ವಿಜಯಸಾಕ್ಷಿ ಸುದ್ದಿ, ಗದಗ : ಇಂಜಿನಿಯರಿಂಗ್ ವಿದ್ಯಾರ್ಜನೆ ಮಾಡುವ ವಿದ್ಯಾರ್ಥಿಗಳಲ್ಲಿ ವಿಶಿಷ್ಟವಾದ ತಾಂತ್ರಿಕ ಮತ್ತು ತಾರ್ಕಿಕ ಚಿಂತನೆ ಮಾಡುವ ಗುಣವಿರುತ್ತದೆ. ಅದನ್ನು ಬಳಸಿಕೊಂಡು ದೇಶಕ್ಕೆ ಉತ್ತಮೋತ್ತಮ ಕೊಡುಗೆಗಳನ್ನು ನೀಡಬೇಕು ಎಂದು ಡಾ. ಎಂ.ಎಂ. ಅವಟಿ ನುಡಿದರು.
ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯ ಕಂಪ್ಯೂಟರ್ ಸೈನ್ಸ್ ವಿಭಾಗ ಮತ್ತು ಕಂಪ್ಯೂಟರ್ ಸೈನ್ಸ್ ಡಿಸೈನ್ ವಿಭಾಗ ಮತ್ತು ಐಸೆಕ್ ಸೈಬರ್ ಸೆಕ್ಯುರಿಟಿ ಸೊಲ್ಯುಶನ್ಸ್ ಬೆಳಗಾವಿ ಇವುಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ `ಟಿ.ಸಿ.ಇ. ಹ್ಯಾಕಥಾನ್-2024′ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಐಸೆಕ್ ಕಂಪನಿಯ ಗಜೇಂದ್ರ ದೇಶಪಾಂಡೆ, ವಿದ್ಯಾಧೀಶ ಪಾಂಡುರಂಗಿ ಮಾತನಾಡಿ, ಇಂದಿನ ದಿನಗಳಿಗನುಸಾರವಾಗಿ ತಾಂತ್ರಿಕ ಸಮಸ್ಯೆಗಳ ಮೂಲವನ್ನು ಕಂಡುಕೊಂಡು ಅದಕ್ಕೆ ಅನುಗುಣವಾಗಿ ತಾಂತ್ರಿಕ ಉಪಾಯಗಳನ್ನು ಹುಡುಕುವುದು ಇಂಜಿನಿಯರ್ಗಳಿಗೆ ಸವಾಲಿನ ಕೆಲಸವಾಗಿದೆ.
ಅದನ್ನು ತಾಂತ್ರಿಕ ಕೌಶಲ್ಯಗಳ ಮೂಲಕ ಹೇಗೆ ಪರಿಹರಿಸಬೇಕು ಎನ್ನುವುದನ್ನು ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಿಗೆ ಸುಲಭವಾಗಿ ತಿಳಿಸಿಕೊಡಬಹುದು ಎಂದರು.
ಬೆಳಗಾವಿಯ ಗೋಗಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ ಪ್ರಥಮ ಬಹುಮಾನವಾಗಿ 15 ಸಾವಿರ ರೂ ಹಾಗೂ ದ್ವಿತೀಯ ಬಹುಮಾನವಾಗಿ 10 ಸಾವಿರ ರೂಪಾಯಿಗಳ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು.
ಮೂರನೆಯ ಬಹುಮಾನವಾಗಿ 5 ಸಾವಿರ ರೂ. ನಗದು ಬಹುಮಾನವನ್ನು ಹುಬ್ಬಳ್ಳಿಯ ಜೈನ್ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಸಂಶೋಧನಾ ಕೇಂದ್ರ ಮತ್ತು ಬೆಂಗಳೂರಿನ ಆರ್.ವಿ. ಕಾಲೇಜ್ ಪಡೆದುಕೊಂಡಿತು.
ವೇದಿಕೆಯ ಮೇಲೆ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ರಮೇಶ ಬಡಿಗೇರ, ಕಂಪ್ಯೂಟರ್ ಸೈನ್ಸ್ ಮತ್ತು ಡಿಸೈನ್ ವಿಭಾಗದ ಮುಖ್ಯಸ್ಥ ಪ್ರೊ. ವಿಜಯಕುಮಾರ ಮಾಲಗತ್ತಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲಕಿ ಪ್ರೊ. ತೃಪ್ತಿ ಕುರಡಗಿ, ಪ್ರೊ. ಆಧೋಕ್ಷಜಾ ಕುಲಕರ್ಣಿ, ಮಾರ್ಗದರ್ಶಕರಾದ ಡಾ. ಶರ್ವಾಣಿ ಉಪಸ್ಥಿತರಿದ್ದರು. ಎಲ್ಲ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿ ಸಂಚಾಲಕರಾದ ನಂದೀಶ, ಚನ್ನವೀರ, ಫಕ್ರುದ್ದೀನ್ ಸಹಕರಿಸಿದರು.