ವಿಜಯಸಾಕ್ಷಿ ಸುದ್ದಿ, ಗದಗ : ಅವಳಿ ನಗರದ ಬೆಟಗೇರಿ ಪಾಲಾ-ಬಾದಾಮಿ ರಸ್ತೆಯಲ್ಲಿರುವ ಸಾರ್ವಜನಿಕ ಶ್ರೀ ಗಜಾನೋತ್ಸವ ಮಂಡಳಿಯ ಆಶ್ರಯದಲ್ಲಿ ಸುದೀರ್ಘ 49ನೇ ವರ್ಷದ ಗಣೇಶೋತ್ಸವವನ್ನು ಆಚರಿಸಲಾಗುತ್ತಿದೆ.
ಅಪಾರ ಭಕ್ತರನ್ನು ಹೊಂದಿರುವ ಬೆಟಗೇರಿ ಶ್ರೀ ಸಾರ್ವಜನಿಕ ಗಜಾನನ ಗಣಪತಿ ವೀಕ್ಷಣೆಗೆ ಸುತ್ತ ಮುತ್ತಲಿನ ಪ್ರದೇಶದಿಂದ, ಬೇರೆ ರಾಜ್ಯಗಳಿಂದಲೂ ಕೂಡ ಭಕ್ತಜನರು ಆಗಮಿಸಿ, ಗಣೇಶನ ದರ್ಶನ ಪಡೆದು, ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಾರೆ.
ಪ್ರತಿ ವರ್ಷವೂ, ಉತ್ಸವದ ಸಂದರ್ಭದಲ್ಲಿ ಕೇವಲ ಪೌರಾಣಿಕ ಹಾಗೂ ಐತಿಹಾಸಿಕದ ಕಥಾ ಪ್ರಸಂಗಗಳ ದೃಶ್ಯರೂಪಕಗಳನ್ನು ಅಳವಡಿಸುವ ಮೂಲಕ ನಮ್ಮ ಭಾರತೀಯ ಸಂಸ್ಕೃತಿಯನ್ನು ತೋರಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಜನ ಜಾಗೃತಿಯ ಸಾಮಾಜಿಕ ಸಂದೇಶವನ್ನು ಸಾರುವ ದೃಶ್ಯಾವಳಿಗನ್ನು ಅಳವಡಿಸುವ ಮೂಲಕ, ಕಳೆದ 49 ವರ್ಷಗಳಿಂದ ಸಂಘವು ಹತ್ತು ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಪಾತ್ರವಾಗಿದೆ.
ಇಲ್ಲಿ ಪ್ರತಿಷ್ಠಾಪಿಸುವ ಸುಂದರವಾದ ಆಸ್ಥಾನಾರೂಢ ಮಹಾಗಣಪತಿಯ ವಿಗ್ರಹವು ಸಕಲ ಭಕ್ತಾದಿಗಳ ಮೆಚ್ಚುಗೆಗೆ ಪಾತ್ರವಾಗಿರುವುದಷ್ಟೇ ಅಲ್ಲದೆ, ಅಪ್ಪಟ ಮಣ್ಣಿನಿಂದಲೇ ತಯಾರಿಸಲ್ಪಟ್ಟು, ಪರಿಸರ ಸ್ನೇಹಿಯಾಗಿರುವುದು ವಿಶಿಷ್ಟ. ಗಣಪತಿ ವಿಗ್ರಹವನ್ನು ಶಿರಸಿಯ ಕಲಾವಿದರಿಂದ ತಯಾರಿಸಲ್ಪಡುತ್ತಿದೆ. ಪ್ರಸಕ್ತ ವರ್ಷದ ಗಣಪತಿ ವಿಗ್ರಹವು 6 ಅಡಿ ಎತ್ತರವಿದ್ದು, ಮೂರ್ತಿಯನ್ನು ಶಿರಸಿಯ ಸತೀಶ ಶ್ರೀನಿವಾಸ ಗುಡಿಗಾರ ಎಂಬುವವರು ನಿರ್ಮಿಸಿದ್ದಾರೆ.
ಪ್ರಸಕ್ತ ವರ್ಷದ ಗಜಾನನೋತ್ಸವದಲ್ಲಿ ಬೆಟಗೇರಿಯ ಮಹಾ ಮಾಂತ್ರಿಕ ಯಾತಾಳಿ ಚೆನ್ನಬಸಪ್ಪಜ್ಜನ ಪವಾಡ ಪ್ರಸಂಗದ ಕುರಿತು ದೃಶ್ಯಾವಳಿಯ ಕಥಾರೂಪಕವನ್ನು ಸೆ.7ರಿಂದ ಸೆ.16ರವರೆಗೆ ಪ್ರತಿದಿನ ಸಾಯಂಕಾಲ 6.30ರಿಂದ ರಾತ್ರಿ 11ರವರೆಗೆ ಪ್ರದರ್ಶಿಸಲಾಗುವುದು.
ಸೆ.7ರಂದು ಗಣಪತಿಯ ಪ್ರತಿಷ್ಠಾಪನೆಯನ್ನು ವಿಜೃಂಭಣೆಯಿಂದ ಮಾಡಲಾಗುವುದು ಮತ್ತು ಸಾಯಂಕಾಲ 6:30 ಗಂಟೆಗೆ ಮಹಾ ಮಂಗಳಾರತಿ ನೆರವೇರುವುದು. 11ನೇ ದಿನ, ಸೆ.17ರಂದು, ಸಂಜೆ ಪ್ರಸಾದಗಳ ಲಿಲಾವು ಮತ್ತು ಮಂಗಲ ವಾದ್ಯವೃಂದ ಮೇಳೊಂದಿಗೆ ಶ್ರೀ ಗಣೇಶ ವಿಸರ್ಜನೆಯ ಕಾರ್ಯಕ್ರಮ ನೆರವೇರುವುದು. ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತ ಜನರು ಭಾಗವಹಿಸುವ ಮೂಲಕ ಗಣೇಶನ ಕೃಪೆಗೆ ಪಾತ್ರರಾಗಬೇಕಾಗಿ ಮಂಡಳಿಯ ಅಧ್ಯಕ್ಷ ಉದಯ ವರ್ಣೇಕರ ವಿನಂತಿಸಿದ್ದಾರೆ.



