ವಿಜಯಸಾಕ್ಷಿ ಸುದ್ದಿ, ಗದಗ : ಸಂಗೀತ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಗದಗ ಜಿಲ್ಲೆ ವಿಶೇಷವಾಗಿ ಲಿಂಗೈಕ್ಯ ಡಾ. ಪಂಡಿತ ಪುಟ್ಟರಾಜರ ಶರಣರು, ಪುಣ್ಯಾಶ್ರಮ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಸಂಗೀತ ಶಾಲೆಯಲ್ಲಿ ನೂರಾರು ಅಂಧ-ಅನಾಥ ಮಕ್ಕಳು ಆಶ್ರಯ ಪಡೆದು ಸಂಗೀತದ ವಿದ್ಯೆಯನ್ನು ಪಡೆದುಕೊಂಡು ತಮ್ಮ ಜೀವನದ ರೂಪಿಸಿಕೊಳ್ಳುತ್ತಿದ್ದರು.
ಶ್ರೀ ಮಠದ ವತಿಯಿಂದ ನೂರಾರು ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. ಆದರೆ ಈ ವರ್ಷದಿಂದ ಸಂಗೀತದ ಪರೀಕ್ಷೆಯನ್ನು ಬೇರೆ ಜಿಲ್ಲೆಯ ಕೇಂದ್ರಗಳಲ್ಲಿ ನಡೆಸುತ್ತಿರುವುದು ಇಲ್ಲಿಯ ಅನಾಥ ಮಕ್ಕಳಿಗೆ ಮಾಡಿದ ಅನ್ಯಾಯವಾಗಿದೆ. ಕಾರಣ, ರಾಜ್ಯ ಸರ್ಕಾರ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲರು ಈ ಬಗ್ಗೆ ಗಮನವಹಿಸಿ ಅಂಧ-ಅನಾಥ ಮಕ್ಕಳಿಗೆ ತೊಂದರೆಯಾಗದಂತೆ ಪರೀಕ್ಷಾ ಕೇಂದ್ರವನ್ನು ಈ ಮೊದಲಿನಂತೆ ಗದಗ ಜಿಲ್ಲಾ ಕೇಂದ್ರದಲ್ಲಿಯೇ ನಡೆಸಬೇಕು ಎಂದು ಜೆಡಿಎಸ್ ಗದಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿಅಲಿ ಎಚ್.ಕೊಪ್ಪಳ ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.