ಚಿಕ್ಕಬಳ್ಳಾಪುರ: ಚುಡಾಯಿಸಿದ್ದಕ್ಕೆ ಕೆನ್ನೆಗೆ ಬಾರಿಸಿದ್ದ ಯುವತಿಯ ಮೇಲೆ ಸೇಡು ತೀರಿಸಿಕೊಳ್ಳಲು ಮನೆಗೆ ನುಗ್ಗಿ ಚಾಕು ಇರಿದ ಪ್ರಕರಣದಲ್ಲಿ ಚಿಂತಾಮಣಿ ನಗರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಲಕ್ಷ್ಮೀ, ಮಂಜುನಾಥ ಹಾಗೂ ಜಬಿವುಲ್ಲಾ ಬಂಧಿತರಾಗಿದ್ದು, ಕಾರ್ತಿಕ್ ಮತ್ತು ವಿನೋದ್ ಪರಾರಿಯಾಗಿದ್ದಾರೆ. ಅವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಆಶ್ರಯ ಬಡಾವಣೆಯ ನಿವಾಸಿ ಮೇಘನಾ ಅವರನ್ನು ಆರೋಪಿಗಳು ಚುಡಾಯಿಸಿದ್ದರು. ಇದಕ್ಕೆ ಆಕ್ರೋಶಗೊಂಡ ಯುವತಿ ಅವರ ಕೆನ್ನೆಗೆ ಬಾರಿಸಿದ್ದಳು. ಇದೇ ದ್ವೇಷದಿಂದ ಆರೋಪಿಗಳು ಯುವತಿಯ ಮನೆಗೆ ನುಗ್ಗಿ ಚಾಕುವಿನಿಂದ ಹಲ್ಲೆ ನಡೆಸಿದ್ದರು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉಳಿದ ಇಬ್ಬರು ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ.



