ವಿಜಯಸಾಕ್ಷಿ ಸುದ್ದಿ, ರೋಣ : ಕ್ರೀಡೆಗಳಲ್ಲಿ ಉಜ್ವಲ ಭವಿಷ್ಯ ಕಾಣಲು ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವನೆ ಅಡಕವಾಗಿರಬೇಕು ಎಂದು ಗ್ರಾ.ಪಂ ಅಧ್ಯಕ್ಷ ವೀರಣ್ಣ ಮರಡಿ ಹೇಳಿದರು.
ಅವರು ಶುಕ್ರವಾರ ಮಾರನಬಸರಿ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಜರುಗಿದ ಪಂಚಾಯತ ಮಟ್ಟದ ಕ್ರೀಡಾಕೂಟಗಳಿಗೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ಅಕ್ಷರ ಜ್ಞಾನಕ್ಕೆ ನೀಡಿದ ಮಹತ್ವವನ್ನು ಕ್ರೀಡೆಗಳಿಗೂ ನೀಡಬೇಕು. ಇದರಿಂದ ಆರೋಗ್ಯಯುತ ದೇಹದ ಜೊತೆಗೆ ಆರೋಗ್ಯಯುತ ಮನಸ್ಸು ಹೊಂದಲು ಸಾಧ್ಯ. ಅಲ್ಲದೆ ತಮ್ಮಲ್ಲಿ ಅಡಗಿರುವ ಸ್ಪರ್ಧಾಮನೋಭಾವನೆಯನ್ನು ಹೊರ ಚೆಲ್ಲುವ ಅವಕಾಶವನ್ನು ಕ್ರೀಡೆ ಒದಗಿಸಿಕೊಡುತ್ತದೆ ಎಂಬುದನ್ನು ವಿದ್ಯಾರ್ಥಿಗಳು ಅರಿಯಬೇಕು ಎಂದರು.
ಕ್ರೀಡೆಯು ಸಹೋದರತೆ ಮತ್ತು ಸೌಹಾರ್ಧತೆಯನ್ನು ಬೆಳೆಸುವಲ್ಲಿ ಅತ್ಯಂತ ಮುಖ್ಯ ಪಾತ್ರ ವಹಿಸುತ್ತದೆ. ಹೀಗಾಗಿ ವಿದ್ಯಾರ್ಥಿಗಳು ತಾವು ಇಷ್ಟಪಡುವ ಆಟಗಳಲ್ಲಿ ಭಾಗವಹಿಸಿ ಶಾಲೆ ಹಾಗೂ ಗ್ರಾಮದ ಕೀರ್ತಿಯನ್ನು ಹೆಚ್ಚಿಸಬೇಕು ಎಂದರು.
ಗ್ರಾ.ಪಂ ಸದಸ್ಯರಾದ ದಿಲ್ಶ್ಯಾದಬೇಗಂ ದೋಟಿಹಾಳ, ಹನಮವ್ವ ತಳವಾರ, ಬಸವರಾಜ ಮಾರನಬಸರಿ, ಬಸವರಾಜ ಕೊನಾಪೂರ, ಶರಣಪ್ಪ ತಳವಾರ, ಬಸವರಾಜ ದೇಸಾಯಿಪಟ್ಟಿ, ಬಾಬಾಜಾನ ಕಳಕಾಪೂರ ಸೇರಿದಂತೆ ಎಸ್ಡಿಎಂಸಿ ಪದಾಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು.