ರಾಯಚೂರು: ಜನರು ನೀಡಿರುವ ತೀರ್ಪಿನ ಬಗ್ಗೆ ನಾವು ಗೌರವ ಕೊಡಲೇಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಹರಿಯಾಣದಲ್ಲಿ ನಮ್ಮ ಸರ್ಕಾರ ಬಂದೇ ಬರುತ್ತದೆ ಎಂದು ನನಗೆ ಬಹಳ ಆತ್ಮವಿಶ್ವಾಸವಿತ್ತು. ಇನ್ನೂ ಕೂಡ ಫೈನಲ್ ರಿಸಲ್ಟ್ ಬಂದಿಲ್ಲ. ಜನರು ನಮಗೆ ತೀರ್ಪು ಕೊಟ್ಟಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಜನರ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ. ಹಿನ್ನಡೆ ಬಗ್ಗೆ ಪರಿಶೀಲನೆ ಮಾಡುತ್ತೇವೆ. ನಾವು ಎಲ್ಲಿ ಎಡವಿದ್ದೀವಿ ಎಂಬುದರ ಕುರಿತು ಪರಿಶೀಲನೆ ಮಾಡುತ್ತೇವೆ. ಆದರೆ ಜನರು ನೀಡಿರುವ ತೀರ್ಪಿನ ಬಗ್ಗೆ ನಾವು ಗೌರವ ಕೊಡಲೇಬೇಕು ಎಂದು ಪ್ರತಿಕ್ರಿಯಿಸಿದರು.
ನಾನು ಇಲ್ಲಿಗೆ ಡಿಸಿಎಂ ಆಗಿ ಬರಲಿಲ್ಲ, ಪಕ್ಷದ ಅಧ್ಯಕ್ಷನಾಗಿಯೂ ಬಂದಿಲ್ಲ. ರೈತನ ಮಗನಾಗಿ ಬಂದಿದ್ದೇನೆ. ನಾನು ಕೃಷಿಯಲ್ಲಿ ಹೆಚ್ಚು ತೊಡಗದಿದ್ದರೂ ನಮ್ಮವರಿಗೆ ಸ್ಪಂದಿಸುತ್ತೇನೆ. ಟಿಬಿ ಡ್ಯಾಂ ಗೇಟ್ ಕೊಚ್ಚಿ ಹೋದದ್ದನ್ನು ಒಂದೇ ವಾರದಲ್ಲೇ ಆಗಬೇಕು ಅಂತಾ ಕೆಲಸ ಮಾಡಿ ಮುಗಿಸಿದ್ದೇವೆ. ಆಗ ಬಿಜೆಪಿ ಸ್ನೇಹಿತರು ವಿಜಯೇಂದ್ರ, ಆರ್.ಅಶೋಕ್ ನನ್ನ ಟೀಕೆ ಮಾಡಿದ್ದರು. ಟೀಕೆಗಳು ಸಾಯುತ್ತವೆ, ಕೆಲಸ ಉಳಿಯುತ್ತವೆ. ಹಾಗೆಯೇ ಟೀಕೆಗಳು ಸತ್ತು ಹೋದವು. ಕೆಲಸ ಉಳಿದಿದೆ ಎಂದರು.