ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ರೈತರ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಮೋಸ ಮಾಡಿದೆ. ರಾಜ್ಯದಲ್ಲಿ ಇಷ್ಟು ದೊಡ್ಡ ಬರ ಇದ್ದರೂ ರಾಜ್ಯ ಸರ್ಕಾರ ಒಂದು ಪೈಸೆ ತನ್ನ ಖಜಾನೆಯಿಂದ ಕೊಟ್ಟಿಲ್ಲ. ಕೇಂದ್ರ ಸರ್ಕಾರ 3500 ಕೋಟಿ ರೂ. ಕೊಟ್ಟಿದೆ. ಇವರು ಅದಕ್ಕೆ ಸಮನಾದ ಹಣ ಸೇರಿಸಿ ಕೊಡುವಂತೆ ಕೇಳಿದರೂ ಕೊಡುತ್ತಿಲ್ಲ. ಇಂತಹ ರೈತ ವಿರೋಧಿ ಸರ್ಕಾರ ಇರಬೇಕಾ ಎಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.
ಗಜೇಂದ್ರಗಡದಲ್ಲಿ ಬಿಜೆಪಿ ಏರ್ಪಡಿಸಿದ್ದ ಬೃಹತ್ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿಜವಾದ ರೈತ ನಾಯಕ ಯಡಿಯೂರಪ್ಪ. 2008ರಲ್ಲಿ ಎಲ್ಲ ರೈತರಿಗೂ 10 ಎಚ್ಪಿವರೆಗಿನ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ನೀಡುವ ಆದೇಶ ಮಾಡಿದರು. ಹೈನುಗಾರರಿಗೆ ಪ್ರೋತ್ಸಾಹ ಧನ ನೀಡಿದರು. ಖಾಸಗಿ ವಲಯದಲ್ಲಿದ್ದ ರಸಗೊಬ್ಬರವನ್ನು ಸೊಸೈಟಿ ಮೂಲಕ ಕೊಡುವ ವ್ಯವಸ್ಥೆ ಜಾರಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಭಯೋತ್ಪಾದಕರನ್ನು ಅವರ ನೆಲದಲ್ಲೇ ಹೋಗಿ ದ್ವಂಸ ಮಾಡಿ, ಭಯೊತ್ಪಾದಕರಿಗೆ ಭಯ ಹುಟ್ಟುವಂತೆ ಮಾಡಿದರು. ಕೋವಿಡ್ ಸಂದರ್ಭದಲ್ಲಿ ಎಲ್ಲರಿಗೂ ಲಸಿಕೆ ಕೊಟ್ಟು ಜೀವ ಉಳಿಸಿದರು. ಉಜ್ವಲ ಗ್ಯಾಸ್ ಕೊಟ್ಟು, ಐದು ಕೆಜಿ ಉಚಿತ ಅಕ್ಕಿ ಕೊಟ್ಟಿರುವುದು ಮೋದಿಯವರು. ಅದನ್ನು ಕಾಂಗ್ರೆಸ್ ತನ್ನ ಭಾಗ್ಯ ಎಂದು ಹೇಳಿಕೊಳ್ಳುತ್ತಿದೆ. ಮೋದಿಯವರ ಋಣ ತೀರಿಸಲು ಬಿಜೆಪಿಗೆ ಮತದಾನ ಮಾಡುವ ಮೂಲಕ ಮೋದಿಯವರನ್ನು ಗೆಲ್ಲಿಸಿ. ಹಾವೇರಿ-ಗದಗ ಕ್ಷೇತ್ರದಿಂದ ನನ್ನನ್ನು ಆರಿಸಿ ಕಳಿಸಿದರೆ ಸಂಸತ್ತಿನಲ್ಲಿ ನಿಮ್ಮ ಪರವಾಗಿ ನಿಲ್ಲುತ್ತೇನೆ ಎಂದರು.
ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವ ಕಳಕಪ್ಪ ಬಂಡಿ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.
ಯಡಿಯೂರಪ್ಪ ಅವರ ಅವಧಿಯಲ್ಲಿ ಸಿಂಗಟಾಲೂರು ಯೋಜನೆ ಜಾರಿಗೊಳಿಸಿ ನೀರು ತಂದಿದ್ದಾರೆ. ಕಾಂಗ್ರೆಸ್ನವರು ಕೃಷ್ಣಾ ಮೇಲ್ದಂಡೆ ಎರಡನೇ ಹಂತ ಅಸಾಧ್ಯ ಎಂದರು. ನಾವು ಮಾಡಿದ ಮೇಲೆ ಕಾಂಗ್ರೆಸ್ನವರು ಅಡಿಗಲ್ಲು ಹಾಕುವ ಕೆಲಸ ಮಾಡಿದರು. ನಾವು ರೋಣ, ನರೇಗಲ್ಗೆ ನೀರು ತರುವ ಯೋಜನೆ ಮಾಡಿದ್ದೇವೆ. ಕಳಕಪ್ಪ ಬಂಡಿಯವರು ಕೆರೆ ತುಂಬಿಸುವ ಯೊಜನೆ ತಂದರೆ, ಈಗಿನ ಕಾಂಗ್ರೆಸ್ ಸರ್ಕಾರ ಅದನ್ನು ನಿಲ್ಲಿಸಿದೆ ಎಂದು ಬಸವರಾಜ ಬೊಮ್ಮಾಯಿ ಆರೋಪಿಸಿದರು.