ವಿಜಯಸಾಕ್ಷಿ ಸುದ್ದಿ, ಗದಗ : ಬೀದಿ ಬದಿ ವ್ಯಾಪಾರಿಗಳ ಹಿತಾಸಕ್ತಿ ಕಾಪಾಡುವ ಮತ್ತು ನಿಯಮಗಳನ್ನು ರೂಪಿಸುವ ಉದ್ದೇಶದಿಂದ ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯ ರಕ್ಷಣೆ ಮತ್ತು ವ್ಯಾಪಾರ ನಿಬಂಧನೆ) ಅಧಿನಿಯಮ-2014ನ್ನು ಅನುಷ್ಠಾನಗೊಳಿಸುವಂತೆ ಗದಗ-ಬೆಟಗೇರಿ ಪಟ್ಟಣ ವ್ಯಾಪಾರ ಸಮಿತಿಯ ಸದಸ್ಯರಾದ ಅನ್ವರ ಶಿರಹಟ್ಟಿಯವರು ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷರಿಗೆ ಮತ್ತು ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯಾವುದೇ ನಿರ್ಧಾರಗಳು ಬೀದಿ ಬದಿ ವ್ಯಾಪಾರಕ್ಕೆ ಸಂಬಂದಪಟ್ಟಿರುವಾಗ ಆಯಾ ಸ್ಥಳೀಯ ಸಂಸ್ಥೆಗಳಲ್ಲಿ ರಚನೆಗೊಂಡ ಪಟ್ಟಣ ವ್ಯಾಪಾರ ಸಮಿತಿಯು ಜವಾಬ್ದಾರಿಯನ್ನು ಹೊಂದಿರುತ್ತದೆ. ಆದರೆ ನಿರ್ಣಯಗಳು ಪಟ್ಟಣ ವ್ಯಾಪಾರ ಸಮಿತಿ ಸದಸ್ಯರ ಗಮನಕ್ಕೆ ಬಾರದೆ ಜಾರಿಗೆ ಬರುತ್ತಿರುವುದು ಕಾನೂನು ಉಲ್ಲಂಘನೆ ಮತ್ತು ಪ್ರಜಾಪ್ರಭುತ್ವ ವಿರೋಧಿ, ಏಕಪಕ್ಷೀಯ ಮತ್ತು ಸರ್ವಧಿಕಾರಿ ಧೋರಣೆಯಾಗಿದೆ ಎಂದರು.
ನಗರಸಭೆ ಪೌರಾಯುಕ್ತರಿಗೆ ಹಾಗೂ ಸಮುದಾಯ ಸಂಘಟನೆ ಅಧಿಕಾರಿಗಳಿಗೆ ವಿನಂತಿ ಮಾಡಿಕೊಂಡರೂ ಸ್ಪಂದನೆ ದೊರೆತಿಲ್ಲ. ಆದ್ದರಿಂದ ಗದಗ-ಬೆಟಗೇರಿ ನಗರಸಭೆ ವತಿಯಿಂದ 10 ರೂ.ಗಳ ಸಂಗ್ರಹಣೆ ಮಾಡುವುದನ್ನು ನಿಲ್ಲಿಸಬೇಕು. ಕಾನೂನು ಪ್ರಕಾರ ಪಟ್ಟಣ ವ್ಯಾಪಾರ ಸಮಿತಿ ನಿರ್ಧಾರಗೊಳ್ಳುವವರೆಗೆ ಬೀದಿ ಬದಿ ವ್ಯಾಪಾರಿಗಳಿಂದ ಶುಲ್ಕ ಸಂಗ್ರಹಣೆ ನಿಲ್ಲಿಸಬೇಕೆಂದು ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಇದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಪಟ್ಟಣ ಮಾರಾಟ ಸಮಿತಿಯ ಸದಸ್ಯರಾದ ರಾಜೇಖಾನ ಗುಲಾಬಖಾನ ಪಠಾಣ, ಜಾಫರ ಢಾಲಾಯತ, ಹಜಮತ ಆಲದಕಟ್ಟಿ ಉಪಸ್ಥಿತರಿದ್ದರು.



