ವಿಜಯಸಾಕ್ಷಿ ಸುದ್ದಿ, ಗದಗ : ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಯಡಿಯೂರು ಗ್ರಾಮದಲ್ಲಿ ದ್ವಿತೀಯ ಬಸವೇಶ್ವರರೆನಿಸಿದ ಶ್ರೀ ತೋಂಟದ ಸಿದ್ಧಲಿಂಗ ಶಿವಯೋಗಿಗಳ ಜೀವಂತ ಸಮಾಧಿಯಿದ್ದು, ದೊಡ್ಡ ದೊಡ್ಡ ಕ್ಷೇತ್ರಗಳಲ್ಲಿ ಆನೆ ಇರುವಂತೆ ಯಡಿಯೂರಿನಲ್ಲಿಯೂ ಇರಲಿ ಎಂಬ ಸದಾಶಯದಿಂದ ಕನ್ನಡದ ಕುಲಗುರುಗಳಾಗಿದ್ದ ಡಂಬಳ-ಗದುಗಿನ ಪೂಜ್ಯ ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ತಮ್ಮ ಮಠದ ಗಂಗಾ ಎಂಬ ಆನೆಯನ್ನು ಮುಜರಾಯಿ ಇಲಾಖೆಗೆ ಸೇರಿದ ಯಡಿಯೂರು ಶ್ರೀ ತೋಂಟದ ಸಿದ್ಧಲಿಂಗ ಶಿವಯೋಗಿಗಳ ಮಠಕ್ಕೆ ದಾನವಾಗಿ ಕೊಟ್ಟರು.
1996ರಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ ಜೆ.ಎಚ್. ಪಟೇಲರು ಅದೇ ದಿನ ಯಡಿಯೂರಿಗೆ ಅಂದಿನ ಸಚಿವರಾಗಿದ್ದ ಎಂ.ಪಿ. ಪ್ರಕಾಶ್ ಅವರೊಂದಿಗೆ ಬಂದು ಈ ಆನೆಯನ್ನು ದಾನಿಗಳಾದ ಪೂಜ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರಿಂದ ಯಡಿಯೂರು ಕ್ಷೇತ್ರದಲ್ಲಿ ಮುಜರಾಯಿ ಇಲಾಖೆಯ ಪರವಾಗಿ ದಾನವಾಗಿ ಸ್ವೀಕರಿಸಿದ್ದು ಇತಿಹಾಸ.
ಆದರೆ ಇತ್ತೀಚೆಗೆ 2-3 ತಿಂಗಳ ಹಿಂದೆ ಆರೋಗ್ಯಕರವಾಗಿದ್ದ ಈ ಆನೆಯನ್ನು ಕಾಡಿಗೆ ಒಯ್ಯಬಾರದು, ರಕ್ಷಿಸಲು ದಾನಿಗಳಿಗೆ ಆನೆಯನ್ನು ಮರಳಿ ಕೊಡಬೇಕು ಎಂದು ಸೂಚನೆ ನೀಡಿದರೂ ಸಹ ದಾನಿಗಳ ಮತ್ತು ಭಕ್ತರ ಮಾತನ್ನು ಕೇಳದೆ ಕೋಲಾರದ ಹತ್ತಿರ ಕಾಡಿಗೆ ಬಿಟ್ಟು ಬರಲಾಗಿದೆ.
ಎಡೆಯೂರು ದೇವಸ್ಥಾನಕ್ಕೆ ಪ್ರತಿ ವರ್ಷ ಅಂದಾಜು 30 ಕೋಟಿ ರೂಪಾಯಿಗಿಂತ ಅಧಿಕ ಆದಾಯವಿದ್ದರೂ ದಾನವಾಗಿ ನೀಡಿದ ಈ ಆನೆಯನ್ನು ಸಾಕಲು ಸಾಧ್ಯವಾಗದೇ ಕಾಡಿಗೆ ಬಿಟ್ಟು ಬಂದಿರುವುದಕ್ಕೆ ಶ್ರೀ ಸ್ವಾಮಿಯ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗ ಈ ಆನೆ ದುರಾದೃಷ್ಟವಶಾತ್ ಸಾಯುವ ಹಂತಕ್ಕೆ ಬಂದಿದೆ. ಕೆಲ ಪಟ್ಟಭದ್ರ ಶಕ್ತಿಗಳ ಕುತಂತ್ರಕ್ಕೆ ಈ ಆನೆಯನ್ನು ಬಲಿ ನೀಡಲಾಗುತ್ತಿದೆ. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಶ್ರೀ ಎಡೆಯೂರು ಸಿದ್ಧಲಿಂಗೇಶ್ವರ ಸ್ವಾಮಿಯ ಭಕ್ತರು ಪತ್ರಿಕಾ ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.