ಜೂನ್ 5ರಂದು ವಿಶ್ವದಾದ್ಯಂತ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ. ಆಧುನೀಕರಣ, ಜಾಗತೀಕರಣ ಹಾಗೂ ಔದ್ಯೋಗೀಕರಣದ ಭರಾಟೆಯಲ್ಲಿ ಅರಣ್ಯ ನಾಶ, ಪರಿಸರ ಹಾನಿ ಮತ್ತು ಹವಾಮಾನ ವೈಪರೀತ್ಯ ದಿನೇ ದಿನೇ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ತಮ್ಮ ಸಂಪೂರ್ಣ ಜೀವನವನ್ನೇ ಪರಿಸರ ಸಂರಕ್ಷಣೆಗೆ ಅರ್ಪಿಸಿದ ಅಪರೂಪದ ವ್ಯಕ್ತಿತ್ವವಾಗಿ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಸಾಮಾಜಿಕ ಕಾರ್ಯಕರ್ತ, ಹೋರಾಟಗಾರ ಹಾಗೂ ಪರಿಸರ ಪ್ರೇಮಿ ಗೋಣಿಬಸಪ್ಪ ಎಸ್. ಕೊರ್ಲಹಳ್ಳಿ ಗಮನ ಸೆಳೆಯುತ್ತಾರೆ.
ಪರಿಸರ ಉಳಿಸಿ ಬೆಳೆಸುವ ಸಂಕಲ್ಪದೊಂದಿಗೆ ದಶಕಗಳ ಕಾಲ ಹಸಿರು ಅಭಿಯಾನ ನಡೆಸುತ್ತಿರುವ ಗೋಣಿಬಸಪ್ಪ ಕೊರ್ಲಹಳ್ಳಿ ಅವರು, ಲಿಂ. ಪ.ಪೂ. ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಆಶಯದಂತೆ ಸಾವಿರಾರು ಗಿಡಗಳನ್ನು ನೆಟ್ಟು, ಪರಿಸರ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಶಾಲೆ, ಕಾಲೇಜುಗಳಲ್ಲಿ ಉಪನ್ಯಾಸಗಳ ಮೂಲಕ ಪರಿಸರ ಪ್ರಜ್ಞೆ ಬೆಳೆಸುತ್ತಿರುವ ಅವರು, ಗ್ರಾಮೀಣ ಭಾಗದಲ್ಲೇ ಪರಿಸರ ಚಳವಳಿಗೆ ಹೊಸ ದಿಕ್ಕು ನೀಡಿದ್ದಾರೆ.
ಹಲವಾರು ದಶಕಗಳ ಹಿಂದೆ ಡಂಬಳ ಗ್ರಾಮದಲ್ಲಿಯೇ “ತೋಂಟದಾರ್ಯ ಪರಿಸರ ಸಂರಕ್ಷಣಾ ವೇದಿಕೆ” ಸ್ಥಾಪಿಸಿ ಅದರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಗೋಣಿಬಸಪ್ಪ ಕೊರ್ಲಹಳ್ಳಿ, ಲಿಂ. ಪ.ಪೂ. ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ಪರಿಸರ ಸಂರಕ್ಷಣೆಯ ದೊಡ್ಡ ಅಭಿಯಾನ ರೂಪಿಸಿದರು.
ಡಂಬಳ ಬಸ್ ನಿಲ್ದಾಣ, ಆರೋಗ್ಯ ಕೇಂದ್ರ, ಶಾಲೆ-ಕಾಲೇಜು ಮೈದಾನಗಳು ಸೇರಿದಂತೆ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಅರಣ್ಯ ಬೆಳೆಸುವ ಗುರಿಯೊಂದಿಗೆ ಸಾವಿರಾರು ಗಿಡಗಳನ್ನು ನೆಟ್ಟು, ಗ್ರಾಮಕ್ಕೆ ಹಸಿರು ಹೊನ್ನು ತುಂಬಿದರು. ಪರಿಸರ ಪ್ರೇಮ ಕೇವಲ ಮಾತಿನಲ್ಲಿ ಉಳಿಯದೆ, ತಮ್ಮ ಸ್ವಂತ ಜಮೀನಲ್ಲಿಯೂ ಸಾವಿರಾರು ಸಾಗುವಾನಿ, ಮಾವು, ಪೇರಲ, ನೀರಲೆ ಸೇರಿದಂತೆ ವಿವಿಧ ಮರಗಳನ್ನು ಬೆಳೆಸಿ ಮಾದರಿಯಾಗಿದ್ದಾರೆ.
ಗದಗ ಜಿಲ್ಲೆಯ ಹಳ್ಳಿಗುಡಿ ಗ್ರಾಮದಲ್ಲಿ ನಡೆದ ಪೋಸ್ಕೋ ವಿರೋಧಿ ಪರಿಸರ ಹೋರಾಟದಲ್ಲಿ ಗೋಣಿಬಸಪ್ಪ ಕೊರ್ಲಹಳ್ಳಿ ಅವರು ಎಲೆಮರೆ ಕಾಯಿಯಂತೆ ಸಕ್ರಿಯ ಪಾತ್ರವಹಿಸಿದ್ದನ್ನು ಪರಿಸರ ಹೋರಾಟಗಾರರು ಇಂದು ಸ್ಮರಿಸುತ್ತಾರೆ.

ಈ ಹೋರಾಟದಲ್ಲಿ ಮೇಧಾ ಪಾಟ್ಕರ್, ಲಿಂ. ಪ.ಪೂ. ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು, ನಂದಿವೇರಿ ಶಿವಕುಮಾರ ಸ್ವಾಮೀಜಿಗಳು, ಹೋರಾಟಗಾರ ವಾಯ್.ಎನ್. ಗೌಡರ ಸೇರಿದಂತೆ ಹಲವಾರು ಪರಿಸರ ಹೋರಾಟಗಾರರು ಹಾಗೂ ಮಾಧ್ಯಮ ಪ್ರತಿನಿಧಿಗಳು ಭಾಗವಹಿಸಿದ್ದರು. ಪರಿಸರದ ಪರ ನಡೆದ ಆ ಹೋರಾಟದಲ್ಲಿ ಗೋಣಿಬಸಪ್ಪ ಅವರ ಹಸಿರು ಬದ್ಧತೆ ಸ್ಪಷ್ಟವಾಗಿ ವ್ಯಕ್ತವಾಗಿತ್ತು.
ಪರಿಸರ ಜಾಗೃತಿಗಾಗಿ ಡಂಬಳದಲ್ಲಿ ಆರಂಭವಾದ ತೋಂಟದಾರ್ಯ ಪರಿಸರ ಸಂಘಟನೆಯ ಮೂಲಕ ಅನೇಕರು ಹಸಿರು ಚಳವಳಿಗೆ ಕೈಜೋಡಿಸಿದರು. ತೋಂಟದಾರ್ಯ ಮಠದ ವ್ಯವಸ್ಥಾಪಕರಾಗಿರುವ ಹಾಗೂ ಸಂಘಟನೆಯ ಗೌರವಾಧ್ಯಕ್ಷರಾದ ಜಿ.ವಿ. ಹಿರೇಮಠ, ಪತ್ರಕರ್ತ ಸಿ.ಕೆ. ಗಣಪ್ಪನವರ, ಪರಿಸರವಾದಿ ಸಿ.ಎಸ್. ಅರಸನಾಳ, ವಿ.ಎಫ್. ಅಂಗಡಿ, ಮರಿತೆಮ್ಮಪ್ಪ ಆದಮ್ಮನವರ, ಮಂಜುನಾಥ ಸಂಜೀವಣ್ಣನವರ, ಆರ್.ಆರ್. ಕೊರ್ಲಗಟ್ಟಿ, ರಂಗಪ್ಪ ಜೊಂಡಿ, ವೀರಣ್ಣ ನಂಜಪ್ಪನವರ ಸೇರಿದಂತೆ ಹಲವಾರು ಜನರು ಪರಿಸರ ಅಭಿಯಾನದಲ್ಲಿ ಕೈಜೋಡಿಸಿದರು.

ಇದಲ್ಲದೇ ದಿವಂಗತ ಕೊಟ್ರಪ್ಪ ಕೊಟ್ಟೂರಶೆಟ್ಟರ ಹಾಗೂ ಚಂದ್ರಶೇಖಪ್ಪ ಗಡಗಿ ಸೇರಿದಂತೆ ಅನೇಕರು ಸಂಘಟನೆಯ ಮೂಲಕ ಪರಿಸರ ಸೇವೆ ಸಲ್ಲಿಸಿರುವುದನ್ನು ಗೋಣಿಬಸಪ್ಪ ಕೊರ್ಲಹಳ್ಳಿ ಸ್ಮರಿಸುತ್ತಾರೆ.
ಈ ಭಾಗದ ಮಾಜಿ ಶಾಸಕ ಹಾಗೂ ಸಚಿವರಾಗಿದ್ದ ಎಸ್.ಎಸ್. ಪಾಟೀಲರು, ಪ್ರಸ್ತುತ ಶಾಸಕ ಜಿ.ಎಸ್. ಪಾಟೀಲರು ಹಾಗೂ ಹೋರಾಟಗಾರ ವಾಯ್.ಎನ್. ಗೌಡರವರು ಪರಿಸರ ಜಾಗೃತಿಯಲ್ಲಿ ಭಾಗವಹಿಸಿ ಕಪ್ಪತ್ತಗುಡ್ಡ ರಕ್ಷಣೆಗೆ ಬೆಂಬಲ ನೀಡಿದ್ದಾರೆ.
ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕಪ್ಪತ್ತಗುಡ್ಡ ಪ್ರದೇಶದಲ್ಲಿ ಅರಣ್ಯೀಕರಣಕ್ಕೆ ಒತ್ತು ನೀಡಲಾಗಿದೆ. ನೀರಾವರಿ ಯೋಜನೆಗಳನ್ನು ಜಾರಿಗೆ ತಂದು ಕೆರೆ-ಕಟ್ಟೆಗಳಲ್ಲಿ ನೀರು ತುಂಬಿಸುವ ಕಾರ್ಯ ನಡೆದಿರುವುದು ಪರಿಸರ ಸಮತೋಲನ ಕಾಪಾಡುವಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಗೋಣಿಬಸಪ್ಪ ಕೊರ್ಲಹಳ್ಳಿ ಅವರು ಶಾಲೆ-ಕಾಲೇಜುಗಳಲ್ಲಿ ಪರಿಸರ ಉಪನ್ಯಾಸಗಳನ್ನು ನೀಡಿ, ಕಪ್ಪತ್ತಗುಡ್ಡಕ್ಕೆ ಬೆಂಕಿ ಹಚ್ಚುವುದು, ಅರಣ್ಯ ನಾಶ ಮಾಡುವುದು ಹಾಗೂ ವನ್ಯಜೀವಿಗಳ ಜೀವಕ್ಕೆ ಅಪಾಯ ತರುವ ಚಟುವಟಿಕೆಗಳ ವಿರುದ್ಧ ಜನಜಾಗೃತಿ ಮೂಡಿಸುತ್ತಿದ್ದಾರೆ.

ಪರಿಸರವೇ ಬದುಕು ಎನ್ನುವ ಹಸಿರು ಹೋರಾಟಗಾರ
ಪರಿಸರ ಜಾಗೃತಿಗಾಗಿ ತಮ್ಮ ಸಂಪೂರ್ಣ ಜೀವನವನ್ನೇ ಮುಡಿಪಾಗಿಟ್ಟಿರುವ ಗೋಣಿಬಸಪ್ಪ ಎಸ್. ಕೊರ್ಲಹಳ್ಳಿ ಅವರು, ದಶಕಗಳ ಕಾಲ ಪರಿಸರ ಸಂಘಟನೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಚಲಿತ ಪತ್ರಿಕೆಯ ಪತ್ರಕರ್ತರಾಗಿಯೂ ಕಾರ್ಯನಿರ್ವಹಿಸಿರುವ ಅವರು, ಸಾಮಾಜಿಕ ಹೋರಾಟಗಾರ ಹಾಗೂ ಪರಿಸರ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ.
ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರಾಗಿರುವ ಗೋಣಿಬಸಪ್ಪ ಅವರು, ಕಲೆ, ಸಾಹಿತ್ಯ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿಯೂ ಸಕ್ರಿಯರಾಗಿದ್ದು, ಪರಿಸರ ಕಾಳಜಿ ಮೂಲಕ ಸಮಾಜದಲ್ಲಿ ವಿಶಿಷ್ಟ ಗುರುತನ್ನು ಮೂಡಿಸಿದ್ದಾರೆ.
–ಶ್ರೀಕಾಂತ ಬಡಕಣ್ಣವರ, ಡಂಬಳ



