ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಜಿಲ್ಲೆಯ ಕುಕನೂರು ತಾಲೂಕು ನಿಟ್ಟಾಲಿ ಕ್ರಾಸ್ ಬಳಿ ಮಿನಿ ಬಸ್ ಹಾಗೂ ಬೈಕ್ ನಡುವೆ ಶುಕ್ರವಾರ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೈಕ್ ಸವಾರ ಕುಕನೂರು ತಾಲೂಕು ಬೆಣಕಲ್ ಗ್ರಾಮದ ಸಂತೋಷ ವುಂಕಿ(25) ಮತ್ತು ಮಿನಿ ಬಸ್ ನಲ್ಲಿದ್ದ ರಂಗಪ್ಪ ನಾಗಣ್ಣವರ(80), ಭೀಮವ್ವ ಗೋಡಿ(70) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸ್ ನಲ್ಲಿದ್ದ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, 10 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಾಗಲಕೋಟ ಜಿಲ್ಲೆ ಬದಾಮಿ ತಾಲೂಕಿನ ಅಗಸನಕೊಪ್ಪ ಗ್ರಾಮದಿಂದ ಕೊಪ್ಪಳ ತಾಲೂಕು ಹಿರೇಸಿಂಧೋಗಿ ಗ್ರಾಮಕ್ಕೆ ನಿಶ್ಚಿತಾರ್ಥದ ಕಾರ್ಯಕ್ರಮಕ್ಕೆ ಬರುತ್ತಿದ್ದ ಮಿನಿ ಬಸ್ ಅಪಘಾತಕ್ಕೆ ಒಳಗಾಗಿದೆ.
ನಿಟ್ಟಾಲಿ ಕಡೆಯಿಂದ ಬಂದ ಬೈಕ್ಗೆ ಮಿನಿ ಬಸ್ ಡಿಕ್ಕಿ ಹೊಡೆದಿದ್ದು, ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದು ತಗ್ಗಿಗೆ ಬಿದ್ದಿದೆ. ನೂತನವಾಗಿ ನಿರ್ಮಿಸಿರುವ ರಸ್ತೆಗೆ ವೇಗ ನಿಯಂತ್ರಣಗಳನ್ನು ಅಳವಡಿಸದಿರುವುದೇ ಕಾರಣ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶ್ರೀಧರ್ ತಿಳಿಸಿದ್ದಾರೆ. ಗಾಯಾಳುಗಳು ಕೊಪ್ಪಳದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.