ವಿಜಯಸಾಕ್ಷಿ ಸುದ್ದಿ, ಗದಗ : ಸಾರ್ವಜನಿಕರಿಗೆ ಲಿಂಗಾನುಪಾತ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ರಾಧಾ ಜಿ.ಮಣ್ಣೂರು ಹೇಳಿದರು.
ನಗರದ ವಿದ್ಯಾದಾನ ಶಿಕ್ಷಣ ಸಮಿತಿಯ ಸಭಾಭವನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಇವರಗಳ ಸಂಯುಕ್ತಾಶ್ರಯದಲ್ಲಿ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯಡಿ ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಲಿಂಗಾನುಪಾತದ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಆಗಸ್ಟ್-2024ರ ಅಂತ್ಯಕ್ಕೆ ಲಿಂಗಾನುಪಾತವು 1000ಕ್ಕೆ 889 ಇದ್ದು, ನಾವೆಲ್ಲರೂ ಲಿಂಗಾನುಪಾತ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿ ಸುಧಾರಿಸಲು ಕ್ರಮ ವಹಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಿಷನ್ ಶಕ್ತಿ ಯೋಜನೆಯಡಿ ಮಹಿಳಾ ಸಬಲೀಕರಣ ಘಟಕಕ್ಕೆ ಭೇಟಿ ನೀಡಿ ಮಹಿಳೆಯರು ಮಾಹಿತಿಯನ್ನು ಪಡೆಯಬಹುದು ಎಂದು ವಿವರಿಸಿದರು.
ವಿದ್ಯಾದಾನ ಸಮಿತಿ ಬಿ.ಎಡ್ ಕಾಲೇಜು ಪ್ರಾಚಾರ್ಯರಾದ ಡಾ. ಗಂಗೂಬಾಯಿ ಪವಾರ ಮಾತನಾಡಿ, ಮಹಿಳೆಯರು ವಿವಿಧ ಇಲಾಖೆಯಡಿ ಲಭ್ಯವಿರುವ ಸೌಲಭ್ಯಗಳನ್ನು ಪಡೆದುಕೊಂಡು ಕಾರ್ಯಕ್ರಮದ ಉದ್ದೇಶವನ್ನು ಈಡೇರಿಸಬೇಕೆಂದು ತಿಳಿಸಿದರು.
ಬಾಲಕರ ಬಾಲಮಂದಿರ ಅಧೀಕ್ಷಕರಾದ ಗಿರಿಜಾ ದೊಡ್ಡಮನಿ ಮಾತನಾಡಿ, ಇಲಾಖೆಯಡಿ ಇರುವ ವಿವಿಧ ಯೋಜನೆಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಉಪ್ಪಿನ ಮಿಷನ್ ಶಕ್ತಿ ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಜಿಲ್ಲಾ ಸಂಯೋಜಕರಾದ ರಾಜೇಶ್ವರಿ ಮಾತನಾಡಿ, ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಕಾರ್ಯವ್ಯಾಪ್ತಿಯನ್ನು ವಿವರಿಸಿದರು.
ಸಭೆಯಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್ ಆಡಳಿತಾಧಿಕಾರಿ ಸುಜಾತಾ ಮಠಪತಿ, ವಕೀಲರಾದ ಖಾಜಾ ಮುನ್ನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗೂ ವಿದ್ಯಾದಾನ ಸಮಿತಿಯ ಸಿಬ್ಬಂದಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಶ್ರೀಧರ ಪೂಜಾರ ನಿರೂಪಿಸಿದರು, ಮಧು ಉಪ್ಪಾರ ವಂದಿಸಿದರು.