ವಿಜಯಸಾಕ್ಷಿ ಸುದ್ದಿ, ಗದಗ : ನಾಡಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆರಂಭವಾದ ನಂತರ ಮಹಿಳೆಯರು ಸ್ವಸಹಾಯ ಸಂಘದಲ್ಲಿ ಉಳಿತಾಯ ಮಾಡಿ ಆರ್ಥಿಕವಾಗಿ ತಮ್ಮ ಜೀವನವನ್ನು ಸುಧಾರಿಸಿಕೊಂಡಿದ್ದಾರೆ ಎಂದು ಕನಕ ಭವನದ ಅಧ್ಯಕ್ಷ ಫಕೀರಪ್ಪ ಹೆಬಸೂರ ಹೇಳಿದರು.
ನಗರದ ಕನಕ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಗದಗ ತಾಲೂಕ, ಹಾಗೂ ತಾಲೂಕು ಮಟ್ಟದ ಪ್ರಗತಿಬಂಧು ಸ್ವಸಹಾಯ ಸಂಘದ ವತಿಯಿಂದ ಹಮ್ಮಿಕೊಂಡ ಒಕ್ಕೂಟದ ಪದಾಧಿಕಾರಿಗಳ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒಂದು ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರು ಪಡುವ ಕಷ್ಟ ಅಷ್ಟಿಷ್ಟಲ್ಲ. ಕೆಲವು ಪುರುಷರು ದುಡಿದ ಹಣವನ್ನು ದುಶ್ಚಟಗಳಿಗೆ ಹಾಳು ಮಾಡಿಕೊಳ್ಳುತ್ತಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ದಂಪತಿಗಳು ಕಂಡ ಗ್ರಾಮಾಭಿವೃದ್ಧಿ ಯೋಜನೆಯ ಕನಸಿನ ಪರಿಣಾಮ ಮಹಿಳೆಯರು ಸಂಘಗಳನ್ನು ಸ್ಥಾಪಿಸಿ ಹಣವನ್ನು ಉಳಿತಾಯ ಮಾಡಿ ಜೀವನವನ್ನು ಸುಧಾರಿಸಿಕೊಳ್ಳುತ್ತಿದ್ದಾರೆ. ಬ್ಯಾಂಕ್ಗಳು ಸಾಲ ನೀಡಲು ಹಿಂದೆ ಮುಂದೆ ನೋಡುವಾಗ ಧರ್ಮಸ್ಥಳ ಸಂಘವು ಸದಸ್ಯರಿಗೆ ಭದ್ರತೆ ನೀಡುತ್ತಿರುವದು ವಿಶೇಷವಾಗಿದೆ ಎಂದು ಹೇಳಿದರು.
ಕಾನಿಫ ಸಂಘದ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ ಮಾತನಾಡಿ, ನಾಡಿನಲ್ಲಿ ಹಲವಾರು ಶ್ರೀಮಂತ ಧಾರ್ಮಿಕ ಕೇಂದ್ರಗಳಿವೆ. ಆದರೆ, ಭಕ್ತರ ಹಣವನ್ನು ಭಕ್ತರ ಶ್ರೇಯೋಭಿವೃದ್ಧಿಗಾಗಿ ವಿನಿಯೋಗಿಸುವ ಧಾರ್ಮಿಕ ಸಂಸ್ಥೆಗಳಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಂದಾಗಿದೆ. ಈ ಸಂಘವು ಶುದ್ಧ ಕುಡಿಯುವ ನೀರು, ಮದ್ಯವರ್ಜನ ಶಿಬಿರ, ಕೆರೆ ಹೂಳೆತ್ತುವದು, ದೇವಸ್ಥಾನ ಜೀರ್ಣೋದ್ಧಾರ, ವಿದ್ಯಾರ್ಥಿಗಳಿಗೆ ಶಿಷ್ಯವೇತನ, ವೃದ್ಧರಿಗೆ ವೃದ್ಧಾಪ್ಯವೇತನ ವಿತರಣೆ ಸೇರಿದಂತೆ ಸ್ವಾವಲಂಬಿ ಬದುಕು ಕಂಡುಕೊಳ್ಳಲು ಮತ್ತು ಸುಸ್ತಿರ ಸಮಾಜ ನಿರ್ಮಿಸಲು ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕ ಯೋಗೀಶ ಎ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಭಿವೃದ್ಧಿ ನಿರೀಕ್ಷಕಿ ದ್ರಾಕ್ಷಾಯಣಿ ಪಾಟೀಲ, ಎಸ್ಬಿಐನ ಮುಖ್ಯ ವ್ಯವಸ್ಥಾಪಕರಾದ ಹರೀಶ ಮುಂತಾದವರು ಉಪಸ್ಥಿತರಿದ್ದರು. ತಾಲೂಕು ಕ್ಷೇತ್ರ ಯೋಜನಾಧಿಕಾರಿ ಸುರೇಂದ್ರ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿಲ್ಪಾ ಸ್ವಾಗತಿಸಿದರು. ಮಲ್ಲಿಕಾರ್ಜುನ ಗೌಡ ನಿರೂಪಣೆ ಮಾಡಿದರು. ಲಕ್ಷ್ಮೀ ವಂದಿಸಿದರು.
ಉದ್ಯಮಿ ಈಶ್ವರಸಾ ಮೇರವಾಡೆ ಮಾತನಾಡಿ, ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯು ಆರಂಭವಾಗಿ 15 ವರ್ಷಗಳು ಕಳೆದಿದ್ದು, ಜಿಲ್ಲೆಯಲ್ಲಿ 1.90 ಲಕ್ಷ ಸದಸ್ಯರು ಸೇರಿದಂತೆ ರಾಜ್ಯಾದ್ಯಂತ 65 ಲಕ್ಷ ಸದಸ್ಯರನ್ನು ಹೊಂದಿದ್ದಾರೆ. ಶೇ. 95ರಷ್ಟು ಮಹಿಳೆಯರು ಇರುವ ಈ ಸಂಘದಲ್ಲಿ ಸ್ವಾವಲಂಬಿ ಬದುಕಿಗೆ ಮುನ್ನುಡಿ ಬರೆದಿದ್ದಾರೆ ಎಂದು ಹೇಳಿದರು.