ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲಾ ಮಾಜಿ ಸೈನಿಕರ ಸಂಘ, ಮಾಜಿ ಹಾಗೂ ಹಾಲಿ ಪ್ಯಾರಾಮಿಲಿಟರಿ ಯೋಧರ ಕಲ್ಯಾಣ ಸಂಘದ ಸಹಯೋಗದೊಂದಿಗೆ 25ನೇ ಕಾರ್ಗಿಲ್ ವಿಜಯೋತ್ಸವದ ರಜತ ಮಹೋತ್ಸವ ಹಾಗೂ ಯುದ್ಧದಲ್ಲಿ ಹುತಾತ್ಮ ವೀರ ಯೋಧರಿಗೆ ಗೌರವ ನಮನ ಕಾರ್ಯಕ್ರಮ ಗದುಗಿನಲ್ಲಿ ಜರುಗಿತು.
ಕಳಸಾಪೂರ-ಸೊರಟೂರ-ಮಲ್ಲಸಮುದ್ರದ ಓಂಕಾರೇಶ್ವರ ಹಿರೇಮಠದ ಪೂಜ್ಯ ಫಕೀರೇಶ್ವರ ಪಟ್ಟಾಧ್ಯಕ್ಷರು, ಜಿಲ್ಲಾ ನಿವೃತ್ತರ ಸಂಘದ ಅಧ್ಯಕ್ಷ ಕೆ.ಎಚ್. ಬೇಲೂರ, ಗದಗ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಗೂಳಯ್ಯ ಮಾಲಗಿತ್ತಿಮಠ, ಮಾಜಿ ಮತ್ತು ಹಾಲಿ ಪ್ಯಾರಾಮಿಲಿಟರಿ ಯೋಧರ ಕಲ್ಯಾಣ ಸಂಘದ ಜಿಲ್ಲಾ ಅಧ್ಯಕ್ಷ ನಾಗರಾಜ ಕುಂದರಗಿ, ಗದಗ ಜಿಲ್ಲಾ ಮಾಜಿ ಸೈನಿಕರ ಸಂಘದ ಮಾಜಿ ಅಧ್ಯಕ್ಷರೂ ಹಾಲಿ ಗೌರವ ಅಧ್ಯಕ್ಷರೂ ಆದ ಅಂದಾನಪ್ಪ ಯರಗೇರಿ, ಮಾಜಿ ಮತ್ತು ಹಾಲಿ ಪ್ಯಾರಾಮಿಲಿಟರಿ ಯೋಧರ ಕಲ್ಯಾಣ ಸಂಘದ ಗೌರವ ಅಧ್ಯಕ್ಷ ವ್ಹಿ.ಎಸ್. ಅಕ್ಕಿ ಉಭಯ ಸಂಘಟನೆಗಳ ಕಾರ್ಯದರ್ಶಿಗಳಾದ ಸಿ.ಜಿ. ಸೊನ್ನದ ಹಾಗೂ ಬಸಯ್ಯ ಹಿರೇಮಠ, ಮಾಜಿ ಯೋಧರು ಹಾಗೂ ವೀರನಾರಿಯರು ಸೇರಿದಂತೆ ಎನ್.ಸಿ.ಸಿ ಅಧಿಕಾರಿಗಳು, ಎನ್.ಸಿ.ಸಿ ಕೆಡೆಟ್ಗಳು ಪಾಲ್ಗೊಂಡಿದ್ದರು.
ಮಹಾತ್ಮ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಯುದ್ಧದಲ್ಲಿ ಹುತಾತ್ಮ ವೀರ ಯೋಧರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಲಾಯಿತು. ನಂತರ ಗಾಂಧಿ ಸರ್ಕಲ್ನಿಂದ ಆರಂಭಗೊಂಡ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕರ್ನಾಟಕ ರಾಜ್ಯ ಗದಗ ಜಿಲ್ಲಾ ನಿವೃತ್ತರ ಸಂಘದ ಕಾರ್ಯಾಲಯ ತಲುಪಿ ಸಮಾರಂಭ ಜರುಗಿತು.