ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ನಾಗರ ಪಂಚಮಿ ಹಬ್ಬದ ಅಂಗವಾಗಿ ತಾಲೂಕಿನ ರಾಮಗೇರಿ ಗ್ರಾಮದಲ್ಲಿ ಯುವಕರಿಗಾಗಿ ಆಯೋಜಿಸಿದ್ದ ೫೦ ಕೆ.ಜಿ. ತೂಕದ ರಸಗೊಬ್ಬರ ಚೀಲ ಹೊತ್ತು ನಡೆಯುವ ವಿಶಿಷ್ಟ ಸ್ಪರ್ಧೆಯಲ್ಲಿ ಗಿರೀಶ ಶೆಟ್ಟೆಪ್ಪನವರ ಗಮನ ಸೆಳೆದಿದ್ದಾರೆ.
ಹೆಚ್ಚು ದೂರ ನಡೆಯುವವರಿಗೆ ಬಹುಮಾನ ಘೋಷಿಸಲಾಗಿದ್ದ ಸ್ಪರ್ಧೆಯಲ್ಲಿ ಗಿರೀಶ ಅವರು ೫೦ ಕೆ.ಜಿ. ತೂಕದ ರಸಗೊಬ್ಬರ ಚೀಲವನ್ನು ಹೆಗಲ ಮೇಲೆ ಹೊತ್ತು, ಹುಬ್ಬಳ್ಳಿ–ಲಕ್ಷ್ಮೇಶ್ವರ ರಸ್ತೆಯಲ್ಲಿ ಎಲ್ಲಿಯೂ ಚೀಲವನ್ನು ಕೆಳಗಿಡದೆ ಬರೋಬ್ಬರಿ ೧೫ ಕಿ.ಮೀ. ನಡೆದು ಪ್ರಥಮ ಸ್ಥಾನ ಪಡೆದರು. ಮಹಾಂತೇಶ ಮೈಲಾರೆಪ್ಪ ಬಳ್ಕೊಳ್ಳಿ ಅವರು ೧೦ ಕಿ.ಮೀ. ನಡೆದು ದ್ವಿತೀಯ ಸ್ಥಾನ ಗಳಿಸಿದರು.
ಬುಧವಾರ ವಿಜೇತರನ್ನು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ನಾಗರಾಜ ಮಡಿವಾಳರ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯುವಕರು ಮೊಬೈಲ್ ಗೀಳು ಹಾಗೂ ದುಶ್ಚಟಗಳಿಂದ ದೂರವಿರಬೇಕು. ಹಬ್ಬಗಳ ಸಂದರ್ಭದಲ್ಲಿ ಹಿರಿಯರ ಕಾಲದಿಂದ ನಡೆದುಕೊಂಡು ಬಂದಿರುವ ಸಾಂಪ್ರದಾಯಿಕ ಗ್ರಾಮೀಣ ಕ್ರೀಡೆಗಳು ಹಾಗೂ ಹವ್ಯಾಸಗಳನ್ನು ಮುಂದುವರಿಸುವುದು ಇಂದಿನ ಅಗತ್ಯವಾಗಿದೆ ಎಂದರು.
ರಾಮಣ್ಣ ಜಿಡ್ಡಿಮನಿ, ಪರಸಪ್ಪ ಹುಣಸಿಮರದ, ಮಾತಾಂಡಪ್ಪ ಗಂಜಿಗಟ್ಟಿ, ರಾಜೇಸಾಬ್ ಅಣ್ಣಿಗೇರಿ, ಮಲ್ಲೇಶ ಬೇವಿನಮರದ, ಶಿವನಪ್ಪ ಜುಲ್ಸಿ, ನೀಲಪ್ಪ ಬೇವಿನಮರದ, ಕೋಟೆಪ್ಪ ಗಂಜಿಗಟ್ಟಿ, ಶಿವಣ್ಣ ಬಾಲಣ್ಣವರ, ಖಾಸೀಂಸಾಬ್ ತೆಗ್ಗಿನಮನಿ, ಕಲ್ಲಪ್ಪ ಮಲ್ಲಾಡದ, ಬಸಪ್ಪ ಸಿಂಗಣ್ಣನವರ ಹಾಗೂ ವಿನಾಯಕ ಮಡಿವಾಳರ ಇದ್ದರು.



