ಮುಂಬೈ: ₹6,000 ಕೋಟಿ ಮೌಲ್ಯದ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಆರೋಪಿಯಾಗಿರುವ ಕುಖ್ಯಾತ ಡ್ರಗ್ ಸಿಂಡಿಕೇಟ್ ಆಪರೇಟರ್ ವಿಕ್ರೇಂದರ್ ಸಿಂಗ್ ಬಸೋಯಾನನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ದುಬೈನಿಂದ ಭಾರತಕ್ಕೆ ಕರೆತಂದಿದೆ. UAEನಲ್ಲಿ ಬಂಧನಕ್ಕೊಳಗಾದ ಬಳಿಕ ಬಸೋಯಾನನ್ನು ಭಾರತಕ್ಕೆ ಗಡೀಪಾರು ಮಾಡಲಾಗಿದ್ದು, ಏರ್ ಇಂಡಿಯಾ AI 4310 ವಿಮಾನದ ಮೂಲಕ ದೇಶಕ್ಕೆ ಕರೆತರಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ವರದಿಯಾಗಿದೆ.
ಬಸೋಯಾ ವಿರುದ್ಧ ಎನ್ಸಿಬಿ ಈ ಹಿಂದೆ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿತ್ತು. ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆಹಚ್ಚಿ ಭಾರತಕ್ಕೆ ವಾಪಸ್ ಕರೆತರುವ ಕಾರ್ಯಾಚರಣೆಯಲ್ಲಿ ಕೇಂದ್ರ ಸರ್ಕಾರದ ಪ್ರಯತ್ನ ಹಾಗೂ UAE ಅಧಿಕಾರಿಗಳ ಸಹಕಾರ ಪ್ರಮುಖವಾಗಿತ್ತು ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, ದೆಹಲಿ ಪೊಲೀಸರ ಸುಮಾರು 13,000 ಪ್ರಕರಣಗಳಿಗೆ ಸಂಬಂಧಿಸಿದ ದೊಡ್ಡ ಡ್ರಗ್ಸ್ ಜಾಲದ ಪ್ರಮುಖ ಆರೋಪಿ ಎನ್ನಲಾಗಿರುವ ಸಂದೀಪ್ ಧುನಿಯಾನ ಆಪ್ತನಾಗಿ ಬಸೋಯಾ ಗುರುತಿಸಿಕೊಂಡಿದ್ದಾನೆ. ಧುನಿಯಾ ದುಬೈನಿಂದ ಪಾಕಿಸ್ತಾನಕ್ಕೆ ತೆರಳಿದ್ದಾನೆ ಎನ್ನಲಾಗಿದ್ದು, ಈ ಜಾಲದ ಅಂತರರಾಷ್ಟ್ರೀಯ ಸಂಪರ್ಕಗಳ ಕುರಿತು ತನಿಖಾ ಸಂಸ್ಥೆಗಳು ಪರಿಶೀಲನೆ ನಡೆಸುತ್ತಿವೆ.
ಬಸೋಯಾನ ಭಾರತಕ್ಕೆ ವಾಪಸ್ ಕರೆತಂದಿರುವ ಬೆಳವಣಿಗೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ವಾಗತಿಸಿದ್ದಾರೆ. ವಿದೇಶಗಳಲ್ಲಿ ಅಡಗಿರುವ ಡ್ರಗ್ಸ್ ಕಳ್ಳಸಾಗಣೆದಾರರನ್ನು ಪತ್ತೆಹಚ್ಚಿ ಅವರ ಜಾಲಗಳನ್ನು ಭೇದಿಸಲು ಸರ್ಕಾರ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಮಾದಕ ವಸ್ತುಗಳ ವಿರುದ್ಧದ ಸರ್ಕಾರದ ಶೂನ್ಯ ಸಹಿಷ್ಣುತೆ ನೀತಿಯಲ್ಲಿ ಬಸೋಯಾನ ವಾಪಸಾತಿ ಮತ್ತೊಂದು ಪ್ರಮುಖ ಹೆಜ್ಜೆ ಎಂದು ಶಾ ಬಣ್ಣಿಸಿದ್ದಾರೆ. ಡ್ರಗ್ಸ್ ಕಳ್ಳಸಾಗಣೆದಾರರು ದೇಶದ ಹೊರಗೆ ಎಲ್ಲಿಯೇ ಅಡಗಿಕೊಂಡರೂ ಭಾರತೀಯ ಕಾನೂನಿನ ವ್ಯಾಪ್ತಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಈ ಕಾರ್ಯಾಚರಣೆ ನೀಡಿದೆ ಎಂದು ಅವರು ಹೇಳಿದ್ದಾರೆ.



