ವಿಜಯಸಾಕ್ಷಿ ಸುದ್ದಿ, ರೋಣ: ಶಾಸಕ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ತಾಲೂಕು ಕಟ್ಟಡ ಮತ್ತು ಕೂಲಿ ಕಾರ್ಮಿಕರ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹಕ್ಕೊತ್ತಾಯ ಪ್ರತಿಭಟನೆ ಹಾಗೂ ಬೃಹತ್ ಮೆರವಣಿಗೆ ನೂರಾರು ಕಾರ್ಮಿಕರ ಭಾಗವಹಿಸುವಿಕೆಯಿಂದ ಗಮನ ಸೆಳೆಯಿತು.
ಪಟ್ಟಣದ ಸಿದ್ದಾರೂಢ ಮಠದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಗೆ ವಿವಿಧ ಮಠಾಧೀಶರು ಹಾಗೂ ದರ್ಗಾದ ಅಜ್ಜನವರು ಚಾಲನೆ ನೀಡಿದರು. ಸಚಿವ ಸಂಪುಟದಲ್ಲಿ ಈ ಬಾರಿ ಜಿ.ಎಸ್. ಪಾಟೀಲರಿಗೆ ಸ್ಥಾನ ನೀಡಲೇಬೇಕು ಎಂದು ಕಾರ್ಮಿಕರು ಘೋಷಣೆಗಳನ್ನು ಕೂಗಿ ಒತ್ತಾಯಿಸಿದರು.
ಮೆರವಣಿಗೆಯು ಸೂಡಿ ವೃತ್ತ, ಮುಲ್ಲಾನ ಭಾವಿ ಮಾರ್ಗವಾಗಿ ಪೋತರಾಜನ ಕಟ್ಟೆ ತಲುಪಿದ ವೇಳೆ ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಜಿ.ಎಸ್. ಪಾಟೀಲರಿಗೆ ಕೊಟ್ಟ ಮಾತಿನಂತೆ ಸಚಿವ ಸ್ಥಾನ ನೀಡಬೇಕು. ಇಲ್ಲವಾದಲ್ಲಿ ಮುಂದಿನ ಚುನಾವಣೆಗಳಲ್ಲಿ ಮತದಾನ ಬಹಿಷ್ಕರಿಸುವ ಬಗ್ಗೆ ಚಿಂತನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದರು.
ವಿಷ ಸೇವನೆ ಯತ್ನ; ಕೆಲಕಾಲ ಉದ್ವಿಗ್ನತೆ
ಪ್ರತಿಭಟನೆ ಪೋತರಾಜನ ಕಟ್ಟೆ ತಲುಪುತ್ತಿದ್ದಂತೆ ಶಾಸಕ ಜಿ.ಎಸ್. ಪಾಟೀಲರ ಅಭಿಮಾನಿಗಳಾದ ಸಂಗಪ್ಪ ಜಿಡ್ಡಿಬಾಗಿಲ, ಶಾಭಾಜ್ ಗದಗಕರ್ ಹಾಗೂ ದಾವಲಸಾಬ ಬಾಡಿನ ಅವರು ಕ್ರಿಮಿನಾಶಕ ಸೇವಿಸಲು ಮುಂದಾದ ಘಟನೆ ಕೆಲಕಾಲ ಉದ್ವಿಗ್ನ ವಾತಾವರಣ ಸೃಷ್ಟಿಸಿತು.
“ರೋಣ ಮತಕ್ಷೇತ್ರಕ್ಕೆ ನಿರಂತರ ಅನ್ಯಾಯವಾಗುತ್ತಿದೆ. ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಜಿ.ಎಸ್. ಪಾಟೀಲರು ಪಕ್ಷವನ್ನು ಬಲಪಡಿಸಲು ಅಪಾರ ಶ್ರಮವಹಿಸಿದ್ದಾರೆ. ಆದರೂ ಸಚಿವ ಸ್ಥಾನ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ ಅಭಿಮಾನಿಗಳು ವಿಷ ಸೇವಿಸಲು ಮುಂದಾದರು. ಕೂಡಲೇ ಪಕ್ಷದ ಮುಖಂಡರು ಮಧ್ಯಪ್ರವೇಶಿಸಿ ಅವರನ್ನು ಸಮಾಧಾನಪಡಿಸಿ ಕ್ರಿಮಿನಾಶಕವನ್ನು ವಶಪಡಿಸಿಕೊಂಡರು.
ಪ್ರತಿಭಟನೆಯ ಬಳಿಕ ಶ್ರೀಗಳು ಹಾಗೂ ಕಾರ್ಯಕರ್ತರು ಪೋತರಾಜನ ಕಟ್ಟೆ ಸಮೀಪದ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಜರತ್ ಸುಲೇಮಾನ್ ಶಾವಲಿ ಅಜ್ಜನವರು, ಶಿವಮುನಿ ಶ್ರೀಗಳು, ಮರುಳ ಸಿದ್ದೇಶ್ವರ ಶ್ರೀಗಳು, ದಿವಾನ್ ಶರೀಫ್ ಶ್ರೀಗಳು, ಬಸವರಾಜ ಶರಣರು, ಹುಚ್ಚಯ್ಯ ಶ್ರೀಗಳು, ವಿಶ್ವನಾಥ ಶ್ರೀಗಳು, ಗದಿಗೇಪ್ಪ ಕಿರೇಸೂರ, ಯೂಸುಫ್ ಇಟಗಿ, ಬಾವಾಸಾಬ ಬಟಗೇರಿ, ಆನಂದ ಚಂಗಳಿ, ದುರ್ಗಪ್ಪ ಹಿರೇಮನಿ, ಮಲೀಕ ಯಲಿಗಾರ, ಹನ್ಮಂತಪ್ಪ ತಳ್ಳಿಕೇರಿ, ಅಸ್ಲಂ ಕೊಪ್ಪಳ, ಬಶೀರ ಕಟ್ಟಿಮನಿ, ಮೌನೇಶ ಹಾದಿಮನಿ, ಮಕ್ತುಂಸಾಬ ಮುಲ್ಲಾ, ಕೆ.ಕೆ. ಮುಲ್ಲಾ, ಸಂಜಯ ದೊಡ್ಡಮನಿ ಸೇರಿದಂತೆ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು.
“ಶಾಸಕ ಜಿ.ಎಸ್. ಪಾಟೀಲರು ಕಳೆದ 50 ವರ್ಷಗಳಿಂದ ಪಕ್ಷಕ್ಕೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಸೇವೆಯನ್ನು ಪರಿಗಣಿಸಿ ಸಚಿವ ಸ್ಥಾನ ನೀಡಬೇಕು. ಇದು ನಮ್ಮ ನ್ಯಾಯಯುತ ಬೇಡಿಕೆ. ಇದಕ್ಕೆ ಸ್ಪಂದಿಸದಿದ್ದರೆ ನಾವು ಪ್ರಾಣತ್ಯಾಗಕ್ಕೂ ಸಿದ್ಧರಿದ್ದೇವೆ. ಮುಂದಾಗುವ ಯಾವುದೇ ಅನಾಹುತಕ್ಕೆ ಪಕ್ಷದ ವರಿಷ್ಠರೇ ಹೊಣೆ.”
ವಿನಾಯಕ ಜಕ್ಕಣಗೌಡ್ರ, ಕಾಂಗ್ರೆಸ್ ಮುಖಂಡ
ಸಚಿವ ಸ್ಥಾನ ನೀಡದಿದ್ದರೆ ವಿಧಾನಸೌಧ ಚಲೋ
ಮರುಳ ಸಿದ್ದೇಶ್ವರ ಪುಣ್ಯಾಶ್ರಮದ ಶ್ರೀ ಶಿವಶರಣ ಗದಿಗೆಪ್ಪಜ್ಜನವರು ಮಾತನಾಡಿ, “ಜಿ.ಎಸ್. ಪಾಟೀಲರು ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಹೋಗುವ ಹೃದಯವಂತ ನಾಯಕ. ಪಕ್ಷ ನೀಡಿದ ಎಲ್ಲ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಅವರ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಸಚಿವ ಸ್ಥಾನ ನೀಡಬೇಕು. ಇಲ್ಲವಾದಲ್ಲಿ ಶ್ರೀಗಳ ನೇತೃತ್ವದಲ್ಲಿ ‘ವಿಧಾನಸೌಧ ಚಲೋ’ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.



