ರೈತರಿಂದ ಗ್ರಾ.ಪಂ ಎದುರು ಪ್ರತಿಭಟನೆ

0
Protest by farmers against Gram panchayath
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ ದೊಡ್ಡೂರು-ಹೆಸರೂರು ರೈತ ಸಂಪರ್ಕ ರಸ್ತೆ ಸಂಪೂರ್ಣ ಹಾಳಾಗಿದ್ದು ಆದಷ್ಟು ಬೇಗ ರಸ್ತೆಯನ್ನು ನಿರ್ಮಿಸಬೇಕು ಎಂದು ಆಗ್ರಹಿಸಿ ರೈತರು ಬುಧವಾರ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಪಿಡಿಒ ಅವರಿಗೆ ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಅಮರಪ್ಪ ಗುಡಗುಂಟಿ ಮಾತನಾಡಿ, ದೊಡ್ಡೂರು ಗ್ರಾಮದಿಂದ ಹೆಸರೂರು ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು, ರೈತರಿಗೆ ಹೊಲಗಳಿಗೆ ಹೋಗಿ ಬರಲು ತೊಂದರೆ ಆಗುತ್ತಿದೆ. ಅಲ್ಲದೆ ಚಕ್ಕಡಿಗಳು ಉರುಳಿ ಬಿದ್ದು ರೈತರು ಕೈ-ಕಾಲು ಮುರಿದುಕೊಳ್ಳುತ್ತಿದ್ದಾರೆ. ದೊಡ್ಡೂರು ಗ್ರಾಮದ ನೂರಾರು ಎಕರೆ ಹೊಲಗಳು ಇದೇ ರಸ್ತೆಗೆ ಹೊಂದಿಕೊಂಡಂತೆ ಇದ್ದು, ಪ್ರತಿದಿನ ರೈತರಿಗೆ ಹೊಲಗಳಿಗೆ ಹೋಗಿ ಬರಲು ಹದಗೆಟ್ಟ ರಸ್ತೆ ದೊಡ್ಡ ಸಮಸ್ಯೆಯಾಗಿದೆ.

ಹಾಳಾದ ರಸ್ತೆಯನ್ನು ದುರಸ್ತಿ ಮಾಡಿಸುವಂತೆ ಸಾಕಷ್ಟು ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸುತ್ತಿದ್ದೇವೆ. ಈಗಲೂ ಸಹ ಅಧಿಕಾರಿಗಳು ರಸ್ತೆಯನ್ನು ದುರಸ್ತಿ ಮಾಡಿಸದಿದ್ದರೆ ಗ್ರಾಮದ ಪ್ರಮುಖ ರಸ್ತೆಯನ್ನು ಬಂದ್ ಮಾಡಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಪಿಡಿಒ ಶಿವಾನಂದ ಮಾಳವಾಡ ಮಾತನಾಡಿ, ರಸ್ತೆ ದುರಸ್ತಿಗಾಗಿ ಈಗಾಗಲೇ ಕ್ರಿಯಾಯೋಜನೆ ಕಳುಹಿಸಿಕೊಡಲಾಗಿದೆ. ಆದಷ್ಟು ಬೇಗ ಹಾಳಾದ ರಸ್ತೆಯನ್ನು ದುರಸ್ತಿ ಮಾಡಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಸಿಬ್ಬಂದಿ ತಳವಾರ, ರೈತರಾದ ಗಣೇಶ ಲಮಾಣಿ, ನಾಗರಾಜ ರಗಟಿ, ದುಂಡಪ್ಪ ಬಾಗಲದ, ಕರಿಯಪ್ಪ ಡೊಳ್ಳಿನ, ಲಾಲಪ್ಪ ಲಮಾಣಿ, ಹುಲಿಗೆಪ್ಪ ಸವೂರ, ಸಂತೋಷ ಕೊಂಚಿಗೇರಿ, ಶಿವಪ್ಪ ಹುರಕಣ್ಣವರ, ಮಾಂತೇಶ ಗುಡಗುಂಟಿ, ಚನ್ನಪ್ಪ ಬಾಗಲದ ಸೇರಿದಂತೆ ಮತ್ತಿತರರು ಇದ್ದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಪ್ಪ ತೋಟದ ಮಾತನಾಡಿ, ನರೇಗಾ ಯೋಜನೆಯಡಿ ದೊಡ್ಡೂರು-ಹೆಸರೂರು ರಸ್ತೆಯನ್ನು ನಿರ್ಮಿಸಲು ಕ್ರಿಯಾಯೋಜನೆ ಸಿದ್ಧಪಡಿಸಿ ಅನುಮೋದನೆಗೆ ಕಳಿಸಲಾಗಿದೆ. ಅಲ್ಲದೆ ತಾಲೂಕು ಪಂಚಾಯಿತಿಯಿಂದಲೂ 10 ಲಕ್ಷ ರೂಪಾಯಿಗಳ ಕ್ರಿಯಾಯೋಜನೆ ತಯಾರಿಸಲಾಗಿದ್ದು, ಅನುದಾನ ಬಂದ ತಕ್ಷಣ ರಸ್ತೆಯನ್ನು ನಿರ್ಮಿಸಲಾಗುವುದು ಎಂದು ಹೇಳಿದ ನಂತರ ರೈತರು ಪ್ರತಿಭಟನೆಯನ್ನು ಹಿಂಪಡೆದರು.

 


Spread the love

LEAVE A REPLY

Please enter your comment!
Please enter your name here