ವಿಜಯಸಾಕ್ಷಿ ಸುದ್ದಿ, ಗದಗ : ಸೋಮೇಶ ಹಿರೇಮಠ ಪ್ರತಿಷ್ಠಾನ, ವೆಂಕಟೇಶ ದಾಸರ ಅಭಿಮಾನಿ ಬಳಗ, ಪ್ರವೀಣ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಬಿಜೆಪಿ ಮುಖಂಡ, ಕೃತಪುರದ ಕಣ್ಮಣಿ ಅನಿಲ ಮೆಣಸಿನಕಾಯಿಯವರ 50ನೇ ವರ್ಷದ ಜನ್ಮದಿನದ ನಿಮಿತ್ತ ನಗರದ ಕಾಶಿ ವೈದಿಕ ಪಾಠಶಾಲೆಯಲ್ಲಿರುವ ಕಾಶಿ ವಿಶ್ವನಾಥ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ವೈದಿಕ ವಿದ್ಯಾರ್ಥಿಗಳಿಗೆ ಸಿಹಿ ಹಂಚುವುದರೊಂದಿಗೆ ಆಚರಿಸಲಾಯಿತು.
ಸೋಮೇಶ ಹಿರೇಮಠ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಸವಣ್ಣೆಯ್ಯ ಹಿರೇಮಠ ಮಾತನಾಡಿ, ಕೊರೋನಾ ಕಷ್ಟಕಾಲದಲ್ಲಿ ಮನುಕುಲಕ್ಕಾಗಿ ಭಿಕ್ಷೆ ಎಂಬ ನೂತನ ಕಾರ್ಯಕ್ರಮವನ್ನು ಅಳವಡಿಸಿಕೊಂಡು ನಮ್ಮ ಕೃತಪುರಕ್ಕೆ ಕರ್ಣನಾಗಿ ಬಂದು ಸಾವಿರಾರು ಜನರ ಹಸಿವನ್ನು ನೀಗಿಸಿದವರು ಅನಿಲ್ ಮೆಣಸಿಕಾಯಿ. ಅವರು ಮತದಾರರಿಂದಲೇ ಒಂದು ರೂಪಾಯಿ ನಾಣ್ಯ, ಒಂದು ರೊಟ್ಟಿಯನ್ನು ಪಡೆದುಕೊಂಡು ಮತ ಪಡೆದುಕೊಂಡವರಿಗೆ ರೊಟ್ಟಿಯ ಋಣ ಇರಬೇಕೆಂದು ಸಂದೇಶ ನೀಡಿದ್ದಾರಲ್ಲದೆ, ಗದಗ ನಗರವನ್ನು ಹಸಿರು ಪಟ್ಟಣವನ್ನಾಗಿಸಬೇಕು, ಕ್ರೀಡಾ ನಗರವನ್ನಾಗಿಸಬೇಕೆಂಬ ಅವರ ಕನಸಿನ ಸಂಕಲ್ಪವಷ್ಟೇ ಅಲ್ಲದೆ, ಗದಗ ಭಾಗದಲ್ಲಿ ಸಮನ್ವಯ ಮಂದಿರದ ಕನಸು ನನಸಾಗಲಿ. ಅವರ ಐವತ್ತನೇ ವರ್ಷದ ಜನ್ಮದಿನವನ್ನು `ಔದಾರ್ಯ ದಿನ’ವನ್ನಾಗಿ ನಮ್ಮ ಸಂಘಟನೆಗಳು ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ವೆಂಕಟೇಶ ಆರ್.ಬೇಲೂರು, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾದ ತಿಮ್ಮಣ್ಣ ಡೋಣಿ, ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರಾದ ಹನುಮಂತಸಾ ಶಿದ್ದಲಿಂಗ, ಗಂಗಾವತಿಯ ಪ್ರಥಮ ದರ್ಜೆ ಗುತ್ತಿಗೆದಾರರಾದ ಕೊಡ್ಲಿ, ಅಂಬರೀಶ್ ಕೆಂಚರಳ್ಳಿ ಉಪಸ್ಥಿತರಿದ್ದರು.
ಕಾರ್ಯಕ್ರಮವು ಕಾಶಿ ವೈದಿಕ ಪಾಠಶಾಲೆಯ ಮುಖ್ಯೋಪಾಧ್ಯಾಯರಾದ ವೇದಮೂರ್ತಿ ಶ್ರೀ ಗುರು ಸಿದ್ದಯ್ಯನವರು ಹಿರೇಮಠ ಇವರ ಸಮ್ಮುಖದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಮಹೇಶ ದಾಸರ, ಅನಿಲ ಮೆಣಸಿನಕಾಯಿಯವರು ಗದಗ ಭಾಗದ ಯುವಕರಿಗೆ ಕ್ರೀಡಾ ಸ್ಪೂರ್ತಿ ತುಂಬಿದ್ದಾರೆ. ಗದಗ ಜನರ ಜನಮನ ಗೆದ್ದ ಬಿ.ಶ್ರೀರಾಮುಲು ಅವರು ನಡೆಸಿಕೊಂಡು ಬರುತ್ತಿದ್ದ ಸಾಮೂಹಿಕ ವಿವಾಹಗಳಲ್ಲಿ ಮುಂದಾಳತ್ವ ವಹಿಸಿ ಯಶಸ್ವಿಗೊಳಿಸಿದ್ದಾರೆ. ಗದಗ ಹಬ್ಬದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜನಮನ ಸೆಳೆದಿದ್ದು, ಅವರು ಆರೋಗ್ಯಪೂರ್ಣವಾಗಿ ನೂರಕ್ಕು ಹೆಚ್ಚು ವರ್ಷಗಳ ಕಾಲ ಬಾಳಲಿ, ಅಧಿಕಾರ ಎಂಬುದು ಅವರನ್ನು ಹುಡುಕಿಕೊಂಡು ಬರಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು.