ವಿಜಯಸಾಕ್ಷಿ ಸುದ್ದಿ, ಗದಗ : ದಶಕಗಳಿಂದ ಸರಕಾರಿ ಶಾಲೆಗಳ ಗುಣಮಟ್ಟ ದಿನದಿಂದ ದಿನಕ್ಕೆ ಹೆಚ್ಚಾಗುವುದರ ಜೊತೆಗೆ ಈ ಶಾಲೆಗಳ ಮಕ್ಕಳೇ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಬರುತ್ತಿದ್ದಾರೆ. ಆ ನಿಟ್ಟಿನಲ್ಲಿ ಸರಕಾರಿ ಶಾಲೆಗಳ ಮೇಲೆ ವಿಶ್ವಾಸವಿಟ್ಟು ಮಕ್ಕಳನ್ನು ಕಳುಹಿಸಿ ಎಂದು ಗದಗ ಶಹರದ ಸಿದ್ಧಲಿಂಗ ನಗರದ ಸರಕಾರಿ ಪ್ರೌಢಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯರಾದ ಜಯಲಕ್ಷ್ಮಿ ಬಸವರಾಜ ಅಣ್ಣಿಗೇರಿ ಪಾಲಕರಲ್ಲಿ ವಿನಂತಿಸಿದರು.
ಅವರು ಸ್ಥಳೀಯ ಸಿದ್ಧಲಿಂಗ ನಗರದ ಸರಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಶಾಲಾ ಪ್ರಾರಂಭೋತ್ಸವದಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಮಾತನಾಡಿದರು.
ಸರಕಾರಿ ಶಾಲೆಗಳು ಇಂದು ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಹೊಂದುವುದರ ಜೊತೆಗೆ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹಿಂದೆ ಬಿದ್ದಿಲ್ಲ. ಅಲ್ಲದೇ ಈ ವರ್ಷ ಶೈಕ್ಷಣಿಕ ಬಲವರ್ಧನೆ ವರ್ಷವನ್ನಾಗಿ ಸರಕಾರ ಸಂಕಲ್ಪ ಮಾಡಿದೆ. ಸಭಾಪತಿಗಳಾದ ಬಸವರಾಜ ಹೊರಟ್ಟಿ ದಂಪತಿಗಳು ಈ ಶಾಲೆಯನ್ನು ದತ್ತು ಪಡೆದು ಎಲ್ಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ದಾರೆ. ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆ ಆಗದಂತೆ ನೋಡಿಕೊಂಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಶಿಕಲಾ ಗುಳೆದವರ, ಸರ್ವಮಂಗಳ ಪತ್ತಾರ್, ಮಂಜುಳಾ ಸಾಂಬ್ರಾಣಿ, ಎಸ್.ಬಿ. ಗದ್ದನಗೇರಿ, ಜಿ.ಎನ್. ಅಳವಂಡಿ, ಶಂಕ್ರಮ್ಮ ಹನಮಗೌಡರ, ಶಾರದಾ ಬಾಣದ, ಶೋಭಾ ಗಾಳಿ, ಎಸ್.ಯು. ಕುಷ್ಟಗಿ, ವಿ.ಬಿ. ಶಿವನಗೌಡರ, ನಾಗಪ್ಪ ಶಿರೋಳ, ರಮೇಶ ಬಸರಿ, ಪದ್ಮಾವತಿ ದಾಸರ, ಎಲ್.ಬಿ. ಮಾಳೊತ್ತರ ಸೇರಿದಂತೆ ಶಾಲೆಯ ಎಲ್ಲ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.