ವಿಜಯಸಾಕ್ಷಿ ಸುದ್ದಿ, ಗದಗ: ಗದಗ ನಗರದ ಪ್ರತಿಷ್ಠಿತ ಮನೋರಮಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಪ್ರತಿಭೆಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ರಂಗುರಂಗಿನ ರಂಗೋಲಿ ಸ್ಪರ್ಧೆ ವಿಜೃಂಭಣೆಯಿಂದ ನಡೆಯಿತು.
ಪಿಯುಸಿ ಸಂಯೋಜಕಿ ಪ್ರೊ. ಶಾಹಿದಾ ಶಿರಹಟ್ಟಿ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿಯರು ವಿವಿಧ ಶೈಲಿಯ ಆಕರ್ಷಕ ರಂಗೋಲಿಗಳನ್ನು ಬಿಡಿಸಿ ತಮ್ಮ ಕಲಾತ್ಮಕ ಪ್ರತಿಭೆಯನ್ನು ಅನಾವರಣಗೊಳಿಸಿದರು.
ಬಣ್ಣಬಣ್ಣದ ವಿನ್ಯಾಸಗಳು ನೋಡುಗರ ಗಮನ ಸೆಳೆಯುವುದರೊಂದಿಗೆ ಕಾಲೇಜು ಆವರಣವನ್ನು ಹಬ್ಬದ ವಾತಾವರಣಕ್ಕೆ ಸಾಕ್ಷಿಯನ್ನಾಗಿಸಿತು.
ಸ್ಪರ್ಧೆಯಲ್ಲಿ ದ್ವಿತೀಯ ಪಿಯುಸಿ ವಿಭಾಗದ ಕುಮಾರಿ ತೇಜಸ್ವಿನಿ, ಭೂಮಿಕಾ ಹಾಗೂ ಸಹನಾ ಪ್ರಥಮ ಸ್ಥಾನ, ಪ್ರಥಮ ಪಿಯುಸಿ ವಿಭಾಗದ ಕುಮಾರಿ ದೀಪಾ ಹಾಗೂ ಬಸಮ್ಮ ದ್ವಿತೀಯ ಸ್ಥಾನ, ದ್ವಿತೀಯ ಪಿಯುಸಿ ವಿಭಾಗದ ಕುಮಾರಿ ಗೀತಾ ಕೆ. ಹಾಗೂ ವರ್ಷಾ ತೃತೀಯ ಸ್ಥಾನ ಪಡೆದು ಪ್ರಶಂಸೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಎನ್.ಎಂ. ಕುಡತರಕರ, ಪ್ರಾಚಾರ್ಯ ಬಿ.ಎಸ್. ಹಿರೇಮಠ, ಆಡಳಿತಾಧಿಕಾರಿ ಕಿಶೋರ ಮುದಗಲ್ಲ, ನಿರ್ದೇಶಕರಾದ ಮಂಜುನಾಥ ಕುಡತರಕರ, ಸಂಜಯಕುಮಾರ ಕುಡತರಕರ, ಚೇತನ ಕುಡತರಕರ, ಪಿಯುಸಿ ಸಂಯೋಜಕಿ ಪ್ರೊ. ಶಾಹಿದಾ ಶಿರಹಟ್ಟಿ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



