ಬಸವಣ್ಣ ಶ್ರೇಷ್ಠ ಚಿಂತಕರು : ಆರ್.ಎಸ್. ಬುರಡಿ

0
beo
Spread the love

ವಿಜಯಸಾಕ್ಷಿ ಸುದ್ದಿ, ಗದಗ : 12ನೇ ಶತಮಾನದ ಮಹಾನ್ ಕ್ರಾಂತಿಕಾರಿ ವಿಭೂತಿ ಪುರುಷ ಬಸವಣ್ಣನವರು ಸಾಮಾಜಿಕ ಚಿಂತನೆಗೆ ಒಂದು ಹೊಸ ದೃಷ್ಟಿಕೋನ ಬಿತ್ತಿದವರೆಂದು ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಅಭಿಪ್ರಾಯಪಟ್ಟರು.

Advertisement

ಅವರು ಶುಕ್ರವಾರ ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಂಪನ್ಮೂಲ ಕೇಂದ್ರದಲ್ಲಿ ಜರುಗಿದ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಬಸವಣ್ಣನವರು ಕಾಯಕದ ಮಹತ್ವದ ಕುರಿತಾಗಿ ಮನಮುಟ್ಟುವಂತೆ ತಮ್ಮ ವಚನಗಳಲ್ಲಿ ಬಿಂಬಿಸಿದ್ದಾರೆ.

ಕಾಯಕವೇ ಕೈಲಾಸವೆಂಬ ನುಡಿಯನ್ನು ಆಚರಣೆಗೆ ತರುವ ಮೂಲಕ ನಾವು ಬಸವಣ್ಣನವರಿಗೆ ಗೌರವ ಸಲ್ಲಿಸಬೇಕು. ವಚನಗಳ ಮೂಲಕ ಚಿಂತನೆಗೆ ದಾರಿ ಮಾಡಿಕೊಟ್ಟ ಶ್ರೇಷ್ಠ ಚಿಂತಕ ಬಸವಣ್ಣನವರು ಎಂದರು.

ಸಂಪನ್ಮೂಲ ವ್ಯಕ್ತಿ ಪ್ರಕಾಶ ಮಂಗಳೂರ ಮಾತನಾಡಿ, ಆಚಾರವೇ ಸ್ವರ್ಗ-ಅನಾಚಾರವೇ ನರಕ ಎಂಬ ಬಸವಣ್ಣನವರ ನುಡಿಯಲ್ಲಿ ನಡೆ-ನುಡಿ, ಆಚಾರ-ವಿಚಾರಗಳಲ್ಲಿ ಶುದ್ಧತೆ ಇರಬೇಕೆಂಬುದನ್ನು ಕಾಣುತ್ತೇವೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಪನ್ಮೂಲ ವ್ಯಕ್ತಿ ಕೆ.ಎಸ್. ಬೇಲೇರಿ, ಶರಣರ ಬದುಕು-ಬರಹ ಅಮೂಲ್ಯವಾದದ್ದು. ನುಡಿದಂತೆ ನಡೆದ ಮಹಾಪುರುಷರು. ಇವರ ಆದರ್ಶಯುತವಾದ ಬದುಕು ನಮಗೆ ಸದಾ ದಾರಿದೀಪ ಎಂದರು.

2024ರಲ್ಲಿ ಜರುಗಿದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಗುಣಮಟ್ಟ ಸುಧಾರಣೆಗಾಗಿ, ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡು ಉತ್ತಮ ಫಲಿತಾಂಶ ಪಡೆಯುವಲ್ಲಿ ಶ್ರಮಿಸಿದ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ, ಸಂಪನ್ಮೂಲ ವ್ಯಕ್ತಿಗಳಾದ ಪ್ರಕಾಶ ಮಂಗಳೂರ, ಶ್ಯಾಮ ಲಾಂಡೆ ಹಾಗೂ ಐ.ಬಿ. ಮಡಿವಾಳರ ಇವರನ್ನು ಎಲ್ಲ ಸಂಪನ್ಮೂಲ ವ್ಯಕ್ತಿಗಳು ಸನ್ಮಾನಿಸುವ ಮೂಲಕ ಕಾಯಕದ ಮಹತ್ವವನ್ನು ಸಾರಿದರು.

ಪ್ರಾರಂಭದಲ್ಲಿ ದೀಪಾ ಬೇವಿನಮರದ ಮತ್ತು ತನು ಹೂಗಾರ ವಚನ ಪ್ರಾರ್ಥನೆಗೈದರು. ರವಿ ಹೆಬ್ಬಳ್ಳಿ ಸ್ವಾಗತಿಸಿದರು. ವ್ಹಿ.ಟಿ. ದಾಸರಿ ನಿರೂಪಿಸಿದರು. ಸುಮಾ ಹಚಡದ ವಂದಿಸಿದರು. ಇ.ಡಿ. ಹುಗ್ಗೆಣ್ಣವರ ಮತ್ತು ಆರ್.ಡಿ. ಬೆಣಗಿ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here