ಟ ವಕೀಲರೆ ಬಂದು ಡಿ.ಪಿ.ಆರ್ ಸರಿಯಾಗಿದೆ ಎಂದು ಹೇಳಿದರೂ ವಿರೋಧ ಪಕ್ಷಗಳು ಇದು ಸರಿಯಿಲ್ಲವೆಂದು ವಿರೋಧ ವ್ಯಕ್ತಪಡಿಸುತ್ತಾರೆ. ಆದರೆ ನಮಗೆ ಬದ್ಧತೆ ಇರುವುದರಿಂದ ಮಹದಾಯಿ ನೀರನ್ನು ಮಲಪ್ರಭೆಗೆ ತಂದೆ ತರುತ್ತೇವೆ, ಇನ್ನು ಸಕ್ಕರೆ ಕಾರ್ಖಾನೆ, ಜವಳಿ ಪಾರ್ಕ ನಿರ್ಮಾಣಕ್ಕೆ ಮಂಜೂರಾತಿ ಪಡೆದು 10 ಸಾವಿರ ರೈತನ ಮಕ್ಕಳಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಭರವಸೆ ನೀಡಿದರೂ ವಿರೋಧ ಪಕ್ಷಗಳು ನಂಬದೇ ಹತಾಶೆ ಭಾವನೆ ವ್ಯಕ್ತಪಡಿಸುತ್ತಾರೆ.
ತುಪ್ಪರಿಹಳ್ಳದ ಹೂಳೆತ್ತುವ ಕಾಮಗಾರಿಗೆ ರೂ,150 ಕೋಟಿ ಬಿಡುಗಡೆ ಮಾಡಿಸಿ ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಿಸುತ್ತೇವೆಂದರೂ ಹೊಟ್ಟೆ ಕಿಚ್ಚು ಪಡುವವರಿಗೆ ಮದ್ದಿಲ್ಲವೆಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಖಾರವಾಗಿಯೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.