ವಿಜಯಸಾಕ್ಷಿ ಸುದ್ದಿ, ಗದಗ: ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿಯಾಗಿ ಗದಗ-ಬೆಟಗೇರಿ ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಬೃಹತ್ ೧೦೦ ಮೀಟರ್ ತ್ರಿವರ್ಣ ಯಾತ್ರೆ ಶುಕ್ರವಾರ ನಗರದಲ್ಲಿ ಅದ್ದೂರಿಯಾಗಿ ಜರುಗಿತು. ನೂರಾರು ದೇಶಪ್ರೇಮಿಗಳು ಬೃಹತ್ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹೊತ್ತು ಸಾಗುವ ಮೂಲಕ ದೇಶಭಕ್ತಿ, ಏಕತೆ ಹಾಗೂ ರಾಷ್ಟ್ರಾಭಿಮಾನದ ಸಂದೇಶ ಸಾರಿದರು.
ಲಯನ್ಸ್ ಕ್ಲಬ್ ಆಫ್ ಗದಗ-ಬೆಟಗೇರಿ ಹಾಗೂ ಗದಗ ಜಿಲ್ಲಾ ಬಟ್ಟೆ ವ್ಯಾಪಾರಸ್ಥರ ಸಂಘದ ಸಹಯೋಗದಲ್ಲಿ ನಡೆದ ಯಾತ್ರೆಗೆ ಲಯನ್ಸ್ ಜಿಲ್ಲೆಯ ೩೧೭ಬಿ ನಿಕಟಪೂರ್ವ ಜಿಲ್ಲಾ ಗವರ್ನರ್ ಆನಂದ ಪೋತ್ನೀಸ್ ಚಾಲನೆ ನೀಡಿದರು. ನಗರದ ಬಸವೇಶ್ವರ ಸರ್ಕಲ್ (ಹತ್ತಿಕಾಳ ಕೂಟ)ದಿಂದ ಆರಂಭಗೊಂಡ ಯಾತ್ರೆ ನಾಮಜೋಶಿ ರಸ್ತೆ, ಹುಯಿಲಗೋಳ ನಾರಾಯಣರಾವ್ ವೃತ್ತ, ಮಹೇಂದ್ರಕರ ವೃತ್ತ ಹಾಗೂ ಮಹಾತ್ಮ ಗಾಂಧಿ ವೃತ್ತ ಮಾರ್ಗವಾಗಿ ಸಾಗಿ ಲಯನ್ಸ್ ಭವನದಲ್ಲಿ ಮುಕ್ತಾಯಗೊಂಡಿತು.
ಬೃಹತ್ ತ್ರಿವರ್ಣ ಧ್ವಜದೊಂದಿಗೆ ಸಾಗಿದ ಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ದೇಶಭಕ್ತಿಯ ವಾತಾವರಣ ನಿರ್ಮಿಸಿತು. ಯಾತ್ರೆಯಲ್ಲಿ ಪಾಲ್ಗೊಂಡವರು ಭಾರತ ಮಾತೆಯ ಘೋಷಣೆಗಳನ್ನು ಮೊಳಗಿಸುತ್ತಾ, ಪುಷ್ಪವೃಷ್ಟಿಗೈದು ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು.
ಗದಗ ಜಿಲ್ಲಾ ಮಾಜಿ ಸೈನಿಕರ ಸಂಘದ ಮಾಜಿ ಸೈನಿಕರಾದ ಎಸ್.ಆರ್. ಪಾಟೀಲ, ವ್ಹಿ.ಬಿ. ಬಿಂಗಿ, ಎಸ್.ಬಿ. ಸರ್ವಿ, ಶಂಕರಗೌಡ ಪಾಟೀಲ, ಅರವಟಗಿಮಠ, ವಿಜಯ ಬಡಿಗೇರ, ಚವ್ಹಾಣ ಸೇರಿದಂತೆ ಹಲವರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.
ಜೈನ್ ಸಮಾಜದ ಮಹಿಳಾ ಸಂಘಟನೆಯಾದ ವೀರ ಬಾಲಿಕಾ ಮಂಡಲದ ಪದಾಧಿಕಾರಿಗಳು ಹಾಗೂ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡು ತ್ರಿವರ್ಣ ಯಾತ್ರೆಯ ಯಶಸ್ಸಿಗೆ ಕೈಜೋಡಿಸಿದರು.
ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರವೀಣ ವಾರಕರ, ಕಾರ್ಯದರ್ಶಿ ಲಿಂಗರಾಜ ತೋಟದ, ಖಜಾಂಚಿ ರೇಣುಕಪ್ರಸಾದ ಶಿಗ್ಲಿಮಠ, ರಾಜಣ್ಣ ಮಲ್ಲಾಡದ, ರಮೇಶ ಶಿಗ್ಲಿ, ರೇಣುಕಪ್ರಸಾದ ಹಿರೇಮಠ, ರಾಜಣ್ಣ ವೇರ್ಣೆಕರ, ವೀರೇಶ ಪಟ್ಟಣಶೆಟ್ಟಿ, ಡಾ. ಸಿ.ಬಿ. ಹಿರೇಗೌಡ್ರ, ಡಾ. ಜೆ.ಸಿ. ಶಿರೋಳ, ಸಂಜಯ ರುದ್ದಂ, ದತ್ತು ಬೇವಿನಕಟ್ಟಿ, ಅಶ್ವಥ್ ಸುಲಾಖೆ, ಜೆ.ಡಿ. ಉತ್ತರಕರ, ಸಂತೋಷ ಕಬಾಡರ, ಅಂಕಿತ ಸಾವಕರ, ಶಿವಕುಮಾರ ಶೆಟ್ಟರ, ವೀರಣ್ಣ ಬಾಳಿಕಾಯಿ, ರಾಹುಲ್ ಅರಳಿ ಸೇರಿದಂತೆ ಲಯನ್ಸ್ ಕ್ಲಬ್ನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಲಯನ್ ಲೇಡೀಸ್ ಕ್ಲಬ್ ಅಧ್ಯಕ್ಷೆ ಅಮೃತಾ ವಾರಕರ, ಕಾರ್ಯದರ್ಶಿ ಅಪರ್ಣಾ ತೋಟದ, ಖಜಾಂಚಿ ಪ್ರಿಯಾ ಶಿಗ್ಲಿಮಠ, ವೀಣಾ ಸುಲಾಖೆ ಸೇರಿದಂತೆ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.



