ವಿಜಯಸಾಕ್ಷಿ ಸುದ್ದಿ, ನರೇಗಲ್ : ಶ್ರೀ ನಗರೇಶ್ವರ ದೇವಸ್ಥಾನಕ್ಕೆ ಭೂಮಿ ದಾನ ಮಾಡಿದ್ದು ನನ್ನ ಪುಣ್ಯವಾಗಿದೆ. ಇದಕ್ಕೆ ನಮ್ಮ ಹಿರಿಯರ ಆಶೀರ್ವಾದವೂ ಇದ್ದುದರಿಂದ ಈ ಕಾರ್ಯ ಸಾಧ್ಯವಾಗಿದೆ. ನಾವು ಭೂದಾನ ಮಾಡಿದ ಜಾಗೆಯಲ್ಲಿ ವೈಶ್ಯ ಸಮಾಜದವರು ಕಟ್ಟಿರುವ ದೇವಸ್ಥಾನ ಸುಂದರವಾಗಿದ್ದು, ಇದನ್ನು ಕಂಡು ನನ್ನಲ್ಲಿ ಧನ್ಯತಾ ಭಾವ ಮೂಡಿದೆ ಎಂದು ಅಶೋಕ ಕುಲಕರ್ಣಿ ಹೇಳಿದರು.
ಪಟ್ಟಣದ ಡಾ. ಕಾಳೆಯವರ ದವಾಖಾನೆಯ ಹತ್ತಿರ ಆರ್ಯವೈಶ್ಯ ಸಮಾಜದವರು ನೂತನವಾಗಿ ಕಟ್ಟಿಸಿದ ಶ್ರೀ ನಗರೇಶ್ವರ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ಸಮಾಜದವರು ನೀಡಿದ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.
ವಾಸವಿ ಸಮಾಜಕ್ಕೂ ನನಗೂ ಅವಿನಾಭಾವ ಸಂಬಂಧವಿದೆ. ಈ ಸಮಾಜದ ಜನರು ನನ್ನ ಮೇಲೆ ಅಪರಿಮಿತವಾದ ಪ್ರೀತಿಯನ್ನಿಟ್ಟು ನನ್ನ ಜನ್ಮದಿನದಂದೇ ಶ್ರೀ ನಗರೇಶ್ವರನ ಸನ್ನಿಧಿಯಲ್ಲಿ ನನಗೆ ಸನ್ಮಾನದ ಆಶೀರ್ವಾದ ಮಾಡಿದ್ದು ಇನ್ನಿಲ್ಲದ ಸಂತಸವನ್ನುಂಟುಮಾಡಿದೆ ಎಂದರು.
ಸತ್ಯನಾರಾಯಣ ಹೇಮಾದ್ರಿ ಮಾತನಾಡಿ, ಯಾವುದೇ ದೇವಸ್ಥಾನ ಯಾವುದೇ ಒಂದು ಮತಕ್ಕೆ ಸೀಮಿತವಾಗಿರಬಾರದು.. ಈ ದೇವಸ್ಥಾನ ಎಲ್ಲರಿಗೂ ಸೇರಿದ್ದು. ದೇವಸ್ಥಾನಗಳು ಅತೀತವಾದ ಅನುಭವವನ್ನು ಕೊಡುತ್ತದೆ. ದೇವಸ್ಥಾನಕ್ಕೆ ಭೂಮಿ ದಾನ ಮಾಡಿದ ಅಶೋಕ ಕುಲಕರ್ಣಿಯವರ ದಾನ ಗುಣವನ್ನು ಎಷ್ಟು ವರ್ಣಿಸಿದರೂ ಕಡಿಮೆಯೇ ಎಂದರು.
ಬಾಲಾಜಿ ಶಾಮಿಯಾನದ ಮಾಲೀಕ ಎನ್. ರಾಮರಾವ ಮಾತನಾಡಿ, ಆರ್ಯವೈಶ್ಯ ಸಮಾಜದವರು ಈ ದೇವಸ್ಥಾನ ನಿರ್ಮಿಸಲು ಮುಂದಾಗಿ ಅದರಲ್ಲಿ ಯಶಸ್ವಿಯಾಗಿರುವದಕ್ಕೆ ಅವರನ್ನು ಅಭಿನಂದಿಸುತ್ತೇನೆ ಎಂದರು.
ವೇದಿಕೆಯ ಮೇಲೆ ಪ್ರಶಾಂತ ಗುತ್ತಲ, ಹರೀಶ ವಡವಡಗಿ, ವೆಂಕಟೇಶ ಬೆಟದೂರ, ಚಂದ್ರಹಾಸ ಇಲ್ಲೂರ ಮುಂತಾದವರಿದ್ದರು. ಸಮಾಜದ ಅಧ್ಯಕ್ಷ ರಾಮಚಂದ್ರಪ್ಪ ನವಲಿ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಹಾಯ ಮಾಡಿದ ಮಹನೀಯರನ್ನು ಸನ್ಮಾನಿಸಲಾಯಿತು. ರಾಘವೇಂದ್ರ ಕಾಲವಾಡ ನಿರೂಪಿಸಿದರು. ವೀರಭದ್ರ ಇಲ್ಲೂರ ಸ್ವಾಗತಿಸಿ, ವಂದಿಸಿದರು.