ಬೆಂಗಳೂರು: ದೇಶಾದ್ಯಂತ ‘ಹರ್ ಘರ್ ತಿರಂಗಾ’ ಅಭಿಯಾನ ನಡೆಸಲು ಬಿಜೆಪಿ ಮುಂದಾಗಿರುವ ಹಿನ್ನೆಲೆಯಲ್ಲಿ, ಬಿಜೆಪಿ ತನ್ನ ವೈಚಾರಿಕ ಮಾತೃಸಂಸ್ಥೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ರಾಷ್ಟ್ರಧ್ವಜಕ್ಕೆ ಸಂಬಂಧಿಸಿದ ಹಿಂದಿನ ನಿಲುವಿನ ಬಗ್ಗೆ ಜನರಿಗೆ ಸ್ಪಷ್ಟನೆ ನೀಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಅವರು, ಸ್ವಾತಂತ್ರ್ಯಾನಂತರ ಹಲವು ದಶಕಗಳ ಕಾಲ ನಾಗಪುರದಲ್ಲಿರುವ ಆರ್ಎಸ್ಎಸ್ನ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಲಿಲ್ಲ ಎಂಬ ಐತಿಹಾಸಿಕ ಉಲ್ಲೇಖಗಳನ್ನು ಪ್ರಸ್ತಾಪಿಸಿದರು.
1947ರ ಆಗಸ್ಟ್ 15ರಂದು ಹಾಗೂ 1950ರ ಜನವರಿ 26ರಂದು ಆರ್ಎಸ್ಎಸ್ ಕೇಂದ್ರ ಕಚೇರಿಯಲ್ಲಿ ತ್ರಿವರ್ಣ ಧ್ವಜ ಹಾರಿಸಲಾಗಿತ್ತು. ಬಳಿಕ 52 ವರ್ಷಗಳ ನಂತರ, 2002ರ ಜನವರಿ 26ರಂದು ನಾಗಪುರದ ಆರ್ಎಸ್ಎಸ್ ಕಚೇರಿಯಲ್ಲಿ ಮತ್ತೆ ರಾಷ್ಟ್ರಧ್ವಜ ಹಾರಿಸಲಾಯಿತು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
“ಪ್ರತಿಯೊಬ್ಬ ಭಾರತೀಯನಿಗೂ ದೇಶಭಕ್ತಿಯ ಪಾಠ ಹೇಳುವ ಮೊದಲು ಬಿಜೆಪಿ ಕೆಲವು ಪ್ರಶ್ನೆಗಳಿಗೆ ಉತ್ತರಿಸಬೇಕು. ತ್ರಿವರ್ಣ ಧ್ವಜದ ಬದಲಿಗೆ ಭಗವಾ ಧ್ವಜಕ್ಕೆ ಏಕೆ ಆದ್ಯತೆ ನೀಡಲಾಗಿತ್ತು? ಸ್ವಾತಂತ್ರ್ಯಾನಂತರ ಇಷ್ಟು ದೀರ್ಘಕಾಲ ಆರ್ಎಸ್ಎಸ್ನ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜ ಏಕೆ ಕಾಣಿಸಲಿಲ್ಲ?” ಎಂದು ಅವರು ಪ್ರಶ್ನಿಸಿದ್ದಾರೆ.
ರಾಷ್ಟ್ರಧ್ವಜವು ದೇಶದ ಸಾರ್ವಭೌಮತೆ, ಏಕತೆ ಮತ್ತು ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ಸಂಕೇತವಾಗಿದೆ. ಹೀಗಾಗಿ ರಾಷ್ಟ್ರಧ್ವಜದ ಬಗ್ಗೆ ದೇಶಭಕ್ತಿಯ ಮಾತುಗಳನ್ನು ಹೇಳುವವರು ತಮ್ಮ ಸಂಘಟನೆಯ ಹಿಂದಿನ ನಿಲುವು ಮತ್ತು ಆಚರಣೆಯ ಬಗ್ಗೆಯೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಚಿವರು ಹೇಳಿದ್ದಾರೆ.
ಪೂರ್ಣ ಸಮವಸ್ತ್ರದಲ್ಲಿ ಭಾರತೀಯ ತ್ರಿವರ್ಣ ಧ್ವಜ ಹಿಡಿದು ಸಾಗುವ ಆರ್ಎಸ್ಎಸ್ ಪಥಸಂಚಲನಗಳ ಬಗ್ಗೆ ಪ್ರಶ್ನಿಸಿರುವ ಅವರು, ದೇಶಭಕ್ತಿಯ ಪ್ರಮಾಣಪತ್ರಗಳನ್ನು ಇತರರಿಗೆ ನೀಡುವ ಮೊದಲು ಬಿಜೆಪಿ ಮತ್ತು ಆರ್ಎಸ್ಎಸ್ ತಮ್ಮದೇ ಇತಿಹಾಸವನ್ನು ಜನರಿಗೆ ವಿವರಿಸಬೇಕು ಎಂದು ಒತ್ತಾಯಿಸಿದ್ದಾರೆ.
ದೇಶಭಕ್ತಿ ಕೇವಲ ಘೋಷಣೆ ಅಥವಾ ಪ್ರಚಾರದ ವಿಷಯವಲ್ಲ. ಸಂವಿಧಾನ, ರಾಷ್ಟ್ರಧ್ವಜ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಗೌರವ ನೀಡುವುದರಲ್ಲೂ ಅದು ವ್ಯಕ್ತವಾಗಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.



