ವಿಜಯಸಾಕ್ಷಿ ಸುದ್ದಿ, ಗದಗ
ಒಡಹುಟ್ಟಿದ ತಮ್ಮನಿಗೆ ಮೂರು ಎಕರೆ ಜಮೀನು ಬಿಟ್ಟು ಕೊಟ್ಟಿದ್ದಕ್ಕೆ ಸಿಟ್ಟಾದ ಅಣ್ಣನ ಹೆಂಡತಿ, ತನ್ನ ಇಬ್ಬರು ಸಹೋದರರ ಮೂಲಕ ಮೈದುನನ ಮೇಲೆ ಹಲ್ಲೆ ನಡೆಸಿರುವ ಘಟನೆ ಮಂಗಳವಾರ ನರಗುಂದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ನಡೆದಿದೆ.
ಜಮೀನು ಬಿಟ್ಟುಕೊಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ತಿಗೆ ತಹಸೀಲ್ದಾರ್ ಕಚೇರಿಗೆ ತಕರಾರು ಅರ್ಜಿ ಸಲ್ಲಿಸಿದ್ದಳು. ಮಂಗಳವಾರ ಪ್ರಕರಣದ ವಿಚಾರಣೆಗೆ ಬಂದಿದ್ದ ಮೈದುನನ ಮೇಲೆ ಅತ್ತಿಗೆ ಸಹೋದರರಿಬ್ಬರು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ.
ಘಟನೆ ವಿವರ
ನರಗುಂದ ತಾಲೂಕಿನ ರಡ್ಡೇರನಾಗನೂರು ಗ್ರಾಮದ ಯಲ್ಲಪ್ಪ ಬೀರಗೌಡ್ರ ಅಲಿಯಾಸ್ ಮೆಣಸಗಿ ಎಂಬುವವರು ತಮ್ಮನಾದ ಗದಿಗೆಪ್ಪ ಹನಮಪ್ಪ ಬೀರಗೌಡ್ರಗೆ ಮೂರು ಎಕರೆ ಜಮೀನು ಬಿಟ್ಟು ಕೊಟ್ಟಿದ್ದರು.
ಅದರೆ ಯಲ್ಲಪ್ಪ ಬೀರಗೌಡ್ರ ಅವರ ಪತ್ನಿಯು ಮೂರು ಎಕರೆ ಜಮೀನು ಬಿಟ್ಟುಕೊಟ್ಟಿದ್ದಕ್ಕೆ ಸಿಟ್ಟಾಗಿದ್ದರು. ಅದಕ್ಕಾಗಿ ತಹಸೀಲ್ದಾರ ಕಚೇರಿಯಲ್ಲಿ ತಕರಾರು ಅರ್ಜಿ ಕೊಟ್ಟಿದ್ದರು. ಇದರ ವಿಚಾರಣೆ ಮಂಗಳವಾರ ನರಗುಂದ ತಹಸೀಲ್ದಾರ ಕಚೇರಿಯಲ್ಲಿ ಇತ್ತು.
ಗದಿಗೆಪ್ಪ ಹನಮಪ್ಪ ಬೀರಗೌಡ್ರ ಅಲಿಯಾಸ್ ಮೆಣಸಗಿ ವಿಚಾರಣೆಗೆ ಆಗಮಿಸಿದ್ದ ವೇಳೆ ಅತ್ತಿಗೆಯ ಸಹೋದರರಾದ ಬೈರನಹಟ್ಟಿ ಗ್ರಾಮದ ನಾಗಪ್ಪ ಶಿವಪ್ಪ ಬೆನ್ನೂರು, ಭರಮಪ್ಪ ಶಿವಪ್ಪ ಬೆನ್ನೂರು ಎಂಬುವವರು ಹಲ್ಲೆ ಮಾಡಿದ್ದಾರೆ.
ಹಲ್ಲೆಯಿಂದ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದರೂ ಬಿಡದ ಬೆನ್ನೂರು ಸಹೋದರರು, ಕೊರಳ ಪಟ್ಟಿ ಹಿಡಿದು ಕಚೇರಿಯ ಹೊರಗೆ ಎಳೆದುಕೊಂಡು ಬಂದು ಹಲ್ಲೆ ಮಾಡಿದ್ದಾರೆ.
ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.