ಶರಣರ ವಚನಗಳಿಂದ ನೈತಿಕತೆ ವೃದ್ಧಿ : ಎಂ.ಎ. ರಡ್ಡೇರ

0
55th Shivanubhava Concert
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : 12ನೇ ಶತಮಾನದಲ್ಲಿನ ಶರಣರು ರಚಿಸಿದ ವಚನಗಳು ನಮ್ಮಲ್ಲಿ ನೈತಿಕತೆಯನ್ನು ಬೆಳೆಸುತ್ತವೆ. ವಚನಗಳನ್ನು ನಾವು ಸರಿಯಾಗಿ ಅರ್ಥ ಮಾಡಿಕೊಂಡರೆ ನಮ್ಮ ಬಾಳು ಬಂಗಾರವಾಗುತ್ತದೆ. ಶ್ರೀಗಳು ಏರ್ಪಡಿಸುವ ಶಿವಾನುಭವಗಳು ನಮಗೆ ವಚನಗಳನ್ನು ಅರ್ಥ ಮಾಡಿಸಲು ಸಹಾಯಕವಾಗುತ್ತವೆ ಎಂದು ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಎಂ.ಎ. ರಡ್ಡೇರ ಅಭಿಪ್ರಾಯಪಟ್ಟರು.

Advertisement

ನರೇಗಲ್ಲದ ಶ್ರೀ ಅನ್ನದಾನೇಶ್ವರ ಮಂಟಪದಲ್ಲಿ ಶ್ರೀ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿ ನರೇಗಲ್ಲ ಹಾಗೂ ಅಕ್ಷರ ಭಾರತ ಪ್ರತಿಷ್ಠಾನ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ 55ನೇ ಶಿವಾನುಭವ ಗೋಷ್ಠಿಯಲ್ಲಿ `ಜೀವನದಲ್ಲಿ ನೈತಿಕತೆಯ ಪಾತ್ರ’ ಕುರಿತು ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿಯವರ ಚರಿತ್ರೆಯಲ್ಲಿನ ಅಂತರಂಗ ಮತ್ತು ಬಹಿರಂಗ ಶುದ್ಧತೆಯ ಮಾರ್ಗಗಳನ್ನು ಅರಿತರೆ ಸಾಕು, ನಮ್ಮಲ್ಲಿ ನೈತಿಕತೆಯ ಅರಿವು ಆಗುತ್ತದೆ. ಶಿಕ್ಷಣ ಎಂಬುದು ತಪಃಶಕ್ತಿ ಇದ್ದಂತೆ ಅದನ್ನು ಪಡೆಯಲು ವಿದ್ಯಾರ್ಥಿಯ ಧನಾತ್ಮಕ ಚಿಂತನೆಯಿಂದ ಮಾತ್ರ ಸಾಧ್ಯ. ಸತ್ಯ, ಶಾಂತಿ, ಸಹಿಷ್ಣುತೆ, ಮೌಲ್ಯಯುತ ಶಿಕ್ಷಣ ಪಡೆಯಲು ಶರಣರ ವಚನಗಳು ಸಹಕಾರಿಯಾಗುತ್ತವೆ. ಪ್ರಾಥಮಿಕ ಹಾಗೂ ಪ್ರೌಢಾವಸ್ಥೆಯಲ್ಲಿನ ಮಕ್ಕಳ ಮನಸ್ಸು ಚಂಚಲತೆಯಿಂದ ಕೂಡಿರುತ್ತದೆ. ವಿದ್ಯಾರ್ಥಿಗಳು ಮನಸ್ಸನ್ನು ನಿಗ್ರಹಿಸಲು ತಮ್ಮ ತನು, ಮನಗಳ ಶಾಂತತೆಗಾಗಿ ಯೋಗ, ಧ್ಯಾನಗಳಿಂದ ಮನಸ್ವಾಸ್ಥ್ಯ ಪರಿಶುದ್ಧಗೊಳಿಸಬೇಕಾಗುತ್ತದೆ. ಅಂದಾಗ ಮಾತ್ರ ವಿದ್ಯಾದೇವತೆಯನ್ನು ವರಿಸಲು ಸಾಧ್ಯ. ಅದರಂತೆ ಶಿಕ್ಷಕರೂ ಸಹ ಮಕ್ಕಳ ಮನಸ್ಸಿನ ಚಲನವಲನಗಳನ್ನು ಗಮನಿಸಿ ತಮ್ಮ ವಾಕ್‌ಚಾತುರ್ಯದಿಂದ ತಮ್ಮತ್ತ ಸೆಳೆಯುವಂತೆ ಮಾಡುವದು ಅಷ್ಟೇ ಮುಖ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನರೇಗಲ್ಲ ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠರನ್ನು ಶ್ರೀಗಳು ಸನ್ಮಾನಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಎನ್.ಆರ್. ಗೌಡರ, ಡಾ. ಕೆ.ಬಿ. ಧನ್ನೂರ, ಡಾ. ಆರ್.ಕೆ. ಗಚ್ಚಿನಮಠ, ಎಮ್.ಎ. ಹಿರೆವಡೆಯರ, ಡಾ. ಎಲ್.ಎಸ್. ಗೌರಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಎಸ್.ಎನ್. ಹೂಲಗೇರಿ ಸ್ವಾಗತಿಸಿದರು. ಆರ್.ಕೆ. ಬಾಗವಾನ್ ನಿರೂಪಿಸಿದರು. ಎಸ್.ಬಿ. ಬೂದಿಹಾಳ ವಂದಿಸಿದರು.

ಸಾನ್ನಿಧ್ಯ ವಹಿಸಿದ್ದ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಪಾಲಕರು ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರ ನೀಡಿದರೆ ಶಾಲೆಯಲ್ಲಿ ಶಿಕ್ಷಕರು ಉತ್ತಮ ಶಿಕ್ಷಣ ನೀಡುತ್ತಾರೆ. ಇದರಿಂದ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜೊತೆಗೆ ಸಾಮಾನ್ಯ ಜ್ಞಾನ ಸಂಪಾದನೆಯಾಗುತ್ತದೆ. ಈ ಪರಿಕಲ್ಪನೆ ಪ್ರತಿಯೊಬ್ಬ ನಾಗರಿಕರಲ್ಲಿ ಮೂಡಿದಾಗ ಮಾತ್ರ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.


Spread the love

LEAVE A REPLY

Please enter your comment!
Please enter your name here