ರಾಕಿಂಗ್ ಸ್ಟಾರ್ ಯಶ್ ತಾಯಿ ನಿರ್ಮಾಪಕಿ ಪುಷ್ಪ ಈಗಾಗಲೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ನಿರ್ಮಾಪಕಿ ಹಾಗೂ ವಿತರಕಿಯಾಗಿ ಈಗಾಗಲೇ ಎರಡು ಸಿನಿಮಾಮಾಡಿದ್ದು ಎರಡು ಸಿನಿಮಾಗಳು ಹೇಳಿಕೊಳ್ಳುವ ಮಟ್ಟಿಗೆ ಸದ್ದು ಮಾಡಿಲ್ಲ. ಎರಡು ಸಿನಿಮಾಗಳು ಸೋತರ ಛಲ ಬಿಡದೆ ಇದೀಗ ಮತ್ತೊಂದು ಸಿನಿಮಾ ಘೋಷಿಸಿದ್ದಾರೆ.
ಪುಷ್ಪ ಅವರು ಮೊದಲ ಸಿನಿಮಾ ‘ಕೊತ್ತಲವಾಡಿ’ ನಿರ್ಮಾಣ ಮಾಡಿದ್ದರು. ಆ ಸಿನಿಮಾ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗಿತ್ತು. ಅದಾದ ಬಳಿಕ ಅನುಷ್ಕಾ ಶೆಟ್ಟಿ ನಟನೆಯ ತೆಲುಗಿನ ‘ಘಾಟಿ’ ಸಿನಿಮಾ ಅನ್ನು ಕರ್ನಾಟಕದಲ್ಲಿ ವಿತರಣೆ ಮಾಡಿದರು. ತಾವು ಹವ್ಯಾಸಕ್ಕಾಗಿ ಬಂದವರಲ್ಲ, ವೃತ್ತಿಪರ ನಿರ್ಮಾಪಕಿ ಆಗಲೆಂದು ಬಂದವರು ಎಂದು ಈ ಹಿಂದೆ ಪುಷ್ಪ ಅವರು ಹೇಳಿದ್ದರು. ಅದರಂತೆ ಇದೀಗ ಮತ್ತೊಂದು ಸಿನಿಮಾ ಘೋಷಿಸಿದ್ದಾರೆ.
ವಿಜಯದಶಮಿಯಂದು ಪುಷ್ಪ ಅವರು ತಮ್ಮ ನಿರ್ಮಾಣದ ಎರಡನೇ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರ ಮೊದಲ ನಿರ್ಮಾಣದ ‘ಕೊತ್ತಲವಾಡಿ’ ಸಿನಿಮಾ ನಿರ್ದೇಶನ ಮಾಡಿದ್ದ ಶ್ರೀರಾಜ್ ಅವರೆ, ಪುಷ್ಪ ಅವರು ನಿರ್ಮಿಸುತ್ತಿರುವ ಎರಡನೇ ಸಿನಿಮಾ ಅನ್ನೂ ನಿರ್ದೇಶನ ಮಾಡಲಿದ್ದಾರೆ. ಜೊತೆಗೆ ‘ಕೊತ್ತಲವಾಡಿ’ ಸಿನಿಮಾಕ್ಕೆ ಕೆಲಸ ಮಾಡಿದ್ದ ಬಹುತೇಕ ತಂತ್ರಜ್ಞರು ಪುಷ್ಪ ಅವರ ಎರಡನೇ ಸಿನಿಮಾನಲ್ಲಿಯೂ ಕೆಲಸ ಮಾಡಲಿದ್ದಾರೆ. ಆದರೆ ಕಲಾವಿದರು ಮಾತ್ರ ಕತೆಗೆ ತಕ್ಕಂತೆ ಬದಲಾಗಲಿದ್ದಾರೆ ಎಂದು ಪುಷ್ಪ ಅವರು ಹೇಳಿದ್ದಾರೆ.
ಪುಷ್ಪ ಅವರ ‘ಪಿಎ’ ಪ್ರೊಕ್ಷನ್ನ ಎರಡನೇ ಸಿನಿಮಾ ಇದಾಗಲಿದ್ದು, ಮೊದಲ ಸಿನಿಮಾಕ್ಕಿಂತಲೂ ಭಿನ್ನವಾದ ಕತೆಯುಳ್ಳ ಸಿನಿಮಾ ಅನ್ನು ನಿರ್ಮಿಸಲು ಪುಷ್ಪ ಅರುಣ್ಕುಮಾರ್ ಮುಂದಾಗಿದ್ದಾರೆ.



