ವಿಜಯಸಾಕ್ಷಿ ಸುದ್ದಿ, ಗದಗ : ರಾಷ್ಟ್ರದಲ್ಲಿ 6 ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ದೇಶವಾಸಿಗಳ ಮೂಲಭೂತ ಆಶೋತ್ತರಗಳನ್ನ ನಿರ್ಲಕ್ಷಿದ್ದಲ್ಲದೆ ಮಿತಿಮೀರಿದ ಭ್ರಷ್ಟಾಚಾರ, ವಂಶಾಡಳಿತದ ಕಾರಣದಿಂದಾಗಿ ಜನ ಮಾನಸದಿಂದ ದೂರವಾಗುತ್ತಿದೆ. ರಾಷ್ಟ್ರಹಿತವನ್ನೇ ತನ್ನ ಧ್ಯೇಯವನ್ನಾಗಿ ಮಾಡಿಕೊಂಡ ಬಿಜೆಪಿಯಿಂದ ಮಾತ್ರ ಭವ್ಯ ಭಾರತದ ನಿರ್ಮಾಣ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ಮಂಗಳವಾರ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನ-2024ರ ಕಾರ್ಯಾಗಾರವನ್ನ ಉದ್ಘಾಟಿಸಿ ಅವರು ಮಾತಾಡುತ್ತಿದ್ದರು.
ಬಿಜೆಪಿ ಜನಸಾಮಾನ್ಯರ ಪಕ್ಷ. ಕಾರ್ಯಕರ್ತರೇ ಇದರ ಜೀವಾಳ. ಸಾಮಾನ್ಯ ಕಾರ್ಯಕರ್ತನೂ ಇದರ ಅಧ್ಯಕ್ಷ ಆಗಬಹುದು, ಮುಖ್ಯಮಂತ್ರಿ, ಪ್ರಧಾನಿಯೂ ಆಗಬಹುದು. ಪಕ್ಷ ಸಂಘಟನೆಯಲ್ಲಿ ಸದಸ್ಯತಾ ಅಭಿಯಾನದ ಪಾತ್ರ ಪ್ರಮುಖವಾಗಿದ್ದು, 45 ದಿನಗಳ ಕಾಲ ದೇಶಾದ್ಯಂತ ನಡೆಯುವ ಈ ಪವಿತ್ರ ಅಭಿಯಾನದಲ್ಲಿ ಕಾರ್ಯಕರ್ತರು ಪ್ರತಿ ಬೂತ್ನಲ್ಲಿ 300ಕ್ಕೂ ಅಧಿಕ ಜನರಿಗೆ ಸದಸ್ಯತ್ವ ನೀಡುವ ಮೂಲಕ ನಿಗದಿತ ಗುರಿಯನ್ನು ತಲುಪಿ ಬಿಜೆಪಿ ಪ್ರಪಂಚದ ದೊಡ್ಡ ಪಕ್ಷ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಹಾಗೂ ಅಭಿಯಾನದ ಜಿಲ್ಲಾ ಸಂಚಾಲಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಲ್ಲಾಪೂರ ಪ್ರಾಸ್ತಾವಿಕವಾಗಿ ಮಾತಾನಾಡಿದರು.
ಕಾರ್ಯಾಗಾರದ ವಿಷಯ ತಜ್ಞರಾಗಿ ಬಳ್ಳಾರಿ ವಿಭಾಗದ ಸಹ ಪ್ರಭಾರಿಯಾದ ಚಂದ್ರಶೇಖರಗೌಡ ಪಾಟೀಲ, ಧಾರವಾಡ ವಿಭಾಗದ ಪ್ರಮುಖ ಪ್ರಶಾಂತ ಜಾಧವ, ನಿಗಮ ಮಂಡಳಿ ಮಾಜಿ ಅಧ್ಯಕ್ಷ ಎಮ್.ಎಸ್. ಕರಿಗೌಡ್ರ, ಕಾಂತಿಲಾಲ ಬನ್ಸಾಲಿ, ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಮುತ್ತಣ್ಣ ಲಿಂಗನಗೌಡ್ರ, ಪ್ರಧಾನ ಕಾರ್ಯದರ್ಶಿ ಆರ್.ಕೆ. ಚವ್ಹಾಣ್ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಪಕ್ಷದ ಜಿಲ್ಲೆಯ 9 ಮಂಡಲ, ಜಿಲ್ಲಾ ಮೋರ್ಚಾ, ವಿವಿಧ ಪ್ರಕೋಷ್ಠಗಳ ಪದಾಧಿಕಾರಿಗಳು, ಅಭಿಯಾನ ಸಮಿತಿ ಸದಸ್ಯರು, ನಗರಸಭೆ ಸದಸ್ಯರು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು, ಅಪೇಕ್ಷಿತರು ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಕ್ಕೀರೇಶ್ ರಟ್ಟೀಹಳ್ಳಿ ಕಾರ್ಯಕ್ರಮ ನಿರೂಪಿಸಿದರೆ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ವಿನಿ ಅಂಕಲಕೋಟಿ ವಂದಿಸಿದರು.
ರಾಜ್ಯದಲ್ಲಿ 15 ತಿಂಗಳಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪರಿಶಿಷ್ಟ ಜಾತಿ, ಜನಾಂಗ, ಹಿಂದುಳಿದ ವರ್ಗದವರ ಕಲ್ಯಾಣಕ್ಕೆ ಮೀಸಲಿಟ್ಟ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಲ್ಲದೆ ವಾಲ್ಮೀಕಿ, ಮುಡಾದಂತಹ ಸಾವಿರಾರು ಕೋಟಿಯ ಹಗರಣದಲ್ಲಿ ಸಿಕ್ಕು ಜನ ವಿಶ್ವಾಸವನ್ನೇ ಕಳೆದುಕೊಂಡಿದೆ. ಮುಂಬರುವ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಅತ್ಯಧಿಕ ಸ್ಥಾನಗಳನ್ನ ಪಡೆಯಲಿದೆ ಎಂದು ಎಸ್.ವಿ. ಸಂಕನೂರ ಹೇಳಿದರು.