ವಿಜಯಸಾಕ್ಷಿ ಸುದ್ದಿ, ಹುಲಕೋಟಿ : ಜಿಲ್ಲಾ ಪಂಚಾಯತ ಗದಗ, ತೋಟಗಾರಿಕೆ ಇಲಾಖೆ ಗದಗ, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ ಬೆಂಗಳೂರು ಹಾಗೂ ಐ.ಸಿ.ಎ.ಆರ್-ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಮಾವು ಬೇಸಾಯದಲ್ಲಿ ಆಧುನಿಕ ತಾಂತ್ರಿಕತೆಗಳ ಕುರಿತು ತರಬೇತಿ ಕಾರ್ಯಕ್ರಮವನ್ನು ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಮಾವು ಅಭಿವೃದ್ಧಿ ಕೇಂದ್ರದ ತೋಟಗಾರಿಕೆ ಉಪನಿರ್ದೇಶಕ ಡಾ. ಶಿವಪ್ರಸಾದ ಬಿ.ಎಲ್ ಉದ್ಘಾಟಿಸಿ ಮಾತನಾಡಿ, ಮಾವು ಬೆಳೆಯುವ ರೈತರಿಗೆ ತಮ್ಮ ಮಾವು ಅಭಿವೃದ್ಧಿ ನಿಗಮದಿಂದ ದೊರೆಯುವ ಸೌಲಭ್ಯಗಳು, ಮಾರುಕಟ್ಟೆ ಹಾಗೂ ಕೊಯ್ಲು ನಂತರದ ತಂತ್ರಜ್ಞಾನಗಳ ಕುರಿತು ಮಾಹಿತಿ ನೀಡಿದರು.
ಮಾವಿನ ಹಣ್ಣುಗಳನ್ನು ರಫ್ತು ಮಾಡಲು ಕೂಡ ಸಂಸ್ಥೆಯು ಸಲಹೆ, ಮಾರ್ಗದರ್ಶನ ಹಾಗೂ ಸೌಲಭ್ಯಗಳನ್ನು ನೀಡುತ್ತದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಡಾ. ಎಸ್.ವಿ. ಹಿತ್ತಲಮನಿ ಮಾತನಾಡಿ, ಮಾವು ಬೇಸಾಯದ ಕುರಿತು ವೈಜ್ಞಾನಿಕ ತಾಂತ್ರಿಕತೆಗಳು, ಸಲಹೆಗಳು ಹಾಗೂ ಮಾವಿನ ತೋಟಗಳ ನಿರ್ವಹಣೆ ಹಾಗೂ ಮಾವಿನ ಗಿಡಗಳ ಸವರುವಿಕೆಯ ಕುರಿತು ಮಾಹಿತಿ ನೀಡಿದರು. ಇನ್ನೋರ್ವ ಅತಿಥಿ ಶಶಿಕಾಂತ ಕೋಟಿಮನಿ, ಗದಗ ಜಿಲ್ಲೆಯಲ್ಲಿನ ಮಾವಿನ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು. ಗದಗ ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಜಿ.ಆರ್. ಓದುಗೌಡರ ಮಾತನಾಡಿ, ಮಾವಿನ ಜಿಗಿ ಹುಳು ಹಾಗೂ ಗದಗ ಜಿಲ್ಲೆಯಲ್ಲಿ ಮಾವಿನ ಬೆಳೆಯಲ್ಲಿ ಉಂಟಾದ ಸಮಸ್ಯೆಗಳ ಕುರಿತು ಮಾತನಾಡಿದರು.
ತರಬೇತಿ ಕಾರ್ಯಕ್ರಮದಲ್ಲಿ ಡಾ. ರಫಿ, ಶೈಲೇಂದ್ರ ಬಿರಾದಾರ, ಪ್ರಗತಿಪರ ರೈತರಾದ ವಿ.ಜಿ. ಹಿರೇಗೌಡರ, ದೇವೆಂದ್ರಪ್ಪ ಗೊಣೆಪ್ಪನವರ ಭಾಗವಹಿಸಿದ್ದರು. ತಾಂತ್ರಿಕ ಅಧಿವೇಶನದ ನಂತರ ಪ್ರಯೋಗಿಕವಾಗಿ ಗಿಡಗಳ ಸವರುವಿಕೆ, ಗಿಡಗಳ ಕಾಂಡಕ್ಕೆ ಸಂರಕ್ಷಣಾ ಲೇಪನ ಮಾಡುವುದು ಹಾಗೂ ಮಾವಿನ ಬೆಳೆಯಲ್ಲಿ ಸುಣ್ಣದ ಬಳಕೆ ಮತ್ತು ಹಾಕುವ ಪದ್ಧತಿಯ ಕುರಿತು ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಯಿತು.
ಕೃಷಿ ವಿಜ್ಞಾನ ಕೇಂದ್ರದ ಎನ್.ಎಚ್. ಭಂಡಿ ಸ್ವಾಗತಿಸಿದರು. ಹೇಮಾವತಿ ಹಿರೇಗೌಡರ ಕಾರ್ಯಕ್ರಮ ನಿರೂಪಿಸಿದರು. ಡಾ.ವಿನಾಯಕ ನಿರಂಜನ ವಂದಿಸಿದರು.
ಸುರೇಶ ಕುಂಬಾರ ಮಾವಿನ ಬೇಸಾಯದ ಆಧುನಿಕ ತಾಂತ್ರಿಕತೆಗಳ ತರಬೇತಿಯನ್ನು ಆಯೋಜಿಸಿರುವ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಸುಧಾ ಮಂಕಣಿ ಮಾತನಾಡಿ, ಈ ತರಬೇತಿ ಗದಗ ಜಿಲ್ಲೆಯ ರೈತರಿಗೆ ಅನುಕೂಲವಾಗಿದೆ. ರೈತರಿಗೆ ಹೊಸ ಹೊಸ ತಾಂತ್ರಿಕತೆಗಳು ಉಪಯುಕ್ತವಾಗಿವೆ. ಹೊಸ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಮಾವಿನ ಬೆಳೆಯಲ್ಲಿ ಉತ್ತಮ ಇಳುವರಿಯನ್ನು ಪಡೆಯೋಣ ಎಂದು ತಿಳಿಸಿದರು.