ಗ್ರಾಮೀಣ ಮಟ್ಟದಲ್ಲೂ ಕ್ರೀಡಾ ತಂಡಗಳನ್ನು ರಚಿಸಲು ಸಹಕರಿಸಿ: ಸುರಳ್ಕರ್

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ

ಕ್ರೀಡೆ ಎಂದರೆ ಕ್ರಿಕೆಟ್ ಮಾತ್ರವಲ್ಲ, ಎಲ್ಲ ಆಟಗಳನ್ನು ಸಮಾನ ದೃಷ್ಟಿಯಿಂದ ಕಾಣಬೇಕು. ಗ್ರಾಮೀಣ ಮಟ್ಟದಲ್ಲೂ ಕ್ರೀಡಾ ತಂಡಗಳನ್ನು ರಚಿಸಿ ಪ್ರತಿಭಾಶೋಧದ ಜೊತೆಗೆ ವೇದಿಕೆ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದರು.

ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರದಿಂದ ಆರಂಭಗೊಂಡ ಕೆಡಬ್ಲ್ಯೂಎಸ್‌ಸಿ ಆಯೋಜಿಸಿದ ಎರಡು ದಿನಗಳ ಏಕತಾ ಕಪ್ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾಡಳಿತದಿಂದಲೂ ಕ್ರೀಡಾ ತಂಡಗಳನ್ನು ರಚಿಸಲಾಗುತ್ತಿದ್ದು, ಕೊರೋನಾದ ಈ ದಿನಗಳಲ್ಲಿ ಬಹಳಷ್ಟು ನೌಕರರು ಮನೆ, ಕಚೇರಿಗೆ ಮಾತ್ರ ಸೀಮಿತವಾಗಿದ್ದಾರೆ. ಒತ್ತೆ ನಿವಾರಣೆಗೆ, ಆರೋಗ್ಯ ವೃದ್ಧಿಗೆ ಕ್ರೀಡೆ ಸಹಕಾರಿ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಮಾತನಾಡಿ, ಕಡಬ್ಲ್ಯೂಎಸ್‌ಸಿ ಕೇವಲ ಕ್ರೀಡೆಗೆ ಸೀಮಿತವೆಂದು ಭಾವಿಸಿದ್ದೆ. ಆದರೆ ಈ ಕ್ಲಬ್ ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಕೊಂಡಿರುವುದು ಶ್ಲಾಘನೀಯ ಕಾರ್ಯ. ಇಂಥ ಸಂಘಟನೆಗಳು ಹೆಚ್ಚಲಿ, ಬಡವರಿಗೆ ಇನ್ನಷ್ಟು ಅನುಕೂಲ ಆಗಲಿ ಎಂದು ಆಶಿಸಿದರು.

ಕ್ಲಬ್‌ನ ಮುಖಂಡ ಗಿರೀಶ್ ಮುಂಡಾದ ಮಾತನಾಡಿ, ಜಿಲ್ಲಾ ಕ್ರೀಡಾಂಗಣದ ಸ್ಥಿತಿ-ಗತಿ ವಿವರಿಸಿ ಇಲ್ಲಿ ಶೌಚಾಲಯದ ಅಗತ್ಯವಿದೆ ಎಂದು ಮನವಿ ಮಾಡಿದರು. ತಕ್ಷಣವೇ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಸೋಮವಾರದಿಂದಲೇ ಶೌಚಾಲಯ ನಿರ್ಮಾಣ ಕಾರ್ಯ ಶುರುವಾಗಲಿದೆ ಎಂದು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಬಸವರಾಜ ಕರುಗಲ್ ಮಾತನಾಡಿ, ನಿತ್ಯ ಬೆಳಗ್ಗೆ ಈ ಕ್ರೀಡಾಂಗಣದಲ್ಲಿ ವಿವಿಧ ಹುದ್ದೆಗಳಲ್ಲಿರುವ ಅಧಿಕಾರಿಗಳು, ವೈದ್ಯರು, ಪೊಲೀಸರು, ಪತ್ರಕರ್ತರು, ವ್ಯಾಪಾರಸ್ಥರು ವಯೋಮಾನ ಮರೆತು ಏಕತೆಯಿಂದ ಆಟವಾಡುತ್ತಾರೆ. ಈ ಒಗ್ಗಟ್ಟಿನ ಸಂಕೇತವಾಗಿ ಏಕತಾ ಕಪ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿದೆ ಎಂದರು.

ಸಮಾರಂಭದಲ್ಲಿ ಪೊಲೀಸ್ ಅಧಿಕಾರಿಗಳಾದ ರವಿ ವಕ್ಕುಂದ, ಅಮರೇಶ ಹುಬ್ಬಳ್ಳಿ, ಮೌನೇಶ್, ವಿಶ್ವನಾಥ ಹಿರೇಗೌಡರ್, ಆಂಜನೇಯ ಮತ್ತಿತರರು ಇದ್ದರು.

ಚಂದ್ರು, ಸೂರಿ, ವಿನೋದ್, ಸಿದ್ದು, ಪ್ರವೀಣ್, ಗವಿ, ಗಂಗಾಧರ, ಶ್ರೀನಿವಾಸ, ಮೌನೇಶ್, ನಾಗರಾಜ, ಮಂಜುನಾಥ ಇನ್ನಿತರರು ಪಾಲ್ಗೊಂಡಿದ್ದರು.

ಈರಣ್ಣ ಕಾರ್ಯಕ್ರಮ ನಿರ್ವಹಿಸಿದರು.


Spread the love

LEAVE A REPLY

Please enter your comment!
Please enter your name here