HomeArt and Literatureನೋವನ್ನು ಕಾವ್ಯವಾಗಿಸಿದ ಅಕ್ಷರಯೋಗಿಗೆ ‘ಕನಕ–ಶರೀಫ ಕಾವ್ಯ ಪುರಸ್ಕಾರ’

ನೋವನ್ನು ಕಾವ್ಯವಾಗಿಸಿದ ಅಕ್ಷರಯೋಗಿಗೆ ‘ಕನಕ–ಶರೀಫ ಕಾವ್ಯ ಪುರಸ್ಕಾರ’

For Dai;y Updates Join Our whatsapp Group

ಕೆಲವು ಬದುಕುಗಳು ಹುಟ್ಟುವುದಿಲ್ಲ, ರೂಪುಗೊಳ್ಳುತ್ತವೆ. ಕೆಲವು ಕವಿಗಳು ಕವಿತೆಗಳನ್ನು ಬರೆಯುವುದಿಲ್ಲ; ತಮ್ಮ ಬದುಕನ್ನೇ ಕಾವ್ಯವನ್ನಾಗಿ ರೂಪಿಸುತ್ತಾರೆ. ಇನ್ನೂ ಕೆಲವು ವ್ಯಕ್ತಿತ್ವಗಳು ತಮ್ಮ ಜೀವನದ ಪ್ರತಿಯೊಂದು ನೋವನ್ನು ಸಮಾಜಕ್ಕೆ ಬೆಳಕಾಗಿಸುವ ಶಕ್ತಿಯಾಗಿ ಪರಿವರ್ತಿಸುತ್ತವೆ. ಅಂತಹ ಅಪರೂಪದ ವ್ಯಕ್ತಿತ್ವವೇ ‘ಬಯಲ ಬೆಳಕಿನ ಕವಿ’ ಎ. ಎಸ್. ಮಕಾನದಾರ.

ಉತ್ತರ ಸಾಹಿತ್ಯ ವೇದಿಕೆ, ಹೆಬಸೂರು ನೀಡುವ 2024ನೇ ಸಾಲಿನ ಪ್ರತಿಷ್ಠಿತ ‘ಕನಕ–ಶರೀಫ ಕಾವ್ಯ ಪುರಸ್ಕಾರ’ಕ್ಕೆ ಮಕಾನದಾರರು ಆಯ್ಕೆಯಾಗಿರುವುದು ಕೇವಲ ಒಬ್ಬ ಕವಿಗೆ ಸಂದ ಗೌರವವಲ್ಲ. ಅದು ಬದುಕಿನ ನೋವನ್ನು ಸಾಹಿತ್ಯದ ಸೌಂದರ್ಯವನ್ನಾಗಿ ರೂಪಿಸಿದ ಮಾನವೀಯ ಕಾವ್ಯಕ್ಕೆ ಸಂದ ಅಭಿವಂದನೆ.

ಮಕಾನದಾರರನ್ನು ಅರ್ಥ ಮಾಡಿಕೊಳ್ಳಬೇಕಾದರೆ ಮೊದಲು ಅವರ ಕವಿತೆಗಿಂತ ಅವರ ಬದುಕನ್ನು ಓದಬೇಕು. ಅವರ ಬದುಕನ್ನು ಓದಿದಾಗಲೇ ಅವರ ಸಾಹಿತ್ಯದ ಆಳ ಅರ್ಥವಾಗುತ್ತದೆ. ಏಕೆಂದರೆ ಅವರು ಕಲ್ಪನೆಯ ಲೋಕದಲ್ಲಿ ಕವಿತೆ ಕಟ್ಟಿದವರಲ್ಲ; ಅನುಭವದ ಗಾಯಗಳಲ್ಲೇ ಪದಗಳನ್ನು ಅರಳಿಸಿದವರು.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬೇಲೂರಿನಲ್ಲಿ ಜನಿಸಿದ ಮಕಾನದಾರರ ಬಾಲ್ಯ ಸುಖದ ತೊಟ್ಟಿಲಲ್ಲ, ಹಸಿವಿನ ಹಾದಿಯಲ್ಲೇ ಬೆಳೆದದ್ದು. ಹನ್ನೆರಡು ಮಕ್ಕಳ ದೊಡ್ಡ ಕುಟುಂಬದಲ್ಲಿ ಒಂಬತ್ತನೆಯ ಮಗನಾಗಿ ಜನಿಸಿದ ಅವರು ಬದುಕಿನ ವಿಶ್ವವಿದ್ಯಾಲಯದಲ್ಲೇ ಪದವಿ ಪಡೆದವರು.

ಟೇಲರಿಂಗ್ ಅಂಗಡಿಯಲ್ಲಿ ಕಾಜಿ ಗುಂಡಿ ಹೊಲಿಯುವುದರಿಂದ ಆರಂಭವಾದ ಬದುಕಿನ ಪಯಣ, ಹೊಲದ ಕೂಲಿ, ಬೈಕ್ ರಿಪೇರಿ ಅಂಗಡಿ, ನೇಕಾರಿಕೆ, ಹಣ್ಣಿನ ವ್ಯಾಪಾರ, ಐಸ್‌ಕ್ರೀಂ ಮಾರಾಟ, ಪುಸ್ತಕದ ಅಂಗಡಿಯಲ್ಲಿ ಕೆಲಸ, ರಾತ್ರಿ ವೈನ್‌ಶಾಪ್‌ನಲ್ಲಿ ದುಡಿಮೆ ಹೀಗೆ ಹತ್ತಾರು ಉದ್ಯೋಗಗಳನ್ನು ದಾಟುತ್ತಾ ಸಾಗಿತು. ಬದುಕು ಯಾವ ಕೆಲಸ ಕೊಟ್ಟಿತೋ ಅದನ್ನು ಪ್ರಾಮಾಣಿಕವಾಗಿ ಮಾಡುತ್ತಲೇ ಅಕ್ಷರಗಳನ್ನು ಹೃದಯದಲ್ಲಿ ಸಂಗ್ರಹಿಸಿಕೊಂಡರು.

ಆದ್ದರಿಂದಲೇ ಅವರ ಕಾವ್ಯದಲ್ಲಿ ಕಣ್ಣೀರು ಕೇವಲ ರೂಪಕವಲ್ಲ; ಅದು ಬದುಕಿನ ಅನುಭವ. ನೋವು ಇದೆ, ಆದರೆ ನಿರಾಶೆ ಇಲ್ಲ. ಬಡತನ ಇದೆ, ಆದರೆ ಸೋಲಿನ ಭಾವನೆ ಇಲ್ಲ. ವಿರಹ ಇದೆ, ಆದರೆ ದ್ವೇಷ ಇಲ್ಲ. ಅವರ ಪ್ರತಿಯೊಂದು ಸಾಲಿನಲ್ಲೂ ಹರಿಯುವುದು ಮಾನವೀಯತೆಯ ನಿರ್ಮಲ ಹೊಳೆ.

ಮಕಾನದಾರರ ಕಾವ್ಯ ಓದುತ್ತಿದ್ದಂತೆ ಸೂಫಿ ಸಂತರ ಪ್ರೇಮದರ್ಶನವೂ ಕೇಳಿಸುತ್ತದೆ; ಬಸವಾದಿ ಶಿವಶರಣರ ಸಮಾನತೆಯ ಸಂದೇಶವೂ ಮೊಳಗುತ್ತದೆ. ಕನಕದಾಸರ ಮಾನವತೆಯ ಕಳಕಳಿ ಮತ್ತು ಶಿಶುನಾಳ ಶರೀಫರ ವಿಶ್ವಮಾನವತೆಯ ಕನಸು ಅವರ ಕಾವ್ಯದಲ್ಲಿ ಹೊಸ ರೂಪ ಪಡೆಯುತ್ತದೆ. ಅದಕ್ಕಾಗಿಯೇ ಅವರಿಗೆ ಲಭಿಸಿರುವ ‘ಕನಕ–ಶರೀಫ ಕಾವ್ಯ ಪುರಸ್ಕಾರ’ ಅವರ ಸಾಹಿತ್ಯದ ತಾತ್ವಿಕ ಎತ್ತರಕ್ಕೆ ಸಲ್ಲುವ ಗೌರವವಾಗಿದೆ.

ಕವಿಯಾಗಿ ಮಾತ್ರವಲ್ಲದೆ ಕಥೆಗಾರ, ಅಂಕಣಕಾರ, ಸಂಪಾದಕ, ಪ್ರಕಾಶಕ, ಉಪನ್ಯಾಸಕ ಹಾಗೂ ಸಂಘಟಕರಾಗಿ ಅವರು ಕನ್ನಡ ಸಾಹಿತ್ಯಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ನಾಲ್ವತ್ತಕ್ಕೂ ಹೆಚ್ಚು ಕೃತಿಗಳ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿರುವ ಅವರು, ‘ಅಕ್ಕಡಿ ಸಾಲು’, ‘ಪ್ಯಾರಿ ಪದ್ಯ’, ‘ದರ್ವೇಶಿ ಪದ್ಯ’, ‘ಉಸಿರ ಗಂಧ ಸೋಕಿ’, ‘ಒಂದು ಮೌನದ ಬೀಜ’, ‘ಬದುಕು ಬೆಳಕು’, ‘ನೆಲದ ನುಡಿ’ ಸೇರಿದಂತೆ ಅನೇಕ ಕೃತಿಗಳ ಮೂಲಕ ಓದುಗರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ.

ಅವರ ‘ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ?’ ಹಾಗೂ ‘ಲಾಂದ್ರದ ಬೆಳಕಲ್ಲಿ ಅವ್ವ’ ಕವಿತೆಗಳು ವಿಶ್ವವಿದ್ಯಾಲಯಗಳ ಪದವಿ ಪಠ್ಯಕ್ರಮದಲ್ಲಿ ಸ್ಥಾನ ಪಡೆದಿರುವುದು ಅವರ ಸಾಹಿತ್ಯದ ಸಾಮಾಜಿಕ ಪ್ರಸ್ತುತತೆಗೆ ಸಾಕ್ಷಿಯಾಗಿದೆ.

ಆದರೆ ಮಕಾನದಾರರ ದೊಡ್ಡ ಸಾಧನೆ ಪುಸ್ತಕಗಳ ಸಂಖ್ಯೆಯಲ್ಲ; ಅವರು ರೂಪಿಸಿದ ಮನುಷ್ಯರ ಸಂಖ್ಯೆಯಲ್ಲಿ. ‘ನಿರಂತರ ಪ್ರಕಾಶನದ ಮೂಲಕ ನೂರಾರು ಹೊಸ ಲೇಖಕರಿಗೆ ಅವಕಾಶ ಕಲ್ಪಿಸಿದ ಅವರು, ತಮ್ಮ ಹೆಸರು ಬೆಳೆಯುವುದಕ್ಕಿಂತ ಇನ್ನೊಬ್ಬ ಲೇಖಕ ಬೆಳೆಯಬೇಕು ಎಂಬ ಮನೋಭಾವವನ್ನು ಬದುಕಿನಲ್ಲಿ ಅನುಸರಿಸಿದರು.

“ಮಕಾನದಾರರು ಬರೆದದ್ದಕ್ಕಿಂತ ಬರೆಸಿದ್ದೇ ಹೆಚ್ಚು” ಎಂಬ ಮಾತು ಸಾಹಿತ್ಯ ವಲಯದಲ್ಲಿ ಕೇಳಿಬರುವುದು ಅವರ ವ್ಯಕ್ತಿತ್ವದ ನಿಜವಾದ ಪರಿಚಯ.

ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಲೇ ರಾಜ್ಯಮಟ್ಟದ ಸರ್ವೋತ್ತಮ ಸೇವಾ ಪುರಸ್ಕಾರ ಪಡೆದ ಅವರು, ನಿವೃತ್ತಿಯ ಬಳಿಕವೂ ವಿಶ್ರಾಂತಿ ಪಡೆಯದೆ ಸಮಾಜಸೇವೆಯ ದಾರಿಯನ್ನೇ ಆರಿಸಿಕೊಂಡರು. ಆಸ್ಪತ್ರೆಗಳು, ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳಲ್ಲಿ ಆಹಾರ ಕಿಟ್ ವಿತರಣೆ, ಕನ್ನಡ ಶಾಲೆಗಳ ಉಳಿವಿಗಾಗಿ ಜಾಗೃತಿ, ಭಾವೈಕ್ಯತಾ ಕಾರ್ಯಕ್ರಮಗಳು, ಸಾಹಿತ್ಯ ಸಮ್ಮೇಳನಗಳು ಹೀಗೆ ಅವರ ಸೇವೆ ನಿರಂತರವಾಗಿದೆ.

ಅವರ ಕೃತಿಗಳು ಹಲವು ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ. ಆದರೆ ಅನುವಾದಿಸಲಾಗದ ಒಂದು ಸಂಗತಿ ಇದೆ—ಅದು ಅವರ ಮಾನವೀಯತೆ. ಭಾಷೆಯ ಎಲ್ಲೆಗಳನ್ನು ಮೀರಿ ಅದು ನೇರವಾಗಿ ಓದುಗರ ಹೃದಯವನ್ನು ತಲುಪುತ್ತದೆ.

ಇಂದು ಕನ್ನಡ ಸಾಹಿತ್ಯದಲ್ಲಿ ಕವಿಗಳು ಅನೇಕರಿದ್ದಾರೆ. ಆದರೆ ಬದುಕನ್ನೇ ಕಾವ್ಯವನ್ನಾಗಿ ರೂಪಿಸಿಕೊಂಡವರು ವಿರಳ. ಮಕಾನದಾರರು ಆ ವಿರಳ ಸಾಲಿನ ಅಕ್ಷರಯೋಗಿ.

ಅವರು ಕವಿತೆ ಬರೆಯುವುದಿಲ್ಲ; ಬದುಕನ್ನು ಬರೆಯುತ್ತಾರೆ. ಪದಗಳನ್ನು ಜೋಡಿಸುವುದಿಲ್ಲ; ಮನುಷ್ಯರನ್ನು ಜೋಡಿಸುತ್ತಾರೆ. ಬೆಳಕನ್ನು ಹುಡುಕುವುದಿಲ್ಲ; ತಾವೇ ಬೆಳಕಾಗುತ್ತಾರೆ. ಅದಕ್ಕಾಗಿಯೇ ಗದಗಿನ ಸಾಹಿತ್ಯ ಲೋಕ ಅವರನ್ನು ಪ್ರೀತಿಯಿಂದ ‘ಬಯಲ ಬೆಳಕಿನ ಕವಿ’ ಎಂದು ಕರೆಯುತ್ತದೆ.

ಜುಲೈ 11ರಂದು ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್‌ನಲ್ಲಿ ಪ್ರದಾನವಾಗಲಿರುವ ‘ಕನಕ–ಶರೀಫ ಕಾವ್ಯ ಪುರಸ್ಕಾರ’ ಕೇವಲ ಒಬ್ಬ ಸಾಹಿತಿಯ ಗೌರವವಲ್ಲ. ಅದು ಕನ್ನಡ ಸಾಹಿತ್ಯದ ಮಾನವೀಯ ಪರಂಪರೆಗೆ ಸಲ್ಲುವ ಗೌರವದ ನಮನ.

ನೋವನ್ನು ಪದಗಳನ್ನಾಗಿ, ಪದಗಳನ್ನು ಪ್ರೀತಿಯನ್ನಾಗಿ, ಪ್ರೀತಿಯನ್ನು ಮಾನವೀಯತೆಯನ್ನಾಗಿ ರೂಪಿಸಿದ ಈ ಅಪರೂಪದ ಅಕ್ಷರಯೋಗಿ ಇನ್ನೂ ದೀರ್ಘಕಾಲ ಕನ್ನಡ ಸಾರಸ್ವತ ಲೋಕವನ್ನು ಬೆಳಗಲಿ. ಏಕೆಂದರೆ ಮಕಾನದಾರರಂತಹವರು ಬರೆಯುವವರೆಗೂ ಕನ್ನಡ ಸಾಹಿತ್ಯದ ಬಯಲಿನಲ್ಲಿ ಬೆಳಕು ಎಂದಿಗೂ ಮಂಕಾಗುವುದಿಲ್ಲ.

– ಅಮೀರನಾಯಕ (ಕಲ್ಲಿಗನೂರ), ಗದಗ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img