ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಸಮಾಜದಲ್ಲಿ ಪ್ರಾಮಾಣಿಕವಾಗಿ ಜೀವನ ಸಾಗಿಸುತ್ತಿರುವ ಅನೇಕರನ್ನು ಗುರುತಿಸಿ, ಅವರನ್ನು ಗೌರವಿಸುವ ಕಾರ್ಯ ಮಾಡಿರುವದು ಸ್ತುತ್ಯಾರ್ಹ ಸಂಗತಿಯಾಗಿದೆ ಎಂದು ಸಿಪಿಐ ನಾಗರಾಜ ಮಾಡಳ್ಳಿ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಯಜಮಾನ್ ಜಿ.ಎಫ್. ಉಪನಾಳ ಪ್ರತಿಷ್ಠಾನದ ಶಾಂತಿಧಾಮ ವೃದ್ಧಾಶ್ರಮದಲ್ಲಿ ಶಿವಲಿಂಗಯ್ಯ ಹೊತಗಿಮಠ ಅವರ ಸ್ನೇಹಿತರ ಬಳಗದ ವತಿಯಿಂದ ಶ್ರಮಜೀವಿಗಳನ್ನು ಗುರುತಿಸಿ ಸನ್ಮಾನಿಸುವ ವಿಶಿಷ್ಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ಅನೇಕರು ಯಾವುದೇ ಫಲಾಪೇಕ್ಷೆಗಳಿಲ್ಲದೆ ಸಮಾಜದಲ್ಲಿ ನಿಸ್ವಾರ್ಥದಿಂದ ತಮ್ಮ ಕೆಲಸವನ್ನು ನಿಭಾಯಿಸಿಕೊಂಡು ಹೋಗುತ್ತಿರುತ್ತಾರೆ. ಅವರನ್ನು ಯಾವುದೇ ರೀತಿಯಲ್ಲಿ ಗುರುತಿಸುವ ಕಾರ್ಯ ನಡೆದಿರುವದಿಲ್ಲ. ಆದರೆ ಅವರು ಅದರ ಬಗ್ಗೆ ಚಿಂತನೆ ಮಾಡದೆ ತಮ್ಮ ಕಾಯಕದಲ್ಲಿ ನಿರತರಾಗಿರುತ್ತಾರೆ.
ಅಂತಹ ಮುಗ್ಧ ಜೀವಿಗಳನ್ನು ಇಂದು ಗೌರವಿಸುವ ಕಾರ್ಯ ಮಾಡಿರುವದು ಅರ್ಥಪೂರ್ಣ ಎಂದರು.
ನಿವೃತ್ತ ಶಿಕ್ಷಕರಾದ ಪೂರ್ಣಾಜಿ ಖರಾಟೆ ಮತ್ತು ಸಿ.ಜಿ. ಹಿರೇವ್ಮಠ, ಶಿವಲಿಂಗಯ್ಯ ಹೊತಗಿಮಠ ತಮ್ಮ ಬಳಗವನ್ನೆಲ್ಲ ಸೇರಿಸಿ ಹಿರಿಯ ಜೀವಿಗಳ ನಡುವೆ ಶ್ರಮಜೀವಿಗಳನ್ನು ಗುರುತಿಸುವ ಮೂಲಕ ಸಮಾಜಕ್ಕೆ ಒಂದು ಸಂದೇಶವನ್ನು ನೀಡಿದ್ದಾರೆ. ಯಾರೂ ಗುರುತಿಸದ ಹಿರಿಯರನ್ನು ಗುರುತಿಸಿ ಗೌರವಿಸಿರುವದು ಮೆಚ್ಚುಗೆಯ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಂತಿಧಾಮ ವೃದ್ಧಾಶ್ರಮದ ಅಧ್ಯಕ್ಷ ಪ್ರಕಾಶ ಉಪನಾಳ ವಹಿಸಿದ್ದರು. ಪಿಎಸ್ಐ ಈರಪ್ಪ ರಿತ್ತಿ, ಪ್ರೇಮಾವತಿ ಹೊತಗಿಮಠ, ಸುನೀಲ ಮಹಾಂತಶೆಟ್ಟರ, ಪ್ರವೀಣ ಬಾಳಿಕಾಯಿ, ಮಹೇಶ ಹೊಗೆಸೊಪ್ಪಿನ, ಮಲ್ಲಿಕಾರ್ಜುನ ಕಳಸಾಪೂರ, ಪದ್ಮರಾಜ ಪಾಟೀಲ, ಮಹೇಶ ಲಿಂಬಯ್ಯಸ್ವಾಮಿಮಠ, ಪತ್ರಕರ್ತರಾದ ದಿಗಂಬರ ಪೂಜಾರ, ರಮೇಶ ನಾಡಗೇರ, ನಾಗರಾಜ ಹಣಗಿ, ಅಶೋಕ ಸೊರಟೂರ, ಮಹಾಲಿಂಗರಾಯ ಪೂಜಾರ, ಸುರೇಶ ಲಮಾಣಿ, ರತ್ನಾ ಕರ್ಕಿ, ನಂದಾ ದರ್ಮಾಯತ, ಕಾವ್ಯಾ ದೇಸಾಯಿ, ಸ್ವಾತಿ ಪೈ, ನಿರ್ಮಲಾ ಅರಳಿ ಸೇರಿದಂತೆ ಅನೇಕರಿದ್ದರು.
ಸುನೀತಾ ದುದ್ದಗಿ ಸ್ವಾಗತಿಸಿದರು. ಶ್ರಮಜೀವಿಗಳಾದ ಸಿದ್ದಪ್ಪ ಹಂಜಗಿ, ಹುಸೇನಸಾಬ ಬಸನಕೊಪ್ಪ, ಶೇಪ್ಪ ವಾಲಿಶೆಟ್ಟರ, ಯಲ್ಲವ್ವ ನಡುವಲಕೇರಿ, ವಿಜಯಲಕ್ಷ್ಮಿ ಹಡಪದ, ವೀರಪ್ಪ ಮಡಿವಾಳರ ಅವರನ್ನು ಗೌರವಿಸಲಾಯಿತು.