ಬೆಂಗಳೂರು: ಸ್ಮಶಾನದಲ್ಲಿದ್ದ ಸಮಾಧಿಯಿಂದ ಹೆಸರು ಸಂಗ್ರಹಿಸಿ, ಸತ್ತ ವ್ಯಕ್ತಿಯ ಹೆಸರಿನಲ್ಲಿ ನಕಲಿ ವಾರಸುದಾರರನ್ನು ಸೃಷ್ಟಿಸಿ ಆದಿಚುಂಚನಗಿರಿ ಮಠಕ್ಕೆ ಸೇರಿದ ₹120 ಕೋಟಿ ಮೌಲ್ಯದ ಜಮೀನನ್ನು ಕಬಳಿಸಿದ ಹೈಟೆಕ್ ವಂಚನೆ ಪ್ರಕರಣವನ್ನು ಕೆಂಗೇರಿ ಪೊಲೀಸರು ಭೇದಿಸಿದ್ದು, 6 ಸರ್ಕಾರಿ ಅಧಿಕಾರಿಗಳು ಸೇರಿದಂತೆ 11 ಮಂದಿಯನ್ನು ಬಂಧಿಸಿದ್ದಾರೆ.
ಕೆಂಗೇರಿ ಹೋಬಳಿಯ ಕಂಬಳಿಪುರ ಗ್ರಾಮದ ಸರ್ವೇ ನಂ.43ರಲ್ಲಿ ಮಠಕ್ಕೆ ದಾನವಾಗಿ ಬಂದಿದ್ದ 45 ಎಕರೆ ಜಮೀನಿನ ಪೈಕಿ 6 ಎಕರೆ ಜಮೀನನ್ನು ಕಬಳಿಸಲು ಮಾಸ್ಟರ್ ಮೈಂಡ್ ನರೇಶ್ ಗೌಡ ಮತ್ತು ಆತನ ಸಹಚರರು ಸೂಕ್ಷ್ಮ ಸಂಚು ರೂಪಿಸಿದ್ದರು.
ಮೂಲ ಮಾಲೀಕರ ಹೆಸರಿನಲ್ಲೇ ಮೃತಪಟ್ಟಿದ್ದ ವ್ಯಕ್ತಿಯ ಸಮಾಧಿಯನ್ನು ಪತ್ತೆಹಚ್ಚಿದ ಆರೋಪಿಗಳು, ಆತನ ಕುಟುಂಬದ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡು ರೌಡಿ ಶೀಟರ್ ಫ್ರಾನ್ಸಿಸ್ ಹಾಗೂ ಜೋಸ್ವಾನ್ ಅವರನ್ನು ವಾರಸುದಾರರೆಂದು ತೋರಿಸಿ ನಕಲಿ ವಂಶವೃಕ್ಷ ಮತ್ತು ದಾಖಲೆಗಳನ್ನು ಸೃಷ್ಟಿಸಿದ್ದರು.
ಈ ಅಕ್ರಮಕ್ಕೆ ಬೇಗೂರು ಹಾಗೂ ಕೆಂಗೇರಿ ಕಂದಾಯ ಇಲಾಖೆಯ ಅಧಿಕಾರಿಗಳೇ ಕೈಜೋಡಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಲಕ್ಷಾಂತರ ರೂಪಾಯಿ ಲಂಚ ಪಡೆದು ವಿಲೇಜ್ ಅಕೌಂಟೆಂಟ್ಗಳು, ರೆವಿನ್ಯೂ ಇನ್ಸ್ಪೆಕ್ಟರ್ಗಳು ಹಾಗೂ ಡೆಪ್ಯೂಟಿ ತಹಶೀಲ್ದಾರ್ಗಳು ನಕಲಿ ದಾಖಲೆಗಳನ್ನು ಸಿದ್ಧಪಡಿಸಿ, ಖಾತೆ ಬದಲಾವಣೆಗೂ ಅನುಮೋದನೆ ನೀಡಿದ್ದರು.
ನಂತರ ಜಮೀನನ್ನು ಮೂರನೇ ವ್ಯಕ್ತಿಗೆ ಮಾರಾಟ ಮಾಡಿ ಆರೋಪಿಗಳು ಭಾರೀ ಹಣ ಸಂಪಾದಿಸಿದ್ದರು. ಜಮೀನು ಅಕ್ರಮವಾಗಿ ವರ್ಗಾವಣೆಯಾಗಿರುವ ಮಾಹಿತಿ ತಿಳಿದ ಮಠದ ಆಡಳಿತ ಮಂಡಳಿ ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆಯಲ್ಲಿ ಸಂಪೂರ್ಣ ಸಂಚು ಬಯಲಾಗಿದೆ.
ಪ್ರಸ್ತುತ 11 ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ನರೇಶ್ ಗೌಡನಿಗಾಗಿ ತೀವ್ರ ಶೋಧ ಕಾರ್ಯ ಮುಂದುವರಿಸಿದ್ದಾರೆ.



