ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಜಲ ಜೀವನ ಮಿಷನ್ (ಜೆಜೆಎಂ) ಯೋಜನೆಯ ಅಸಮರ್ಪಕ ಕಾಮಗಾರಿ, ಕುಡಿಯುವ ನೀರಿನ ತಾರತಮ್ಯ ಪೂರೈಕೆ ಹಾಗೂ ಗ್ರಾಮ ಅಭಿವೃದ್ಧಿ ವಿಚಾರಗಳು ಲಕ್ಕುಂಡಿ ಗ್ರಾಮ ಪಂಚಾಯಿತಿ ವಿಶೇಷ ಗ್ರಾಮಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾದವು.
ಅನ್ನದಾನೀಶ್ವರ ಸಭಾಭವನದಲ್ಲಿ ನಡೆದ ಗ್ರಾಮಸಭೆಯಲ್ಲಿ ಮಹಿಳೆಯರು ಹಾಗೂ ಯುವಕರು ಆಕ್ರೋಶ ವ್ಯಕ್ತಪಡಿಸಿ, “ಗ್ರಾಮದ 5 ವಾರ್ಡ್ಗಳಿಗೆ ಮಾತ್ರ ಸಮರ್ಪಕ ನೀರು ಪೂರೈಕೆಯಾಗುತ್ತಿದೆ. 6, 7, 8, 9 ಹಾಗೂ 10ನೇ ವಾರ್ಡ್ಗಳಿಗೆ 8ರಿಂದ 12 ದಿನಕ್ಕೊಮ್ಮೆ ನೀರು ಬರುತ್ತಿದ್ದು ಜನರು ಹಾಗೂ ಜಾನುವಾರುಗಳು ಸಂಕಷ್ಟ ಅನುಭವಿಸುತ್ತಿವೆ,” ಎಂದು ದೂರಿದರು.
ತಾ.ಪಂ ಮಾಜಿ ಅಧ್ಯಕ್ಷ ಎಂ.ಎನ್. ಉಮಚಗಿ ಹಾಗೂ ಎನ್.ಐ. ಕಿರಿಟಗೇರಿ ಮಾತನಾಡಿ, “ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ ನೀರು ಮಾತ್ರ ಬರುತ್ತಿಲ್ಲ. ಸಂಬಂಧಪಟ್ಟ ಇಂಜಿನಿಯರ್ ಹಾಗೂ ಗುತ್ತಿಗೆದಾರರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು,” ಎಂದು ಎಚ್ಚರಿಸಿದರು.
ಗ್ರಾಮಸಭೆಯ ಅಧ್ಯಕ್ಷತೆ ವಹಿಸಿದ್ದ ಶರಣು ಗೋಗೇರಿ ಮಾತನಾಡಿ, “101 ದೇವಸ್ಥಾನ ಹಾಗೂ ಭಾವಿಗಳನ್ನು ಹೊಂದಿರುವ ಲಕ್ಕುಂಡಿಯನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ಶಾಸಕ ಎಚ್. ಕೆ. ಪಾಟೀಲ ಹಾಗೂ ಶಾಸಕ ಸಿ. ಸಿ. ಪಾಟೀಲ ಶ್ರಮಿಸುತ್ತಿದ್ದಾರೆ. ಗ್ರಾಮವನ್ನು ಸ್ವಚ್ಛ ಹಾಗೂ ಸುಂದರವಾಗಿ ಉಳಿಸಿ ಪ್ರವಾಸಿಗರನ್ನು ಸೆಳೆಯಲು ಗ್ರಾಮಸ್ಥರು ಸಹಕರಿಸಬೇಕು,” ಎಂದು ಮನವಿ ಮಾಡಿದರು.
ಗ್ರಾಮೀಣ ವಿಶ್ವವಿದ್ಯಾಲಯದ ಸಂಯೋಜಕ ಸೋಮಲಿಂಗ ಕರ್ಣಿ ಪರಿಸರ ಸಂರಕ್ಷಣೆಯ ಮಹತ್ವ ಕುರಿತು ಮಾತನಾಡಿದರು. ನ್ಯಾಯವಾದಿ ಸುಪರ್ಣ ಬ್ಯಾಹಟ್ಟಿ ಮಹಿಳಾ ಕಾನೂನುಗಳ ಕುರಿತು ಹಾಗೂ ಸುಜಾತಾ ಶಾಸ್ತ್ರಿಮಠ ಮಹಿಳಾ ಜಾಗೃತಿ ಕುರಿತು ಮಾಹಿತಿ ನೀಡಿದರು.
ಪಿಡಿಒ ಡಾ. ಅಮೀರನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಎಂ.ಎ. ಗಾಜಿ ಸ್ವಾಗತಿಸಿದರು.
ಗ್ರಾಮಸಭೆಯಲ್ಲಿ ಆಶ್ರಯ ವಸತಿ ಯೋಜನೆಯಡಿ ಜೀತ ಪದ್ಧತಿಯಿಂದ ಮುಕ್ತಿ ಪಡೆದ ಪಕ್ಕಣ್ಣ ಬೇಲೇರಿ, ಮ್ಯಾನುಯಲ್ ಸ್ಕಾವೆಂಜರ್ ಸೇವೆಯ ಮಾಯಪ್ಪ ಮುಳ್ಳಾಳ ಹಾಗೂ ವಿಜಯಲಕ್ಷ್ಮಿ ಕರಿ ಅವರನ್ನು ಫಲಾನುಭವಿಗಳಾಗಿ ಆಯ್ಕೆ ಮಾಡಲಾಯಿತು.
ಇದೇ ವೇಳೆ 2018ರಲ್ಲಿ ಆಯ್ಕೆಯಾಗಿದ್ದ ಕೆಲ ಫಲಾನುಭವಿಗಳ ಬದಲಿಗೆ ಅದೇ ಕುಟುಂಬದ ಸದಸ್ಯರನ್ನು ಮರು ಆಯ್ಕೆ ಮಾಡುವ ಠರಾವನ್ನು ಸಭೆಯಲ್ಲಿ ಓದಿ ತಿಳಿಸಲಾಯಿತು.
ಜೆಜೆಎಂ ಯೋಜನೆ ವಿರುದ್ಧ ಗರಂ
ಸುಮಾರು ₹4 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿದೆ ಎನ್ನಲಾಗುತ್ತಿರುವ ಜೆಜೆಎಂ ಕಾಮಗಾರಿಯಲ್ಲೂ ಇದುವರೆಗೂ ನೀರು ಪೂರೈಕೆ ಆರಂಭವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ವಾಲ್ಮನ್ಗೆ ಆಡಳಿತಾಧಿಕಾರಿ ತರಾಟೆ
ಈ ವೇಳೆ ನೀರು ಪೂರೈಕೆ ಮಾಡುತ್ತಿರುವ ವಾಲ್ಮನ್ರನ್ನು ಸಭೆಗೆ ಕರೆಯಿಸಿದ ಆಡಳಿತಾಧಿಕಾರಿ ಹಾಗೂ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ, “ಸಮರ್ಪಕ ನೀರು ಪೂರೈಕೆಗೆ ಅಗತ್ಯ ಸಂಪನ್ಮೂಲ ಒದಗಿಸಲಾಗುತ್ತಿದೆ. ಸಮಸ್ಯೆಗಳನ್ನು ತಕ್ಷಣ ಗಮನಕ್ಕೆ ತರಬೇಕು. ನಿರ್ಲಕ್ಷ್ಯ ವಹಿಸಿದರೆ ಕ್ರಮ ಅನಿವಾರ್ಯ,” ಎಂದು ಎಚ್ಚರಿಕೆ ನೀಡಿದರು.



