ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ;
ಸಾರಿಗೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಸುಮಾರು 70 ಲಕ್ಷ ರೂ. ವಂಚಿಸಿದ್ದ ಗ್ಯಾಂಗ್ ವೊಂದನ್ನು ಹೊಸದುರ್ಗ ಪೊಲೀಸರು ಖೆಡ್ಡಾಗೆ ಬೀಳಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಕಟನಕೇರಿ ಗ್ರಾಮದ ಮಹಮದ್ ಸಾಬ್ ಅಲ್ಲಾ ಸಾಬ್ ಭಗವಾನ್, ವಿಜಯಪುರ ನಗರದ ಬಸವರಾಜ್ ನಿಂಗಪ್ಪ ಭಜಂತ್ರಿ, ಬಾಗಲಕೋಟೆಯ ವೀರಭದ್ರ ಅರಗಿನಶೆಟ್ಟಿ, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ವಿಜಯಪುರ ತಾಲೂಕಿನ ಗೊಗಳಿ ತಾಂಡಾದ ಮಂಜುನಾಥ್ ಬಾಲ್ಯನಾಯ್ಕ, ಬೆಂಗಳೂರಿನ ಅನಿಲಕುಮಾರ್ ಎನ್.ವಿ. ಬಂಧಿತರು.
ಬಂಧಿತರಿಂದ 12.40 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ನಕಲಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
2019ರಲ್ಲಿ ಸಾರಿಗೆ ಇಲಾಖೆಯು ಸಂಚಾರಿ ನಿರೀಕ್ಷಕರು, ಸಹಾಯಕ ಸಂಚಾರಿ ನಿರೀಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ಆರೋಪಿಗಳು ವಿಧಾನಸೌಧ ಮತ್ತು ವಿಕಾಸ ಸೌಧದಲ್ಲಿ ತಮಗೆ ಪರಿಚಯವರಿದ್ದು, ನೌಕರಿ ಮಾಡಿಸಿಕೊಡುವುದಾಗಿ ನಂಬಿಸಿ ಹಲವರ ಬಳಿ ಹಣ ಪಡೆದು ನಕಲಿ ದಾಖಲೆ ಸೃಷ್ಟಿಸಿ ವಂಚಿಸಿದ್ದರು.
ಒಟ್ಟು 500 ಮಂದಿಗೆ 70 ಲಕ್ಷ ರೂ. ವಂಚಿಸಿದ್ದ ಗ್ಯಾಂಗ್ ಬಣ್ಣ ಈಗ ಬಯಲಾಗಿದೆ. ವಂಚನೆಗೆ ಒಳಗಾಗಿದ್ದ ಯುವಕ ಅಭಿಷೇಕ್ ಹೊಸದುರ್ಗ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಚಿತ್ರದುರ್ಗ ಎಸ್ಪಿ ಜಿ. ರಾಧಿಕಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.