ಗದಗ:- ಜಿಲ್ಲೆಯ ರೋಣ ಪಟ್ಟಣದಲ್ಲಿ ಪಿಡಿಒ ಮಕ್ತುಂ ಹುಸೇನ್ ಕರಡಿಗುಡ್ಡ (46) ಅವರು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಗುರುವಾರ ಬೆಳಗಿನ ಜಾವ ಬೆಳಕಿಗೆ ಬಂದಿದೆ.
ಪಟ್ಟಣದ ಶ್ರೀನಗರದಲ್ಲಿನ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಅವರು ಜೀವನ ಅಂತ್ಯಗೊಳಿಸಿಕೊಂಡಿದ್ದಾರೆ. ಮೂಲತಃ ಧಾರವಾಡದವರಾದ ಮಕ್ತುಂ ಹುಸೇನ್ ಅವರು ಎರಡು ತಿಂಗಳ ಹಿಂದೆ ರೋಣ ತಾಲೂಕಿನಲ್ಲಿ ಪಿಡಿಒ ಆಗಿ ಸೇವೆ ಆರಂಭಿಸಿದ್ದರು. ತಾಲೂಕಿನ ಅಸೂಟಿ ಹಾಗೂ ಕೊತಬಾಳ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಯಾಗಿ ಅವರನ್ನು ನಿಯೋಜಿಸಲಾಗಿತ್ತು. ಪಿಡಿಒಗಳ ಕೊರತೆಯಿಂದಾಗಿ ಎರಡು ಗ್ರಾಮ ಪಂಚಾಯತಿಗಳ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದ ಅವರು ಕೆಲಸದ ಒತ್ತಡದಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಇದಲ್ಲದೆ, 2021ರಿಂದ 2023ರ ಅವಧಿಗೆ ಸಂಬಂಧಿಸಿದಂತೆ ಅವರ ಮೇಲೆ ಲೋಕಾಯುಕ್ತ ಪ್ರಕರಣ ದಾಖಲಾಗಿತ್ತು ಎಂದು ತಿಳಿದು ಬಂದಿದೆ. ಕೊತಬಾಳ ಗ್ರಾಮ ಪಂಚಾಯತಿಯಲ್ಲಿ ನರೇಗಾ ಸಂಬಂಧಿತ ಪ್ರಕರಣವೂ ಇದ್ದು, “ಯಾರೋ ಮಾಡಿದ ತಪ್ಪಿಗೆ ನಾವು ಬೆಂಗಳೂರಿಗೆ ಅಲೆದಾಡಬೇಕಾಗಿದೆ” ಎಂದು ಅವರು ತಮ್ಮ ಆಪ್ತರ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾಗಿ ತಿಳಿದು ಬಂದಿದೆ.
ಮೃತರ ಪತ್ನಿ ಆಸ್ಮಾಬಾನು ಅವರು ಮಾಧ್ಯಮಗಳಿಗೆ ನೀಡಿದ ಮಾಹಿತಿಯಂತೆ, “ಎರಡು ಗ್ರಾಮ ಪಂಚಾಯತಿಗಳ ಕೆಲಸ ನಿರ್ವಹಿಸಲು ಕಷ್ಟವಾಗುತ್ತಿದೆ ಎಂದು ಅವರು ಆಗಾಗ ಹೇಳುತ್ತಿದ್ದರು. ಒಂದೇ ಗ್ರಾಮ ಪಂಚಾಯತಿಯಲ್ಲಿ ಕೆಲಸ ಮಾಡಲು ಅವಕಾಶ ಸಿಗಬಹುದು ಎಂದು ತಾಪಂ ಇಒ ತಿಳಿಸಿದ್ದಾರೆ ಎಂದು ಹೇಳಿದರು. ಮಂಗಳವಾರ ರಾತ್ರಿ ಮಾತನಾಡಿ ‘ಸುಸ್ತಾಗಿದ್ದೇನೆ, ಮತ್ತೆ ಕರೆ ಮಾಡಬೇಡಿ’ ಎಂದಿದ್ದರು. ನಂತರ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಮನೆಯ ಮಾಲೀಕರಿಗೆ ತಿಳಿಸಿದಾಗ ಘಟನೆ ತಿಳಿಯಿತು” ಎಂದು ತಿಳಿಸಿದ್ದಾರೆ.
ಈ ಸಂಬಂಧ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ರೋಣ ತಾಲೂಕು ಪಂಚಾಯತ್ ಇಒ ಚಂದ್ರಶೇಖರ್ ಕಂದಕೂರ ಮಾತನಾಡಿ,“ಅಸೂಟಿ ಗ್ರಾಮ ಪಂಚಾಯತ್ ಸಮಸ್ಯೆ ಬಗ್ಗೆ ನನ್ನ ಗಮನಕ್ಕೆ ತಂದಿದ್ದರು. ನಾನು ಸಹ ಅವರಿಗೆ ಧೈರ್ಯ ನೀಡಿ, ಸ್ವತಃ ಅಲ್ಲಿಗೆ ತೆರಳಿ ಸಮಸ್ಯೆ ಬಗೆಹರಿಸಿದ್ದೆ. ಅಲ್ಲದೆ ಗ್ರಾಪಂ ಬದಲಾಯಿಸುವ ಬಗ್ಗೆಗೂ ತಿಳಿಸಿದ್ದೆ. ‘ಚಿಕ್ಕ ಮಕ್ಕಳು ಇದ್ದಾರೆ ಸರ್, ಶಾಲೆ ಆರಂಭವಾದ ತಕ್ಷಣ ಇಲ್ಲಿಯೇ ಶಾಲೆಗೆ ಸೇರಿಸುತ್ತೇನೆ’ ಎಂದು ಹೇಳಿದ್ದರು. ಆದರೆ ಅವರು ಹೀಗೆ ಮಾಡಿಕೊಂಡಿರುವುದು ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ.
ಪಿಎಸ್ಐ ಪ್ರಕಾಶ ಬಣಕಾರ ಮಾತನಾಡಿ, ಸಿಪಿಐ ಸಾಹೇಬರು ಹಾಗೂ ನಾನು ಸ್ಥಳಕ್ಕೆ ಭೇಟಿ ನೀಡಿದ್ದೇವೆ. ನಮ್ಮ ವಿಶೇಷ ತನಿಖಾ ತಂಡವೂ ಆಗಮಿಸಿದೆ. ಮುಂದಿನ ಕ್ರಮಗಳ ಕುರಿತು ನಂತರ ಹೆಚ್ಚಿನ ಮಾಹಿತಿಯನ್ನು ನೀಡಲಾಗುವುದು ಎಂದರು.



