ಬೆಳಗಾವಿ: ಮುಂಗಾರು ಮಳೆಯ ವಿಳಂಬದಿಂದ ಹಿಡಕಲ್ ಜಲಾಶಯದ ನೀರಿನ ಮಟ್ಟ ಇಳಿಕೆಯಾಗುತ್ತಿದ್ದಂತೆಯೇ, ಜಲಗರ್ಭದಲ್ಲಿ ಮುಳುಗಿದ್ದ ಐತಿಹಾಸಿಕ ವಿಠ್ಠಲ ದೇವಸ್ಥಾನ ಮತ್ತೆ ಬೆಳಕಿಗೆ ಬಂದಿದೆ.
ಹುಕ್ಕೇರಿ ತಾಲೂಕಿನ ಹುನ್ನೂರು ಗ್ರಾಮದಲ್ಲಿದ್ದ ಈ ದೇವಸ್ಥಾನ 1928ರಲ್ಲಿ ನಿರ್ಮಾಣಗೊಂಡಿದ್ದು, 1978ರಲ್ಲಿ ಜಲಾಶಯ ನಿರ್ಮಾಣದ ಬಳಿಕ ಸಂಪೂರ್ಣ ಮುಳುಗಿತ್ತು. ಬರೋಬ್ಬರಿ 51 ವರ್ಷಗಳ ಬಳಿಕ ಈಗ ಮತ್ತೆ ದೇವಾಲಯದ ಸಂಪೂರ್ಣ ರಚನೆ ಗೋಚರವಾಗಿದ್ದು, ಇತಿಹಾಸ ಮರುಕಳಿಸಿದಂತಾಗಿದೆ.
2023ರ ಬರಗಾಲದ ಸಂದರ್ಭದಲ್ಲೂ ದೇವಾಲಯ ಮೊದಲ ಬಾರಿಗೆ ಹೊರಬಂದಿದ್ದರೆ, ಈಗ 2026ರಲ್ಲಿ ಮತ್ತೊಮ್ಮೆ ನೀರಿನ ಮಟ್ಟ ಕುಸಿತದಿಂದ ಅದು ಸ್ಪಷ್ಟವಾಗಿ ಕಾಣಿಸುತ್ತಿದೆ. ದೀರ್ಘಕಾಲ ನೀರಿನಲ್ಲಿದ್ದರೂ ದೇವಾಲಯದ ರಚನೆ ಹಾಗೂ ವಿಠ್ಠಲನ ವಿಗ್ರಹ ಅಚಲವಾಗಿರುವುದು ಭಕ್ತರಲ್ಲಿ ಅಚ್ಚರಿ ಹಾಗೂ ಭಕ್ತಿಭಾವ ಮೂಡಿಸಿದೆ.
ದೇವಾಲಯ ಗೋಚರಿಸುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಜಿಲ್ಲೆ ಹಾಗೂ ಪಕ್ಕದ ಮಹಾರಾಷ್ಟ್ರದಿಂದಲೂ ಭಕ್ತರು ದಾಳಿ ಮಾಡುತ್ತಿದ್ದು, ವಿಠ್ಠಲನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ನೀರಿನ ಕೊರತೆ ಆತಂಕಕಾರಿಯಾಗಿದ್ದರೂ, ಇತಿಹಾಸದ ಈ ಅಪರೂಪದ ಮರುಪ್ರಕಟನೆ ಭಕ್ತ ವಲಯದಲ್ಲಿ ಭಕ್ತಿ ಉತ್ಸಾಹವನ್ನು ಹೆಚ್ಚಿಸಿದೆ.



