ವಿಜಯಸಾಕ್ಷಿ ಸುದ್ದಿ, ಬೆಂಗಳೂರು : ಮನುಷ್ಯನಿಗೆ ಹೆತ್ತ ತಾಯಿ, ಹೊತ್ತ ನೆಲ ಎಷ್ಟು ಮುಖ್ಯವೋ ಅಷ್ಟೇ ಧರ್ಮವೂ ಮುಖ್ಯ. ಶಿವಾಗಮಗಳ ಸಾಹಿತ್ಯ ಮತ್ತು ವಚನ ಸಾಹಿತ್ಯ ವೀರಶೈವ ಧರ್ಮದ ಅಮೂಲ್ಯ ಸಂಪತ್ತು ಎಂಬುದನ್ನು ಯಾರೂ ಮರೆಯಬಾರದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆ ಬೆಂಗಳೂರು ಜಿಲ್ಲಾ ಘಟಕದ ಆಶ್ರಯದಲ್ಲಿ ಜರುಗಿದ ಧರ್ಮೋತ್ತೇಜಕ ಸಂಗಮ ಸಮಾವೇಶದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಧರ್ಮದಲ್ಲಿ ಮಾರ್ಗವಿದೆ ವೇಗವಿಲ್ಲ. ವಿಜ್ಞಾನದಲ್ಲಿ ವೇಗವಿದೆ ಮಾರ್ಗವಿಲ್ಲ. ಇವೆರಡರ ಸಮನ್ವಯದಿಂದ ಜನಕಲ್ಯಾಣ ಸಾಧ್ಯವಾಗುತ್ತದೆ. ಧರ್ಮದ ದಿಕ್ಸೂಚಿ ಇಲ್ಲದೇ ಹೋದರೆ ಬದುಕಿಗೆ ಅರ್ಥವೇ ಇಲ್ಲ. ಧರ್ಮ ದರ್ಶನಗಳ ಅರಿವು ಮತ್ತು ಆಚರಣೆ ಮುಖ್ಯ. ಅಧಿಕಾರದ ಅಂತಸ್ತು ಮೇಲೇರಿದಂತೆ ನೀತಿಯ ಅಂತಸ್ತು ಮೇಲೇರಬೇಕು. ಮನುಷ್ಯನ ವ್ಯಕ್ತಿತ್ವ ವಿಕಾಸಕ್ಕೆ ಶಿವಾಗಮಗಳ ಪ್ರಾಚೀನ ಸಾಹಿತ್ಯ ಹಾಗೂ ಶರಣರ ವಚನ ಸಾಹಿತ್ಯ ಎರಡು ಕಣ್ಣು ಇದ್ದಂತೆ. ಈ ಧರ್ಮದ ದಾರ್ಶನಿಕತೆ ಸರ್ವ ಜನಾಂಗಕ್ಕೂ ದಾರಿದೀಪ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಸಿದ್ಧಾಂತ ಶಿಖಾಮಣಿಯಲ್ಲಿ ಜೀವಾತ್ಮ ಪರಮಾತ್ಮನಾಗಲು ಅಂಗ ಲಿಂಗವಾಗಲು ಮತ್ತು ಭವಿ ಭಕ್ತನಾಗುವ ಆದರ್ಶತೆಗಳನ್ನು ಕಾಣಬಹುದೆಂದರು.
ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ರಾಜಾಪುರ ಸಂಸ್ಥಾನಮಠದ ಡಾ.ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕ ಮಾತನಾಡಿದರೆ, ನಾಗಲಾಪುರ ಮಠದ ತೇಜೇಶಲಿಂಗ ಶಿವಾಚಾರ್ಯ ಸ್ವಾಮಿಗಳು ಸದಾಶಯ ನುಡಿ ಹಂಚಿಕೊಂಡರು. ಸಂಗೊಳ್ಳಿ, ದೊಡ್ಡಗುಣಿ, ಶ್ರೀಗಳು ಉಪಸ್ಥಿತರಿದ್ದರು.
ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಬಸವ ರಾಜೇಂದ್ರ, ಜಿ.ಮರಿಸ್ವಾಮಿ ಪಾಲ್ಗೊಂಡಿದ್ದರು.
ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರಾದ ಡಾ.ಸಿ. ಶಿವಕುಮಾರಸ್ವಾಮಿ ಅವರು ವೀರಶೈವ ಧರ್ಮದ ಮೌಲ್ಯಗಳ ಕುರಿತು ಉಪನ್ಯಾಸವನ್ನಿತ್ತರು. ಬೀರೂರು ಶಿವಸ್ವಾಮಿ, ಆರ್.ಆರ್. ಹಿರೇಮಠ ಇನ್ನಿತರರು ಇದ್ದರು.
ಶಿವಶಂಕರ ಶಾಸ್ತ್ರೀ ತಂಡದವರಿಂದ ಭಕ್ತಿಗೀತೆ ಜರುಗಿತು. ಕೈಗಾರಿಕೋದ್ಯಮಿ ಟಿ.ಎಸ್. ಉಮಾಶಂಕರ ಸ್ವಾಗತಿಸಿದರು. ಕನ್ನಡ ಹೋರಾಟಗಾರ ಫಾಲನೇತ್ರ ನಿರೂಪಿಸಿದರು. ಬಿಜ್ಜಳ್ಳಿ ನಂದೀಶ, ನಿರಂಜನ ಕೋವಾ ರೇವಣ್ಣ, ಎಂ.ಮಾದಯ್ಯ ಮತ್ತು ಸೋಮಶೇಖರ ಪಾಟೀಲ ದಾಸೋಹ ಸೇವೆ ನೆರವೇರಿಸಿದರು.
ಕೇಂದ್ರ ಸರ್ಕಾರದ ಜಲಶಕ್ತಿ ಮತ್ತು ರೇಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮಾತನಾಡಿ, ಧಾರ್ಮಿಕ ಮೌಲ್ಯಗಳು ಜೀವನದ ಉನ್ನತಿಗೆ ಮತ್ತು ಶ್ರೇಯಸ್ಸಿಗೆ ಕಾರಣವಾಗಿವೆ. ವೀರಶೈವ ಧರ್ಮದಲ್ಲಿ ಗಂಡು-ಹೆಣ್ಣು ಉಚ್ಛ-ನೀಚ ಮತ್ತು ಬಡವ-ಬಲ್ಲಿದ ಎನ್ನದೇ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿಕೊಟ್ಟಿದೆ. ವೀರಶೈವ ಧರ್ಮದ ಪೀಠ ಮತ್ತು ಮಠಗಳು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಾ ಬಂದಿವೆ. ಮಾನವ ಧರ್ಮಕ್ಕೆ ಜಯವಾಗಲಿ-ಧರ್ಮದಿಂದಲೇ ವಿಶ್ವಕ್ಕೆ ಶಾಂತಿ, ಸಾಹಿತ್ಯ ಸಂಸ್ಕೃತಿ ಸಂವರ್ಧಿಸಲಿ-ಶಾಂತಿ ಸಮೃದ್ಧಿ ಎಲ್ಲರಿಗಾಗಲಿ ಅನ್ನುವ ಸಾರ್ವತ್ರಿಕ ಸತ್ಯವನ್ನು ಅರಿತು ಬಾಳಿದರೆ ಜೀವನದಲ್ಲಿ ಉತ್ಕರ್ಷತೆ ಕಾಣಬಹುದೆಂದರು.
Advertisement