ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲಾ ಸಮೀಕ್ಷಣಾಧಿಕಾರಿಗಳಾದ ಡಾ.ವೆಂಕಟೇಶ ರಾಥೋಡ್ ಇವರ ನೇತೃತ್ವದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ತನಿಖಾ ದಳವು ನಗರದ ಕಲಾಮಂದಿರ ರಸ್ತೆ, ಹಳೆ ಬಸ್ ನಿಲ್ದಾಣ, ಪಾಟೀಲ ರೋಡ್, ತಿಲಕ್ ಪಾರ್ಕ್, ಕೆ.ಸಿ. ರಾಣಿ ರೋಡ್, ಹಾತಲಗೇರಿ ನಾಕಾ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಕೋಟ್ಪಾ ಕಾಯ್ದೆ ಉಲ್ಲಂಘನೆಯ ವಿರುದ್ಧ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಯಿತು.
ತಂಬಾಕು ನಿಯಂತ್ರಣ ಕಾಯ್ದೆ ಕೋಟ್ಪಾ-2003 ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧದ ಕುರಿತು ಪ್ರತಿಯೊಂದು ಸಾರ್ವಜನಿಕ ಸ್ಥಳಗಳಲ್ಲಿ ನಾಮಫಲಕ ಬಿತ್ತರಿಸುವದು ಅ ಸ್ಥಳದ ಮಾಲೀಕರ ಜವಾಬ್ದಾರಿಯಾಗಿರುತ್ತದೆ. ಕೆಲವು ಅಂಗಡಿಗಳ ಹಿಂದೆ ಧೂಮಪಾನಕ್ಕಾಗಿ ಅನಧಿಕೃತ ಅಡ್ಡಾಗಳನ್ನು ಮಾಡಿಕೊಂಡಿರುವವರ ವಿರುದ್ಧ ಕೂಡಾ ಕ್ರಮ ವಹಿಸಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವದರಿಂದ ಸಾರ್ವಜನಿಕರೊಂದಿಗೆ ಆ ಸ್ಥಳದ ಮಾಲಿಕ, ಕೆಲಸಗಾರರ ಆರೋಗ್ಯದ ಮೇಲೆ ಪರಿಣಾಮಬೀರುತ್ತಿರುವದು ಕಂಡುಬಂದಿದೆ. ತಂಬಾಕು ಉತ್ಪನ್ನಗಳ ಕಾಣುವಂತೆ ಪ್ರದರ್ಶಿಸುವದು, ಅವುಗಳ ಕುರಿತ ಜಾಹಿರಾತು ನಿಷೇಧ, 18 ವರ್ಷದೊಳಗಿನವರಿಗೆ ತಂಬಾಕು ನಿಷೇಧದ ಕುರಿತ ನಾಮಫಲಕ ಬಿತ್ತರಿಸುವದು, ತಂಬಾಕು ಉತ್ಪನ್ನಗಳ ಪ್ಯಾಕ್ ಮೇಲೆ ಶೇ 85ರಷ್ಟು ಅರೋಗ್ಯ ಎಚ್ಚರಿಕೆ ಚಿಹ್ನೆ ಕಡ್ಡಾಯ, ಶಾಲಾ-ಕಾಲೇಜು ಸುತ್ತ 100 ಗಜಗಳವರೆಗೆ ತಂಬಾಕು ನಿಷೇಧ, ಎಲ್ಲಾ ಶಾಲಾ-ಕಾಲೇಜುಗಳನ್ನು ತಂಬಾಕು ಮುಕ್ತವನ್ನಾಗಿಸುವ ನಿಟ್ಟಿನಲ್ಲಿ 100 ಗಜದೊಳಗಿನ ತಂಬಾಕು ಮಾರಾಟ ಬಳಕೆ ಸಂಪೂರ್ಣ ನಿಷೇಧಿಸಲಾಗಿದ್ದು, ಮುಂದಿನ ದಿನಗಳಲ್ಲಿ ಅಂತಹ ಪ್ರಕರಣ ಕಂಡುಬಂದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವದು. ಅದಕ್ಕೆ ಅವರೇ ನೇರ ಹೊಣೆಗಾರರಾಗುವರೆಂದು ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ. ವೆಂಕಟೇಶ ರಾಠೋಡ್ ತಿಳಿಸಿದರು.
ಈ ದಾಳಿಯ ಸಂದರ್ಭದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರಾದ ಗೋಪಾಲ ಸುರಪುರ, ಆಹಾರ ಸುರಕ್ಷತಾ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಟಿ.ಎಸ್. ಪವಾರ, ಪೊಲೀಸ್ ಇಲಾಖೆಯ ಜೆ.ಹೆಚ್. ಅಳಗುಂದಿ, ಸೋಮಶೇಖರ, ಎಂ.ಎಂ. ಮಖಾಂದರ, ಸಿಡಿಪಿಓ ಹೆಚ್.ಎಸ್. ಜೋಗರ, ಆರೋಗ್ಯ ಇಲಾಖೆಯ ಹಿರಿಯ ನಿರೀಕ್ಷಣಾಧಿಕಾರಿ ವೈ.ಎನ್. ಕಡೆಮನಿ, ಸಾಮಾಜಿಕ ಕಾರ್ಯಕರ್ತೆ ಬಸಮ್ಮ ಚಿತ್ತರಗಿ, ಶಿವಕುಮಾರ ಬಗಾಡೆ ಹಾಜರಿದ್ದರು.